ಬೆಂಗಳೂರು ಮೇ 21, 2019 – ರಾಜ್ಯದ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಜನೆ, ಮೇವಿನ ಕೊರತೆಯಾಗದಂತೆ ಎಲ್ಲಾ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರ ಜೊತೆಗೆ ಕಳೆದ ಸಾಲಿನ ಮುಂಗಾರಿನಲ್ಲಿ ಬೆಳೆ ನಷ್ಟ ಸಂತ್ರಸ್ತ ರೈತರ ಪಾಲಿನ ಪರಿಹಾರ ಹಣವನ್ನು ಕೂಡಲೇ ಪಾವತಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಕಂದಾಯ ಸಚಿವ, ಆರ್.ವಿ.ದೇಶಪಾಂಡೆ ನೀಡಿದ್ದಾರೆ.
ಜೊತೆಗೆ, ಜನ ಹಾಗೂ ಜಾನುವಾರುಗಳಿಗೆ ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ನಿಗಾ ವಹಿಸುವುದು. ಹೊಸ ಬೋರ್ವೆಲ್ಗಳನ್ನು ಕೊರೆಯುವ ಬದಲು ಖಾಸಗಿ ಬೋರ್ವೆಲ್ಗಳನ್ನು ಪಡೆಯಲು ಆದ್ಯತೆ ನೀಡುವುದು. ಕುಡಿಯುವ ನೀರಿನ ಬಾಕಿ ಬಿಲ್ಲನ್ನು ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಪಾವತಿಸುವುದು. ಕುಡಿಯುವ ನೀರು ಸರಬರಾಜು ಟ್ಯಾಂಕರ್ಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸುವ ಮೂಲಕ ದುರುಪಯೋಗ ತಡೆಗಟ್ಟುವುದು, ಮೇವು ಬ್ಯಾಂಕ್ ತೆರೆಯಲು ಆದ್ಯತೆ ನೀಡುವುದು, ಸರ್ಕಾರೇತರ ಸಂಸ್ಥೆಗಳು ಗೋಶಾಲೆ ತೆರೆಯಲು ಮುಂದೆ ಬಂದಲ್ಲಿ ಪ್ರೋತ್ಸಾಹಿಸುವುದು, ಹಸಿರು ಮೇವು ಬೆಳೆಸುವ ಸಲುವಾಗಿ ವಿತರಿಸಿದ ಮಿನಿ ಕಿಟ್ನ ಸಮರ್ಪಕ ಬಳಕೆ ಬಗ್ಗೆ ಪರಿಶೀಲಿಸುವುದು, ಜನ ಗುಳೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಸೂಕ್ತ ಉದ್ಯೋಗ ಸೃಜನೆ, ಸಕಾಲಿಕ ವೇತನ ಪಾವತಿ ಸೇರಿದಂತೆ ಎಲ್ಲಾ ಪರಿಹಾರ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ರಾಜ್ಯದ ಮಳೆ ಬೆಳೆ, ಬರ ಪರಿಸ್ಥಿತಿ ಕುರಿತು ಅವಲೋಕಿಸಲು ಮತ್ತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳನ್ನು ಕುರಿತು ವಿಧಾನಸೌಧದಲ್ಲಿ ತಮ್ಮ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಸಭೆ ನಡೆಸಿದ ಸಚಿವರು ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಕುರಿತಂತೆ ಈ ಕೆಳಕಂಡ ವಿವರಗಳನ್ನು ನೀಡಿದ್ದಾರೆ.
• ಹಸಿರು ಮೇವಿನ ಖರೀದಿ ದರ ಪ್ರತಿ ಟನ್ಗೆ ಈಗಿರುವ ರೂ.1,500/-ರಿಂದ ರೂ.3,000/-ಕ್ಕೆ ಹೆಚ್ಚಳ.
• ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಕುರಿ ಮತ್ತು ಮೇಕೆಗಳಿಗೆ ಜಂತುನಾಶಕ ಮತ್ತು ಲವಣ ಮಿಶ್ರಣ ಔಷಧಿ ಖರೀದಿಗಾಗಿ ರೂ.5.00 ಕೋಟಿ ಅನುದಾನ.
• ಅಂತರರಾಜ್ಯ ಮೇವು ಸಾಗಾಣಿಕೆಗೆ ಜುಲೈ 31, 2019ರವರೆಗೆ ನಿರ್ಬಂಧ.
• ವಿಜಯಪುರ ಜಿಲ್ಲೆಗೆ ತುರ್ತು ಬರ ಪರಿಹಾರ ಕ್ರಮಗಳಿಗಾಗಿ ಎಸ್.ಡಿ.ಆರ್.ಎಫ್. ನಿಧಿಯಿಂದ ರೂ.10.00 ಕೋಟಿ ಅನುದಾನ ಬಿಡುಗಡೆ.
• ಬಾಗಲಕೋಟೆ ಜಿಲ್ಲೆಯಲ್ಲಿನ ಬ್ಯಾರೇಜ್ ಗೇಟ್ ನಿರ್ವಹಣೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ರೂ.15.00 ಲಕ್ಷ ಅನುದಾನ.
:: 2 ::
• ಬೆಳೆ ಹಾನಿ ಹೊಂದಿರುವ ಜಮೀನಿನ ರೈತರು ಮರಣ ಹೊಂದಿದ್ದಲ್ಲಿ, ಫಲಾನುಭವಿ ರೈತರ ಸಕ್ಷಮ ವಾರಸುದಾರರಿಗೆ ಇನ್ಪುಟ್ ಸಬ್ಸಿಡಿ ವಿತರಿಸಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ.
• ಜಮೀನು ಜಂಟಿ ಖಾತೆಯಿದ್ದಲ್ಲಿ, ತನಿಖೆ ನಡೆಸಿ ಅರ್ಹ ಫಲಾನುಭವಿ ರೈತರಿಗೆ ಇನ್ಪುಟ್ ಸಬ್ಸಿಡಿ ವಿತರಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಂಬಂಧಪಟ್ಟ ತಹಶೀಲ್ದಾರರಿಗೆ ಅಧಿಕಾರ.
• ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ತಹಶೀಲ್ದಾರುಗಳಿಗೆ ಸಂಪೂರ್ಣ ಅಧಿಕಾರÀ.
• ಅಲ್ಲದೇ, 2018ರ ಮುಂಗಾರು ಹಂಗಾಮಿನಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಕೊಡಗು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿರುವುದನ್ನು ಮನಗಂಡು ಈ ಬಾರಿ ಮುಂಗಾರು ಆರಂಭಕ್ಕೆ ಮುನ್ನವೇ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 2 ಸುಸಜ್ಜಿತ ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಗಳನ್ನು ಮೇ 25, 2019ರಿಂದಲೇ ನಿಯೋಜಿಸಲಾಗುವುದು ಎಂದು ಸಚಿವ, ದೇಶಪಾಂಡೆ ತಿಳಿಸಿದ್ದಾರೆ.
• ಜೊತೆಗೆ, ಕೃಷಿ ಇಲಾಖೆಯು ಬಿತ್ತನೆ ಬೀಜ, ಗೊಬ್ಬರಗಳನ್ನು ಸಾಕಷ್ಟು ದಾಸ್ತಾನು ಇಟ್ಟುಕೊಂಡು ಮುಂಬರುವ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ರೈತರಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
**********
Leave a Comment