ಹಳಿಯಾಳ:- ತನಗೆ ರಾಜಕೀಯ ಬೆಂಬಲವಿದೆ, ತಾನು ಹಳಿಯಾಳ ಪುರಸಭಾ ಸದಸ್ಯನಿದ್ದೇನೆ ಎಂದು ಬೆದರಿಕೆ ಹಾಕುತ್ತಾ ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೇದರಿಕೆ ಹಾಕಿದ್ದಾನೆಂದು ಹಳಿಯಾಳ ಪುರಸಭೆ ಕಾಂಗ್ರೇಸ್ ಸದಸ್ಯ ಸುರೇಶ ಯಲ್ಲಪ್ಪಾ ವಗ್ರಾಯಿ ವಿರುದ್ದ ಹಳಿಯಾಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಳಿಯಾಳ ತಾಲೂಕಿನ ಅಮ್ಮನಕೊಪ್ಪ ನಿವಾಸಿ ಹಾಗೂ ನ್ಯಾಯವಾದಿಯಾಗಿರುವ ಮೇಘರಾಜ ರಾಮಪ್ಪಾ ಮೇತ್ರಿ ಎನ್ನುವವರು ಪುರಸಭಾ ಸದಸ್ಯನ ವಿರುದ್ದ ಗಂಭೀರ ಆರೋಪ ಮಾಡಿ ಹಳಿಯಾಳ ಠಾಣೆಗೆ ದೂರು ಸಲ್ಲಿಸಿದ್ದಾರೆ.
ವಕೀಲ ಮೇಘರಾಜ ಸಲ್ಲಿಸಿರುವ ದೂರಿನಲ್ಲಿ ದಿ.11 ರಂದು ಮಧ್ಯಾಹ್ನ 2.30 ಗಂಟೆಯಿಂದ 3.30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಪಕ್ಷಗಾರ ವಿನೋದ ತೆಗನಳ್ಳಿ ಈತನ ಮದುವೆ ಪ್ರಕರಣ ಸಲುವಾಗಿ ಹಳಿಯಾಳ ಠಾಣೆಯಲ್ಲಿದ್ದಾಗ, ಆಪಾದಿತ ಸುರೇಶ ವಗ್ರಾಯಿ ತನ್ನ 10 ಜನ ಸಂಗಡಿಗರೊಂದಿಗೆ ಪೋಲಿಸ್ ಠಾಣೆಗೆ ಬಂದು ತಾನು ಎಮ್.ಎಲ್.ಸಿ ಆಪ್ತನಿದ್ದು ಪುರಸಭೆ ಸದಸ್ಯನಿದ್ದೇನೆ. ತನಗೆ ಸಾಕಷ್ಟು ರಾಜಕೀಯ ಬೆಂಬಲವಿದೆ. ನಿನ್ನಂತಹ ಹಲವಾರು ವಕೀಲರನ್ನು ನೋಡಿದ್ದೇನೆ. ನಿನ್ನ ಕೊಟು ತೆಗೆದು ಹೊರಗಡೆ ಬಾ ನಿನ್ನನ್ನು ಒಂದು ಕೈ ನೋಡಿಯೇ ಬಿಡುತ್ತೇನೆ ಎಂದು ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.
ದಿ.11 ರಂದು ಸಂಜೆ 4.30ರ ಸುಮಾರಿಗೆ ವಿಧಾನ ಪರಿಷತ್ ಸದಸ್ಯರ ಕಚೇರಿಗೆ ನುಗ್ಗಿ ಧಮಕಿ ಹಾಗೂ ಜೀವ ಬೇದರಿಕೆ ಹಾಕಿರುವುದಾಗಿ ತನ್ನ ವಿರುದ್ದ ಸುಳ್ಳು ದೂರು ನೀಡಲಾಗಿದೆ ಎಂದು ಮೇಘರಾಜ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಇನ್ನೂ ರಜಪೂತ ಹುಡುಗಿ ಹಾಗೂ ದಲಿತ ಸಮುದಾಯದ ಹುಡುಗಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಏಕೆ ತಲೆ ಹಾಕುತ್ತಿರುವಿ ಎಂದು ಧಮಕಿ ಹಾಗೂ ಜೀವ ಬೇದರಿಕೆ ಹಾಕಿದ ಕುರಿತು ಹಳಿಯಾಳ ಪುರಸಭೆ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ ದಿ.11 ರಂದು ವಕೀಲ ಮೇಘರಾಜ ಮೇತ್ರಿ ಹಾಗೂ 10 ಜನರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಒಟ್ಟಾರೆ ಹಳಿಯಾಳ ಠಾಣೆಯಲ್ಲಿ ಪ್ರೇಮ ವಿವಾಹ ಪ್ರಕರಣದ ಇತ್ಯರ್ಥಕ್ಕೆ ಆಗಮಿಸಿದವರ ನಡುವೆ ನಡೆದ ಘಟನೆ ರಾಜಕೀಯ ತಿರುವು ಪಡೆದಿರುವುದು ಕಂಡು ಬರುತ್ತಿದ್ದು ದೂರು ಪ್ರತಿದೂರುಗಳು ದಾಖಲಾಗಿವೆ.
ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ ಸೃಷ್ಠಿಯಾಗಿರುವ ಕಾರಣ 2 ಡಿವೈಎಸ್ಪಿ ಸೇರಿದಂತೆ ಜಿಲ್ಲೆಯ ಹಾಗೂ ಪಕ್ಕದ ಜಿಲ್ಲೆಯಿಂದ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಪಟ್ಟಣದಲ್ಲಿ ಭಾರಿ ಬಿಗಿ ಪೋಲಿಸ್ ಬಂದೋಬಸ್ತ ಏರ್ಪಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
Leave a Comment