ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಳಿಯಾಳ ತಾಲೂಕಾ ದಲಿತ ಸಮುದಾಯದವರು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಹಳಿಯಾಳ ಪೋಲಿಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಆಕಸ್ಮಿಕ ವಿದ್ಯಮಾನವೊಂದರಲ್ಲಿ ಹಳಿಯಾಳದ ದಲಿತ ಸಮುದಾಯದವರು ಘೋಟ್ನೇಕರ ಅವರ ವಿರುದ್ದ ಆಕ್ರೋಶಗೊಂಡಿದ್ದು ಪ್ರತಿಭಟನೆಯನ್ನು ನಡೆಸಿದ್ದಾರೆ.
ಕೂಡಲೇ ಎಮ್.ಎಲ್.ಸಿ. ಘೊಟ್ನೇಕರ ಅವರನ್ನು ಸದಸ್ಯತ್ವದಿಂದ ಅಮಾನತ್ತಿನಲ್ಲಿಟ್ಟು ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ದಲಿತ ಸಮುದಾಯ ಮತ್ತು ಕರ್ತವ್ಯನೀರತ ಪೋಲಿಸರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ತಾಲೂಕಾ ದಲಿತ ಸಮುದಾಯದವರು ಕರ್ನಾಟಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹಾಗೂ ಪೋಲಿಸ್ ಇಲಾಖೆ ಡಿವೈಎಸ್ಪಿ ಮೋಹನಪ್ರಸಾದ ಅವರಿಗೆ ಸಲ್ಲಿಸಿದರು.
ಏನಿದು ಪ್ರಕರಣ ? :- ಪಟ್ಟಣದ ತಾನಾಜಿ ಗಲ್ಲಿಯ ನಿವಾಸಿ ಯುವತಿ ರೇವತಿ(19)(ಹೆಸರು ಬದಲಾಯಿಸಲಾಗಿದೆ) ಹಾಗೂ ಇದೆ ಊರಿನ ಯಲ್ಲಾಪುರ ನಾಕಾದ ರಹವಾಸಿ ಯುವಕ ವಿನೋದ ತೆಗ್ನಳ್ಳಿ(22) ಪರಸ್ಪರ ಪ್ರೀತಿಸಿ ಪಕ್ಕದ ಯಲ್ಲಾಪುರದ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಎಪ್ರಿಲ್ ತಿಂಗಳಿನಲ್ಲಿ ಮದುವೆ ನೊಂದಣಿ ಮಾಡಿಸಿಕೊಂಡಿದ್ದರು. ಅಲ್ಲದೇ ಜೂನ್ 9 ರವಿವಾರ ಇಬ್ಬರು ಮನೆ ಬಿಟ್ಟು ಪರಾರಿಯಾಗಿದ್ದರು.
ಈ ಪ್ರಕರಣದ ಇತ್ಯರ್ಥ ಮಾಡಿಕೊಡುವಂತೆ ಹುಡುಗಿ ಮನೆಯ ಪಾಲಕರು ಘೋಟ್ನೇಕರ ಅವರನ್ನು ಕೇಳಿದಾಗ ತಮ್ಮ ನೆರೆಯವರೇ ಆಗಿರುವ ಕಾರಣಕ್ಕೆ ಹಳಿಯಾಳ ಪೋಲಿಸ್ ಠಾಣೆಗೆ ಆಗಮಿಸಿದ್ದ ಘೋಟ್ನೇಕರ ಯಾರ ಮಾತು ಕೇಳದೆ ಮೊಂಡುತನ ಮಾಡುತ್ತಿದ್ದ ಹುಡುಗಿಗೆ ಸಿಟ್ಟಿನ ಭರದಲ್ಲಿ ಬೈದಿದ್ದು ಈ ಸಂದರ್ಭದಲ್ಲಿ ಹುಡುಗನ ಕಡೆಯಿಂದ ಆಗಮಿಸಿದ್ದ ದಲಿತ ಸಮುದಾಯದವರು ಹಾಗೂ ಪೋಲಿಸ್ ಅಧಿಕಾರಿಗಳಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಮನವಿಯಲ್ಲಿ ಏನಿದೆ :- ದಲಿತ ಸಮುದಾಯದವರು ಸಲ್ಲಿಸಿರುವ ಮನವಿಯಲ್ಲಿ ಘೋಟ್ನೇಕರ ಅವರು ಹಳಿಯಾಳ ಪೋಲಿಸ್ ಠಾಣೆಗೆ ಏಕಾಏಕಿ ಆಗಮಿಸಿ ಕರ್ತವ್ಯ ನೀರತ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಠಾಣೆಗೆ ಬಂದಿದ್ದ ಎಲ್ಲ ದಲಿತ ಸಮುದಾಯದ ಜನರನ್ನು ಅವ್ಯಾಚ್ಯ ಶಬ್ದಗಳಿಂದ ಬೈದು ಹಳಿಯಾಳ ಬಂದ್ ಮಾಡಿಸುತ್ತೇನೆಂದು ಬೇದರಿಕೆ ಹಾಕಿದ್ದಾರೆಂದು ಗಂಭೀರವಾಗಿ ಆರೋಪಿಸಲಾಗಿದೆ.
ಮನವಿ ಸಲ್ಲಿಸುವಾಗ ದಲಿತ ಸಮುದಾಯದ ಪ್ರಮುಖರಾದ ವಕೀಲರಾದ ಮೇಘರಾಜ ಮೇತ್ರಿ, ಪುರಸಭೆ ಸದಸ್ಯ ಸಂತೋಷ ಘಟಕಾಂಬಳೆ, ಯಲ್ಲಪ್ಪಾ ಹೊನ್ನೊಜಿ, ಹನುಮಂತ ಹರಿಜನ, ಫಕಿರ ಚಲವಾದಿ, ರಾಯಪ್ಪಾ ಹೊಂಗಲ, ಹನುಮಂತ ಚಲವಾದಿ, ಕಿರಣ ಭಜಂತ್ರಿ, ನವೀನ ತೆಗನಳ್ಳಿ, ಕುಮಾರ, ರವಿ, ಮಂಜುನಾಥ ಚಲವಾದಿ, ಆಕಾಶ, ಕಿರಣ, ಈಶ್ವರ, ಅನಿಲ, ವಿನಾಯಕ ಮೊದಲಾದವರು ಇದ್ದರು.
ಘಟನೆಯ ಕುರಿತು ಹಳಿಯಾಳದಲ್ಲಿ ಉಹಾಪೋಹದ ಸುದ್ದಿಗಳು ಹರಡುತ್ತಿದ್ದಂತೆ ಹಾಗೂ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಠಾಣೆಯ ಬಳಿ ಜನರು ತಂಡೊಪತಂಡವಾಗಿ ಆಗಮಿಸುತ್ತಿದ್ದರು. ಕೂಡಲೇ ಪೋಲಿಸರು ಹೆಚ್ಚಿನ ಪೋಲಿಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಆದರೇ ಯುವಕ-ಯುವತಿಯ ಪ್ರೇಮ ಪ್ರಕರಣ ಇತ್ಯರ್ಥದ ವಿಷಯ ವಿಷಯಾಂತರವಾಗಿ ಇನ್ನೊಂದು ರೀತಿಯ ಗಂಭೀರ ತೀರುವು ಪಡೆದಿರುವುದು ಪೋಲಿಸ್ ಇಲಾಖೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Leave a Comment