ಹಳಿಯಾಳ:- ರಾಜ್ಯದಲ್ಲಿಯ 67 ಸಕ್ಕರೆ ಕಾರ್ಖಾನೆಯ ಮಾಲೀಕರು ಸುಮಾರು 3 ಸಾವಿರ ಕೋಟಿಗಳಷ್ಟು ರೈತರ ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡಿರುವ ಕಾರಣ ರೈತರ ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿ ಜೂನ್ ದಿ.4 ರಂದು ಬೆಂಗಳೂರಿನ ವಿಧಾನ ಸೌಧದ ಎದುರು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ತಿಳಿಸಿದ್ದಾರೆ.
ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಭಾರತ ದೇಶವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ರೈತರೇ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೇ ಎಲ್ಲಾ ರಾಜಕೀಯ ಪಕ್ಷದವರು ಸೇರಿ ದೇಶದ ಬೆನ್ನೆಲುಬನ್ನೆ ಮುರಿದಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 67 ಸಕ್ಕರೆ ಕಾರ್ಖಾನೆಗಳಿವೆ. ಬಹುಪಾಲು ಸಕ್ಕರೆ ಕಾರ್ಖಾನೆಗಳ ಮಾಲೀಕರು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೇ ಆಗಿದ್ದಾರೆ. ಇವರೆಲ್ಲ ಸೇರಿ ಈವರೆಗೆ ರೈತರ ಒಟ್ಟೂ 3 ಸಾವಿರ ಕೋಟಿ ರೂಗಳಷ್ಟು ಬಾಕಿ ಉಳಿಸಿಕೊಂಡಿದ್ದು ಇವರೆಗೆ ರೈತರ ಬಾಕಿ ಹಣ ಜಮಾ ಮಾಡದೇ ರೈತರಿಗೆ ವಂಚಿಸಲಾಗಿದೆ ಎಂದು ಕಾಜಗಾರ ಕಿಡಿ ಕಾರಿದರು.
ಸಕ್ಕರೆ ಕಾರ್ಖಾನೆಗಳ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ದಿ.4 ರಂದು ಬೆಳಿಗ್ಗೆ 10 ಗಂಟೆಯಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬುರು ಶಾಂತಕುಮಾರ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧ ಎದುರಲ್ಲಿ ಬೃಹತ್ ಪ್ರತಿಭಟನಾ ಮೇರವಣಿಗೆ ಹಾಗೂ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಂಕರ ಮಾಹಿತಿ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಮ್.ವಿ.ಘಾಡಿ, ಎಸ್.ಕೆ.ಗೌಡಾ, ಕುಮಾರ ಬೋಬಾಟಿ, ಅಶೋಕ ಮೇಟಿ, ರಾಮದಾಸ ಬೆಳಗಾಂವಕರ, ಪುಂಡ್ಲಿಕ ಗೊಡಿಮನಿ ಮೊದಲಾದವರು ಇದ್ದರು.
Leave a Comment