ಹಳಿಯಾಳ:- ಮಳೆಗಾಲ ಆರಂಭವಾಗುತ್ತಿದ್ದು ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಗಟಾರ-ಚರಂಡಿಗಳಲ್ಲಿಯ ಕಲ್ಮಶ, ಹೂಳನ್ನು ತೆಗೆಯಬೇಕು ಹಾಗೂ ಗಿಡಗಂಟಿಗಳ ಕಟಾವು ಮಾಡಿ ಸ್ವಚ್ಚಗೊಳಿಸುವ ಮೂಲಕ ಮಳೆಗಾಲದಲ್ಲಿ ಸಾರ್ವಜನೀಕರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿಂದಲೇ ಜಾರಿಗೊಳಿಸುವಂತೆ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಸೂಚಿಸಿದ್ದಾರೆ.
ಮುಂಗಾರು ಮಳೆ ಪೂರ್ವಾಭಾವಿ ಸ್ವಚ್ಚತೆ ಹಾಗೂ ಕುಂದು ಕೊರತೆಗಳ ಕುರಿತು ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ, ಚುನಾಯಿತ ಜನಪ್ರತಿನಿಧಿಗಳ, ಪತ್ರಕರ್ತರ ಹಾಗೂ ಸಂಘಸಂಸ್ಥೆಗಳ ಸಭೆಯಲ್ಲಿ ಮಾತನಾಡಿದ ಅವರು ಸ್ವಚ್ಚತೆಯನ್ನು ಕಾಪಾಡುವ ಮೂಲಕ ಪಟ್ಟಣದಲ್ಲಿ ಮಳೆಗಾಲದಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸುವುದು ಎಲ್ಲರ ಕರ್ತವ್ಯ ಎಂದರು.
ಇನ್ನೂ ತಾಲೂಕಾ ಕೇಂದ್ರವಾಗಿರುವ ಹಳಿಯಾಳ ಪಟ್ಟಣದಲ್ಲಿ ಹಲವೆಡೆ ಮತ್ತೇ ಕಸ-ಕಡ್ಡಿ-ಪ್ಲಾಸ್ಟಿಕ್-ತ್ಯಾಜ್ಯ ವಸ್ತುಗಳಿಂದ ಕಲ್ಮಶ ಮಲೀನ ವಾತಾವರಣ ಸೃಷ್ಠಿಯಾಗುತ್ತಿರುವ ಹಾಗೂ ಕಸಾಯಿ ಖಾನೆ ಸಮಸ್ಯೆಯ ಕುರಿತು ವಿವಿಧ ಸಂಘಟನೆಯವರು, ಪುರಸಭೆ ಸದಸ್ಯರು ಹಾಗೂ ಪತ್ರಕರ್ತರು ಸಭೆಯಲ್ಲಿ ತಹಶೀಲ್ದಾರ್ ಅವರ ಗಮನಕ್ಕೆ ತಂದು ಪುರಸಭೆ ತನ್ನ ಕಾರ್ಯದಲ್ಲಿ ಎಡವುತ್ತಿರುವ ಬಗ್ಗೆ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗುಳಗುಳೆ ಅವರು ಪುರಸಭೆಯ ಅಧಿಕಾರಿಗಳಿಗೆ ಕ್ರಮವಾಗಿ ಎಲ್ಲೆಡೆ ಭೆಟಿ ನೀಡಿ ಕ್ರಮ ಕೈಗೊಳ್ಳುವಂತೆ ಹಾಗೂ ಮುಂದಿನ ದಿನಗಳಲ್ಲಿ ಸ್ವಚ್ಚತೆ ಕಂಡು ಬರದೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ರಸ್ತೆಗಳಿಗೆ ಹಾನಿ ಮಾಡುವವರಿಂದ ಸಂಬಂಧಿಸಿದ ಇಲಾಖೆಯವರು ಹಾನಿಯ ಮೊತ್ತವನ್ನು ವಸೂಲಿ ಮಾಡಿ ರಸ್ತೆಗಳನ್ನು ಸುರಕ್ಷಿತವಾಗಿ ಇಡಬೇಕು ಇಲ್ಲವಾದಲ್ಲಿ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿಯು ಎಚ್ಚರಿಕೆ ನೀಡಿದ ತಹಶೀಲ್ದಾರರು ನಗರದಲ್ಲಿ ರಸ್ತೆಗಳ ಮೇಲೆ ಜಾನುವಾರುಗಳ ಸಮಸ್ಯೆ ಅಧಿಕವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಪುರಸಭೆಯವರು ಕೂಡಲೇ ಕೊಂಡವಾಡ ನಿರ್ಮಿಸಿ ಇಂತಹ ಜಾನುವಾರುಗಳನ್ನು ಸ್ಥಳಾಂತರಿಸುವಂತೆ ಸಲಹೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದಿ.8 ರಂದು ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಹಳಿಯಾಳ ಅಭಿಯಾನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಅಭಿಯಾನದಲ್ಲಿ ಪಟ್ಟಣದ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸಂಘ-ಸಂಸ್ಥೆಯವರು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ತಹಶೀಲ್ದಾರ್ ಹೇಳಿದರು.
