ಹಳಿಯಾಳ:- ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರ ವಿರುದ್ದ ಸುಳ್ಳು ಮತ್ತು ದ್ವೇಷಪೂರಿತ ಆಪಾದನೆ ಮಾಡಿರುವವರ ಹಾಗೂ ಪಟ್ಟಣದಲ್ಲಿ ಶಾಂತತಾ ಭಂಗ ಮಾಡಲು ಪ್ರಯತ್ನಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಹಳಿಯಾಳ ತಾಲೂಕಿನ ಸಮಸ್ತ ಸಮಾಜ ಬಾಂಧವರು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಸಿದರು.
ಸಮಸ್ತ ಸಮಾಜದವರನ್ನೊಳಗೊಂಡು ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಭಾಗವಹಿಸಿದ್ದ ಪ್ರತಿಭಟನಾ ಮೇರವಣಿಗೆಯು ಪಟ್ಟಣದ ಸಂಗೋಳ್ಳಿ ರಾಯಣ್ಣಾ(ಅರ್ಬನ್ ಬ್ಯಾಂಕ್) ವೃತ್ತದಿಂದ ಮುಖ್ಯಬೀದಿ ಮೂಲಕ ಮಿನಿ ವಿಧಾನ ಸೌಧದ ಎದುರಿಗಿರುವ ಶೀವಾಜಿ ವೃತ್ತಕ್ಕೆ ಆಗಮಿಸಿ ಸಮಾರೋಪಗೊಂಡಿತು. ಮೇರವಣಿಗೆ ಉದ್ದಕ್ಕೂ ಶಾಲಾ, ಬಾಲಕಿಯರ ಹಾಗೂ ಮಹಿಳಾ ದೌರ್ಜನ್ಯದ ವಿರುದ್ದ ಘೊಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಲಾಯಿತು. ಮನವಿಯ ಪ್ರತಿಗಳನ್ನು ಮುಖ್ಯಮಂತ್ರಿ, ಸಚಿವ ದೇಶಪಾಂಡೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೂ ರವಾನಿಸಲಾಗಿದೆ.
ಮನವಿಯಲ್ಲಿ ದಿ.11 ರಂದು ಪಟ್ಟಣದ ತಾನಾಜಿ ಗಲ್ಲಿಯ ರಜಪೂತ ಮನೆತನದ ಹುಡುಗಿ ಹಾಗೂ ಯಲ್ಲಾಪೂರ ನಾಕಾದ ದಲಿತ ಸಮುದಾಯದ ಯುವಕನ ಪ್ರೇಮ ಪ್ರಕರಣದ ಇತ್ಯರ್ಥಕ್ಕೆ ಸಂಬಂಧಿಸಿದಂತೆ, ಸಮಾಜ ಬಾಂಧವರ ವಿನಂತಿಗೆ ಓಗೊಟ್ಟು ಠಾಣೆಗೆ ಆಗಮಿಸಿದ್ದ ಘೊಟ್ನೇಕರ ಅವರು ಹುಡುಗಿಯನ್ನು ಉದ್ದೇಶಿಸಿ ಒಬ್ಬ ಹಿರಿಯ ವ್ಯಕ್ತಿಯಾಗಿ ಬುದ್ದಿವಾದ ಹೇಳುವಾಗ ನೀನು ಬೇರೆ ಎಸ್.ಸಿ ಜಾತಿಯವನ ಜೋತೆ ಓಡಿಹೋಗಲು ನಾಚಿಕೆ ಆಗೋದಿಲ್ಲ, ನಿನ್ನ ತಂದೆ ತಾಯಿಗೆ ಎಷ್ಟು ನೋವಾಗುತ್ತದೆ.
