ಹೊನ್ನಾವರ , ಮಾರ್ ಥೋಮ ಸೆಂಟ್ರಲ್ ಸ್ಕೂಲನಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳ ಪ್ರಾರ್ಥನೆಯ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕರಾದ ವಂದನೀಯ ಫಾದರ ಜೋನ್ ಉಮ್ಮನ್, ಖಜಾಂಚಿ ಕೆ.ಸಿ.ವರ್ಗೀಸ್, ಶೈಕ್ಷಣಿಕ ನಿರ್ದೇಶಕರಾದ ಎಚ್.ಎನ್.ಪೈ, ಪ್ರಾಂಶುಪಾಲರಾದ ತೆರೆಸಾ ಫರ್ನಾಂಡಿಸ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಫಾದರ ಜೋನ್ ಉಮ್ಮನ್ ಎಲ್ಲ ವಿದ್ಯಾರ್ಥಿ/ನಿಯರ ತಂದೆಯವರಿಗೆ ಶುಭ ಕೋರಿದರು. ಕೆ.ಸಿ.ವರ್ಗೀಸ್ ಮಾತನಾಡಿ “ಅಪ್ಪನೆಂದರೆ ಶಕ್ತಿ, ಅಪ್ಪನೆಂದರೆ ಮಮತೆ-ಭಕ್ತಿ ಎಲ್ಲವೂ ಹೌದು. ನನಗೆ ಬುದ್ಧಿ ಬೆಳವಣಿಗೆ ಆದಾಗಿನಿಂದ ತಿಳಿದ ಸತ್ಯವೆಂದರೆ ಕಷ್ಟಪಟ್ಟು ಹೊಲದಲ್ಲಿ ದುಡಿಯುತ್ತಿದ್ದ ನನ್ನ ರೈತಾಪಿ ತಂದೆಯೇ ನನ್ನ ಹೀರೊ. ನನ್ನ ತಂದೆಗೆ ಕೋಟಿ ಕೋಟಿ ನಮನಗಳು” ಎಂದು ಹೇಳಿ ಭಾವುಕರಾದರು.
ಮುಖ್ಯ ಅತಿಥಿಗಳಾದ ಎಚ್.ಎನ್.ಪೈ ಮಾತನಾಡಿ ಮಾತೃದೇವೋಭವ, ಪಿತೃದೇವೋಭವ ತಾಯಿಯ ನಂತರದ ಸ್ಥಾನ ತಂದೆಗೆ, ಸದಾ ಮಡದಿ ಮಕ್ಕಳು ಹೆತ್ತವರ ಭವಿಷ್ಯಕ್ಕಾಗಿ ತನ್ನನ್ನು ಮುಡುಪಿಟ್ಟು ಬೆಳಗುವ ಕರ್ಪೂರದ ಹಣತೆ ತಂದೆ. ಅವರು ಸುಖ ದುಃಖಗಳ ಸಮಚಿತ್ತದ ಸರದಾರ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅಪ್ಪಂದಿರಾದ ಮಂಜುನಾಥ ನೇಸರ್ಗೀ, ರಾಜೇಶ ನಾಯ್ಕ, ಶಂಕರ ಗೌಡ, ಎಲ್.ಆರ್.ನಾಯ್ಕ, ಪ್ರಭಾಕರ ನಾಯ್ಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
Leave a Comment