ಡಿಜೆಗೆ ಪರವಾನಿಗೆ ಬಂದ್ :- ಸಭೆಯಲ್ಲಿ ಪಟ್ಟಣದಲ್ಲಿ ಸಾರ್ವಜನೀಕ ಸೇರಿದಂತೆ ವೈಯಕ್ತಿಕ ಎಲ್ಲ ಸಭೆ-ಸಮಾರಂಭಗಳಲ್ಲಿ ಕಾನೂನಿನ ನಿಯಮಾವಳಿ ಮೀರಿ ಡಿಜೆ ಸೌಂಡ ಸಿಸ್ಟೇಮ್ ಭಾರಿ ಕರ್ಕಶ ಶಬ್ದದ ಡಿಜೆಯನ್ನು ಬಳಸುತ್ತಿರುವ ಬಗ್ಗೆ ಎಲ್ಲರಿಂದ ಬಂದ ದೂರುಗಳನ್ನು ಆಲಿಸಿದ ತಹಶೀಲ್ದಾರ್ ಅವರು ಕ್ರಮ ಕೈಗೊಳ್ಳುವಂತೆ ಹಾಗೂ ಇನ್ನೂ ಮುಂದೆ ಡಿಜೆಗೆ ಪರವಾನಿಗೆ ನೀಡದಂತೆ ಸಿಪಿಐ ಅವರಿಗೆ ಆದೇಶಿಸಿದರು.
ಈ ಬಗ್ಗೆ ಮಾತನಾಡಿದ ಹಳಿಯಾಳ ಪೋಲಿಸ್ ವೃತ್ತ ನೀರಿಕ್ಷಕ(ಸಿಪಿಐ) ಲೋಕಾಪುರ ಅವರು ಇನ್ನೂ ಮುಂದೆ ಹಳಿಯಾಳದಲ್ಲಿ ಡಿಜೆ ಸೌಂಡ ಸಿಸ್ಟ್ಮ್ಗೆ ಅವಕಾಶ ನೀಡಲಾಗುವುದಿಲ್ಲ ಒಂದಾನುವೇಳೆ ನಿಯಮ ಮೀರಿ ಡಿಜೆ ಬಳಸಿರುವುದು ಕಂಡು ಬಂದರೇ ನಾಕಾ ಬಂದಿ ಮಾಡಿ ಅದನ್ನು ಜಪ್ತಿ ಪಡಿಸಿಕೊಂಡು ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಾಪಂ ಅಧಿಕಾರಿ ಡಾ.ರಮೇಶ ಕುರಿಯವರ, ಎಸಿಎಫ್ ಸಂತೋಷ ಕೆಂಚಪ್ಪನವರ, ಪುರಸಭೆ ಅಧಿಕಾರಿ ಹರೀಶ, ಪುರಸಭೆ ಸದಸ್ಯರು, ಜೀಜಾಮಾತಾ ಮಹಿಳಾ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಸಿಂಹಕೂಟ ಹಳಿಯಾಳ, ಹಿರಿಯ ನಾಗರೀಕರ ವೇದಿಕೆ ಸೇರಿದಂತೆ ಹಲವರು ಇದ್ದರು.
Leave a Comment