ಹಳಿಯಾಳ:- ಜೈನ ಪರಂಪರೆಯ 50 ಜನ ತ್ಯಾಗಿ ವೃಂದ ಮುನಿಗಳು ಹಾಗೂ ಮಾತಾಜಿಗಳು ಹಳಿಯಾಳ ಪುರವನ್ನು ಪ್ರವೇಶಿಸಿದ್ದು ತಾಲೂಕಿನ ಹವಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯಲ್ಲಿ ತಂಗಿದ್ದಾರೆ. 2ನೇ ಬಾರಿಗೆ ಶ್ರೀಗಳು ಹಳಿಯಾಳಕ್ಕೆ ಭೇಟಿ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪ್ರಮುಖರಾದ ಧರಣೆಂದ್ರ ಶಾಸ್ತ್ರಿ ಹಾಗೂ ಮನೋಜ ಚಿಣಗಿ ಯಲ್ಲಾಪುರ ಮಾರ್ಗವಾಗಿ ಪಾದಯಾತ್ರೆಯ ಮೂಲಕ ಭಾಗವತಿ, ಸಾಂಬ್ರಾಣಿ, ಕೆಸರೊಳ್ಳಿ ಮಾರ್ಗವಾಗಿ ಜೈನ ಸಮುದಾಯದವರು ಹೆಚ್ಚಾಗಿ ವಾಸಿಸುವ ಹಾಗೂ ಜೈನ ಬಸದಿಗಳು ಇರುವ ಹಳಿಯಾಳದ ಹವಗಿ ಗ್ರಾಮಕ್ಕೆ ಮುನಿಗಳು ಭೇಟಿ ನೀಡಿದ್ದು ಬಸದಿಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೆರಿಸಲಾಯಿತು ಎಂದರು.
ಇನ್ನೂ ಶ್ರೀಗಳ ಪ್ರವಾಸದ ಕುರಿತು ಮಾಹಿತಿ ನೀಡಿದ ಅವರು 20ನೇ ಶತಮಾನದ ಪ್ರಥಮಾಚಾರ್ಯ ಆಚಾರ್ಯ ಶ್ರೀಶಾಂತಿಸಾಗರ ಮಹಾರಾಜರ ಪರಂಪರೆಯ ಪಂಚಮ ಪಟ್ಟಾಧೀಶ ಆಚಾರ್ಯ ವರ್ಧಮಾನಸಾಗರ ಮಹಾರಾಜರು 2 ವರ್ಷದ ಹಿಂದೆ ಉತ್ತರ ಭಾರತದಿಂದ ದಕ್ಷಿಣದ ಭಾರತದ ಕಡೆ ಆಗಮಿಸಿದ್ದರು. ಅವರ ನೇತೃತ್ವದಲ್ಲಿ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಮಹಾ ಮಸ್ತಕಾಭಿಷೇಕ ನೆರವೆಸಲಾಗಿತ್ತು.
ಆ ಬಳಿಕ ಶ್ರೀಗಳು ಮೂಡಬಿದ್ರೆ, ಕಾರ್ಕಳ, ವರಂಗಾ, ಹೊಂಬುಜ ಜೈನ ಮಠ, ಎನ್.ಆರ್.ಪುರ ಕ್ಷೇತ್ರ, ಜ್ವಾಲಾಮಾಲಿನಿ ಕ್ಷೇತ್ರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೊಂದಾ ಮಠದಲ್ಲಿ ತಂಗಿ ಅಲ್ಲಿಂದ ಯಲ್ಲಾಪುರ ಮಾರ್ಗವಾಗಿ ಹಳಿಯಾಳದ ಹವಗಿಗೆ ಆಗಮಿಸಿದ್ದಾರೆಂದರು.
ಆಚಾರ್ಯ ಶಾಂತಿಸಾಗರ ಮಹಾರಾಜರು ದಿಕ್ಷೆ ಪಡೆದ ಸ್ಥಳವಾದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯನ್ನಾಳ ಗ್ರಾಮದಲ್ಲಿ ಮಳೆಗಾಲದಲ್ಲಿ 4 ತಿಂಗಳ ಕಾಲ ವರ್ಧಮಾನಸಾಗರ ಮಹಾರಾಜರ ನೇತೃತ್ವದಲ್ಲಿ ಚಾತುರ್ಮಾಸ ನೆರವೆರಲಿದೆ. ಶುಕ್ರವಾರ ಶ್ರೀಗಳು ಮತ್ತೇ ಪ್ರಯಾಣ ಬೆಳೆಸಲಿದ್ದು ಬೆಳಗಾವಿ ಮೂಲಕ ಯನ್ನಾಳ ಗ್ರಾಮ ತಲುಪಲಿದ್ದಾರೆ ಎಂದು ತಿಳಿಸಿದರು.
25 ಜನ ದಿಗಂಬರ ತ್ಯಾಗಿ, 25ಜನ ಮಾತಾಜಿ ಒಟ್ಟೂ 50 ಜನ ತ್ಯಾಗಿ ವೃಂದ ಹಾಗೂ 150 ಜನ ಸೇವಾ ವೃಂದದವರು ಈ ಪಾದಯಾತ್ರೆಯಲ್ಲಿದ್ದಾರೆಂದು ಶಾಸ್ತ್ರಿ ಹಾಗೂ ಚಿಣಗಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
Leave a Comment