ಹಳಿಯಾಳ:- ತಮ್ಮ ಸಮಾಜದ ಹುಡುಗಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮದುವೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹಿಸಿ ರಜಪೂತ ಸಮಾಜದಿಂದ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸುವ ನಿರ್ಣಯವನ್ನು ಮಾಡಲಾಗುತ್ತಿದೆ ಎಂದು ರಜಪೂತ ಸಮಾಜದ ಮುಖಂಡ ಹುಬ್ಬಳ್ಳಿಯ ಉಮೇಶ ಅಂಗಡಿ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಬುಧವಾರ ಸಮಸ್ತ ಸಮಾಜ ಬಾಂಧವರಿಂದ ಶಿವಾಜಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ರಜಪೂತ ಸಮಾಜಕ್ಕೆ ಸೇರಿದ ಮುಗ್ದ ಹುಡುಗಿಯನ್ನು ಅನ್ಯ ಜಾತಿಯ ಹುಡುಗ ಪ್ರೇಮ ಮೋಹದಲ್ಲಿ ಸಿಲುಕಿಸಿ ಪಾಲಕರ ಒಪ್ಪಿಗೆಯಿಲ್ಲದೇ ಮದುವೆ ಮಾಡಿಕೊಂಡು ಕುಟುಂಬದವರಿಗೆ ನೋವನ್ನುಂಟು ಮಾಡಿದ್ದಾನೆಂದು ಆರೋಪಿಸಿದರು. ಇದರಿಂದ ಕುಟುಂಬದವರಿಗೆ ತೀವೃ ಆಘಾತ ಉಂಟಾಗಿದ್ದು ಹುಡುಗನು ಹುಡುಗಿಯ ಆಸ್ತಿ ಲಪಟಾಯಿಸಲು ಈ ರೀತಿ ಮಾಡಿದ್ದಾನೆಂದು ಅವರು ಗಂಭೀರ ಆಪಾದನೆ ಮಾಡಿದರು.
ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಮಾತನಾಡಿ ತಾವು ತಪ್ಪು ಮಾಡುವುದಿಲ್ಲ ಹಾಗೂ ಎಷ್ಟೇ ಸುಳ್ಳು ಪ್ರಕರಣ ದಾಖಲಿಸಿದರು ತಾವು ಹೆದರುವುದಿಲ್ಲ. ಮೊದಲಿನಿಂದಲೂ ತಾವು ಹೋರಾಟದ ಜೀವನದಲ್ಲಿ ಬೆಳೆದು ಬಂದಿದ್ದು ಈಗಲೂ ಹೋರಾಟದ ಮೂಲಕ ಎಲ್ಲವನ್ನು ಎದುರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಲವು ಮುಖಂಡರು ಇತ್ತೀಚೆಗೆ ವಿದ್ಯಾರ್ಥಿಗಳು ಪ್ರೇಮ ಜಾಲದಲ್ಲಿ ಸಿಲುಕಿ ಹೆಚ್ಚಾಗುತ್ತಿರುವ ನಾಪತ್ತೆ ಪ್ರಕರಣಗಳ ಬಗ್ಗೆ ಮತ್ತು ಹೆಣ್ಣು ಮಕ್ಕಳ ಪಾಲಕರ ಆಸ್ತಿ ಲಪಟಾಯಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಕರಣಗಳಲ್ಲಿ ಪಾಲಕರು ವಿನಾಃಕಾರಣ ಪೋಲಿಸ್ ಠಾಣೆ ಅಲೆಯುತ್ತಿರುವುದನ್ನು ಮನಗೊಂಡು ತಾಲೂಕಿನ ಹಿರಿಯ ಅಧಿಕಾರಿಗಳು, ಪ್ರಾಂಶುಪಾಲರು ಇತರ ಅಧಿಕಾರಿಗಳ ಸಭೆ ನಡೆಸಿ ಇನ್ನು ಮುಂದೆ ತಾಲೂಕಿನಲ್ಲಿ ಈ ತರಹದ ಪ್ರಕರಣಗಳು ಮರುಕಳಿಸದಂತೆ ತಡೆಯುವ ಬಗ್ಗೆ ಸಭೆ ನಡೆಸಿ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧಿಸುವಂತೆ ಸೂಚಿಸಿದ್ದು ಇದು ಘೋಟ್ನೇಕರ ಅವರು ಎಲ್ಲ ವರ್ಗದ ಜನರಿಗಾಗಿ ಮಾಡುತ್ತಿರುವ ಸಾಮಾಜಿಕ ಕಾಳಜಿಯನ್ನು ಎತ್ತಿ ತೊರಿಸುತ್ತದೆ. ಆದರೇ ಕೆಲವರು ವಿನಾಃಕಾರಣ ಘೋಟ್ನೇಕರ ಅವರ ವಿರುದ್ದ ದೂರು ನೀಡಿರುವುದು ಖಂಡನೀಯ ಎಂದರು.
ರಜಪೂತ ಹುಡುಗಿ ಹಾಗೂ ದಲಿತ ಸಮುದಾಯದ ಹುಡುಗನ ಪ್ರೇಮ ಪ್ರಕರಣದ ಇತ್ಯರ್ಥದ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಹಾಗೂ ದಲಿತ ಸಮಾಜದವರ ನಡುವಿನ ಮನಸ್ತಾಪದ ಘಟನೆಯು ಪಟ್ಟಣದಲ್ಲಿ ತೀವೃ ಸ್ವರೂಪ ಪಡೆದಿದ್ದು, ಬೂದಿಮುಚ್ಚಿದ ಕೆಂಡದ ವಾತಾವರಣ ಸೃಷ್ಠಿಯಾಗಿರುವ ಕಾರಣ ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಪೋಲಿಸ್ ಬಿಗಿ ಬಂದೋಬಸ್ತ ಏರ್ಪಡಿಸಲಾಗಿದೆ.
ಬುಧವಾರ ನಡೆದ ಪ್ರತಿಭಟನೆಗೆ 2 ಡಿವೈಎಸ್ಪಿ, 5 ಸಿಪಿಐ, 7 ಪಿಎಸ್ಐ, 3 ಜಿಲ್ಲಾ ಮೀಸಲು ಸಶಸ್ತ್ರ ಪಡೆಯ ವಾಹನಗಳು ಸೇರಿದಂತೆ 150 ಜನ ಪೋಲಿಸರನ್ನು ಬಂದೋಬಸ್ತಗೆ ನಿಯೋಜಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದರು.
Leave a Comment