ಹಳಿಯಾಳ:- ತಾಲೂಕಿನ ಮುತ್ತಲಮುರಿ ಗ್ರಾಮದಿಂದ ಕಿವಡೆಬೈಲ್ ಗ್ರಾಮಕ್ಕೆ ಹೊಲದಲ್ಲಿ ತಾತ್ಕಾಲಿಕ ದಾರಿ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿ ಮುತ್ತಲಮುರಿ ಭಾಗದ ನೂರಾರು ರೈತರು ಸೋಮವಾರ ಹಳಿಯಾಳದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
3 ಟ್ರಾಕ್ಟರ್, ಟ್ರಾಕ್ಸ್ ಹಾಗೂ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದ ರೈತರು ಜಮೀನುಗಳಿಗೆ ಓಡಾಡಲು ಶಾಶ್ವತ ದಾರಿ ಮಾಡಿಕೊಟ್ಟು ರೈತರ ದಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ದಾರಿ ಸಮಸ್ಯೆಯ ಬಗ್ಗೆ ಈ ಹಿಂದೆ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ದಾರಿ ಮಾಡಿಕೊಡುವ ವ್ಯವಸ್ಥೆ ಮಾಡಿದ್ದರು. ಆದರೇ ದಾರಿ ಮಧ್ಯ ಜಮೀನು ಇರುವ ರೈತರು ಸದ್ಯ ತಕರಾರು ಮಾಡಿ ದಾರಿ ಬಂದ್ ಮಾಡಿದ್ದರಿಂದ ಬಿತ್ತನೆಯ ಸಮಯದಲ್ಲಿ ದಾರಿ ಸಂಪೂರ್ಣ ಬಂದ ಆಗಿದ್ದರಿಂದ ರೈತರಿಗೆ ಸಾಕಷ್ಟು ಅನಾನುಕೂಲವಾಗಿದೆ ಎಂದು ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಕೊನೆಗೂ ರೈತರ ಮನವೊಲಿಸುವಲ್ಲಿ ಯಶಸ್ವಿಯಾದ ಗುಳಗುಳಿ ಅವರು ಶಾಶ್ವತ ಪರಿಹಾರ ಕಲ್ಪಿಸಿ ಕೊಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಸ್ಥಗೀತಗೊಳಿಸಿದರು. ಆದರೇ ದಿ.18 ರಂದೇ ಸಮಸ್ಯೆಗೆ ಪರಿಹಾರ ಒದಗಿಸಬೇಕು ಇಲ್ಲವಾದಲ್ಲಿ ದಿ.19 ರಂದು ತಮ್ಮ ದನಕರುಗಳೊಂದಿಗೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ರೈತರು ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ರೈತರಾದ ಯಲ್ಲಪ್ಪಾ ಮಾಂಗಲಿ, ಅರುಣ ಮಿರಾಶಿ, ನಾರಾಯಣ ಕೆಸರೆಕರ, ನಾಮದೇವ ಮಿಶಾಳೆ, ರಾಮದೇವ ಕಡೊಲ್ಕರ, ಬಾಳುಂದ್ರಿ, ರಾಮಾ ಪವಾರ, ಅಶೋಕ ಜೈನ, ಮಂಗಳು ಜಾಧವ, ನಂದಾ ಗೌಡಾ, ಅರ್ಜುನ , ಪರಶುರಾಮ, ಯಲ್ಲಪ್ಪಾ ಗೌಡಾ ಮೊದಲಾದವರು ಇದ್ದರು.
Leave a Comment