ಹಳಿಯಾಳ : ರಾಜ್ಯದಲ್ಲಿಯೇ ಕಸ ವಿಲೇವಾರಿಯಲ್ಲಿ ಪ್ರಶಸ್ತಿ ಪಡೆದಿರುವ ಹಳಿಯಾಳ ಪುರಸಭೆಗೆ ಗದಗ ಜಿಲ್ಲೆಯ ಪೌರಾಡಳಿತ ಇಲಾಖೆಯ ಅಧಿಕಾರಿ ಮತ್ತು ಪೌರ ಕಾರ್ಮಿಕರ ತಂಡವು ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿದರು.
ಗದಗ ಜಿಲ್ಲೆಯ ಗದಗ-ಬೇಟಗೇರಿ ನಗರಸಭೆ, ಲಕ್ಷ್ಮೇಶ್ವರ ಪುರಸಭೆ, ಶಿರಹಟ್ಟಿ ಪುರಸಭೆ, ಮುಂಡರಗಿ ಪುರಸಭೆ, ರೋಣ ಪುರಸಭೆ, ನರಗುಂದ ಪುರಸಭೆ, ಗಜೇಂದ್ರಗಡ ಪುರಸಭೆ ಮತ್ತು ನರೇಗಲ್ ಪಟ್ಟಣ ಪಂಚಾಯತ ಮತ್ತು ಮುಳಗುಂದ ಪಂಚಾಯತನ್ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರ ತಂಡವು ಪಟ್ಟಣದ ಆಶ್ರಯ ಬಡಾವಣೆ, ಹೊಸ ಚರ್ಚ ರಸ್ತೆ, ಕಸಬಾ ಗಲ್ಲಿ, ಕೆ.ಎಚ್.ಬಿ ಕಾಲೋನಿ, ಶೆಟ್ಟಿ ಗಲ್ಲಿ, ಐತಿಹಾಸಿಕ ಕೋಟೆ ಪ್ರದೇಶ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸಂಚಾರ ನಡೆಸಿ, ಇಲ್ಲಿಯ ಪುರಸಭೆಯ ಪೌರ ಕಾರ್ಮಿಕರು ಪ್ರತಿ ದಿನ ಮನೆ ಮನೆಗಳಿಗೆ ತೆರಳಿ ಕಸ ಪಡೆಯುವುದು, ಅದನ್ನು ವಿಂಗಡಿಸುವುದು, ಕಸ ವಿಲೇವಾರಿ ವಾಹನದ ಮಾರ್ಗಗಳ ವಿವರ, ಕಸವನ್ನು ಪಡೆಯುವಾಗ ಜನರೊಂದಿಗೆ ಅವರ ಒಡನಾಟ, ಕಸವನ್ನು ವಿಂಗಡಿಸಿ ನೀಡುವ ಕುರಿತು ಸಾರ್ವಜನಿಕರ ಆಸಕ್ತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಪಟ್ಟಣದ ವಿವಿಧ ಕೆರೆಗಳಿಗೆ ಭೇಟಿ ನೀಡಿದ ತಂಡವು ಕೆರೆಗಳ ಹೊಳೆತ್ತೆವುದು, ಅವುಗಳ ನೈರ್ಮಲ್ಯ ಮತ್ತು ಸ್ವಚ್ಚತೆಯ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಹಳಿಯಾಳ ಪುರಸಭೆಯ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು, ಪಟ್ಟಣದಲ್ಲಿ ನಿರ್ಮಿಸುತ್ತಿರುವ ಜಿ ಪ್ಲಸ್ ಟೂ ಮನೆಗಳ ಸಮುಚ್ಚಯ, ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮತ್ತು ವ್ಯವಸ್ಥೆ, ನೀರು ಪೊರೈಕೆಯ ನಿರ್ವಹಣೆಯ ಹೊಣೆ ಹೊತ್ತಿರುವ ಜೈನ್ ಇರಿಗೇಶನ್ ಸಿಸ್ಟಮ್ನ ಕಚೇರಿಗೆ ತೆರಳಿ ವಿಚಾರ ವಿನಿಮಯ ನಡೆಸಿದರು. ನಂತರ ಪಟ್ಟಣದಿಂದ ಮೂರು ಕಿಮೀ ಅಂತರದಲ್ಲಿರುವ ಬಾಬಣಿಕೊಪ್ಪ ಗ್ರಾಮದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕಕ್ಕೆ ತೆರಳಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಅಲ್ಲಿಯ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಿದರು.
ನಗರಸಭೆ, 6 ಪುರಸಭೆ ಸೇರಿದಂತೆ 2 ಪಟ್ಟಣ ಪಂಚಾಯತ್ಗೆ ಸೇರಿದ ಓರ್ವ ಪರಿಸರ ಇಂಜನಿಯರ್, 3 ಹಿರಿಯ ಆರೋಗ್ಯ ನಿರೀಕ್ಷಕರು, 4 ಕಿರಿಯ ಆರೋಗ್ಯ ಸಹಾಯಕರು, 10 ಜನ ನೈರ್ಮಲ್ಯ ಮೇಲ್ವಿಚಾರಕರು ಸೇರಿದಂತೆ 28 ಜನ ಪೌರ ಕಾರ್ಮಿಕರು ಆಗಮಿಸಿ ಕಸ ವಿಲೇವಾರಿ ಕುರಿತು ಅಧ್ಯಯನ ನಡೆಸಿದರು. ಇವರಿಗೆ ಹಳಿಯಾಳ ಪುರಸಭೆಯ ಕಿರಿಯ ಇಂಜನಿಯರ ಹರೀಷ್ ಗೌಡಾ, ಕಂದಾಯ ಅಧಿಕಾರಿ ಅಶೋಕಕುಮಾರ ಸಾಳೆನವರ, ನೈರ್ಮಲ್ಯಾಧಿಕಾರಿ ಪರಶುರಾಮ ಶಿಂಧೆ, ಸಿಬ್ಬಂದಿಗಳಾದ ರಾಮಚಂದ್ರ ಮೋಹಿತೆ, ರಮೇಶ ಮುಜುಕರ, ಚಂದ್ರು ನಿಂಗನಗೌಡಾ, ಗೋಪಾಲಸಿಂಗ್ ಬಿಂದ್ರಾಬಿನ್, ಪರಶುರಾಮ ಜುವೇಕರ, ಪರಶುರಾಮ ಕುರಿಯಾರ, ವಿಶ್ರಾಂತವ್ವಾ ಮಾದರ, ಸಂಜಯ ಮುಳೆ ಸೇರಿದಂತೆ ಮತ್ತೀತರರು ಮಾಹಿತಿ ನೀಡಿದರು.
Leave a Comment