ಸ್ವಜಾತಿ ಬಿಟ್ಟು ಎಸ್ಸಿ ಜಾತಿಯವನ ಜೋತೆ ಹೋಗುವ ಅಗತ್ಯತೆ ಏನಿತ್ತು ಎಂದು ಹುಡುಗಿಗೆ ಕೇಳಿರುತ್ತಾರೆ ವಿನಃ ಯಾವುದೇ ಸಮಾಜವನ್ನು ಉದ್ದೇಶಿಸಿ ನಿಂದನೆ ಮಾಡಿದ್ದು ಇರುವುದಿಲ್ಲ ಎಂದು ಮನವಿಯಲ್ಲಿ ಸ್ಪಷ್ಟಣೆ ನೀಡಿರುವ ಪ್ರತಿಭಟನಾಕಾರರು ಠಾಣೆಯಲ್ಲಿದ್ದ ಮೇಘರಾಜ ಮೇತ್ರಿ ಎನ್ನುವ ದಲಿತ ವ್ಯಕ್ತಿಯು ಇದನ್ನು ತಿರುಚಿ ಅಪಾರ್ಥ ಮಾಡಿ ಘೋಟ್ನೇಕರ ಮೇಲೆ ವಿನಾಕಾರಣ ಅಪವಾದ ಹೊರಿಸಿ ವಿಷಯಾಂತರ ಮಾಡಿ ಮುಗ್ದ ದಲಿತ ಜನರ ದಾರಿ ತಪ್ಪಿಸಿದ್ದು ಘೋಟ್ನೇಕರ ವಿರುದ್ದ ಸುಳ್ಳು ದೂರು ನೀಡಲಾಗಿದೆ ಎಂದಿದ್ದಾರೆ.
ಈ ಘಟನೆ ಸಮಸ್ತ ಸಮಾಜ ಬಾಂಧವರಿಗೆ ತೀವೃ ಬೇಸರವನ್ನುಂಟು ಮಾಡಿದೆ. ಹೆಣ್ಣು ಓಡಿಹೋದ ಮನೆಯವರ ನೋವು-ಅವಮಾನ ಆ ಮನೆಯವರಿಗೆ ಗೊತ್ತು. ಮತ್ತೇ ಇದೇ ರೀತಿಯ ಘಟನೆಗಳು ಮರುಕಳಿಸಿದರೇ ಜಾತಿ-ಜಾತಿಗಳಲ್ಲಿ ವೈಷಮ್ಯವುಂಟಾಗಿ ಶಾಂತಿಪ್ರೀಯ ಹಳಿಯಾಳದಲ್ಲಿ ಅಶಾಂತಿ ವಾತಾವರಣ ಉಂಟಾಗಿ ಸಾಮರಸ್ಯ ಕಳೆದುಹೋಗುವ ಸಂಭವವಿರುತ್ತದೆ. ಕಾರಣ ಕೂಡಲೇ ಸುಳ್ಳು ಮತ್ತು ದ್ವೇಷಪೂರಿತ ಆಪಾದನೆ ಮಾಡಿರುವವರ ಹಾಗೂ ಪಟ್ಟಣದಲ್ಲಿ ಶಾಂತತಾ ಭಂಗ ಮಾಡಲು ಪ್ರಯತ್ನಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಊಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಜೀಜಾಮಾತಾ ಮಹಿಳಾ ಸಂಘಟನೆಯ ಮಂಗಲಾ ಕಶೀಲಕರ, ದಲಿತ ಸಂಘಟನೆಯ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೊಳ್ಳಿ, ಹುಡುಗಿ ಮನೆಯ ಉಮೇಶ ಅಂಗಡಿ, ರಜಪೂತ ಕುಟುಂಬದವರು, ಶ್ರೀನಿವಾಸ ಘೋಟ್ನೇಕರ, ಎಲ್.ಎಸ್.ಅರಿಶೀನಗೇರಿ, ಸುರೇಶ ಶಿವಣ್ಣವರ, ಬಾಳಕೃಷ್ಣ ಶಹಾಪುರಕರ, ಶಿವಪುತ್ರ ನುಚ್ಚಂಬ್ಲಿ, ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ, ಗುಲಾಬಷಾ ಲತಿಫನವರ, ಅಲೀಂ,ಅಜರ ಬಸರಿಕಟ್ಟಿ, ಮಹಮ್ಮದಲಿ ಜಂಗುಬಾಯಿ, ಯಲ್ಲಪ್ಪಾ ಮಾಲವನಕರ, ಅನಿಲ ಚವ್ವಾಣ, ವಿಠ್ಠಲ ಮೊದಲಾದವರು ಇದ್ದರು.
Leave a Comment