ಹಳಿಯಾಳ :- ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ 5 ವರ್ಷದ ಹೆಣ್ಣು ಮಗುವಿನೊಂದಿಗೆ ಊರು-ಬಿದಿ ಸಂಚರಿಸುತ್ತಾ ಭಿಕ್ಷಾಟನೆ ಮಾಡುತ್ತಿದ್ದ ತಂದೆ ಹಾಗೂ ಮಗಳನ್ನು ರಕ್ಷಿಸಿ, ಮಗುವನ್ನು ಕಾರವಾರದಲ್ಲಿರುವ ಮಕ್ಕಳ ರಕ್ಷಣಾ ಕೇಂದ್ರಕ್ಕೆ ರವಾನಿಸುವ ಮೂಲಕ ಮಾನವೀಯತೆ ಮೆರೆದ ವಿದ್ಯಮಾನ ಗುರುವಾರ ಪಟ್ಟಣದಲ್ಲಿ ನಡೆದಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿರುವ ಚಿಕ್ಕೋಡಿ ಪಟ್ಟಣದ ಘಾಲೆ ಗಲ್ಲಿಯ ನಿವಾಸಿ ಅಬ್ದುಲ್ ಮಹ್ಮದ ಮಕಾನದಾರ ತನ್ನ 5 ವರ್ಷದ ಹೆಣ್ಣು ಮಗು ಬೀಬಿಫಾತೀಮಾಳೊಂದಿಗೆ ಕಳೆದ 10-15 ದಿನಗಳಿಂದ ಹಳಿಯಾಳ ದಾಂಡೇಲಿ ಮತ್ತು ಜೋಯಿಡಾ ತಾಲೂಕಿನಲ್ಲಿ ಸುತ್ತಾಟ ನಡೆಸಿ ಭಿಕ್ಷಾಟಣೆಯಲ್ಲಿ ತೊಡಗಿದ್ದ ಅಲ್ಲದೇ ಮಗುವಿಗೆ ಅನವಶ್ಯಕವಾಗಿ ಕಿರುಕುಳ ನೀಡುತ್ತಿದ ಎಂದು ಹೇಳಲಾಗಿದೆ.
ರಾತ್ರಿಯಾಗುತ್ತಿದ್ದಂತೆಯೇ ಸನಿಹದ ಸಾರ್ವಜನಿಕ ಸ್ಥಳಗಳಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು ಈ ಬಗ್ಗೆ ಮಾಹಿತಿ ಪಡೆದ ಇಲ್ಲಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿಗಳು ಮಂಗಳವಾರದಿಂದ ತಂದೆ ಮಗಳ ಹುಡಕಾಟದಲ್ಲಿ ತೊಡಗುವುದಲ್ಲದೇ ಕಳೆದ ರಾತ್ರಿ ದಾಂಡೇಲಿಯಲ್ಲಿ ಆತನ ಸುಳಿವು ಪತ್ತೆ ಮಾಡಿದ್ದರು.
ಗುರುವಾರ ಮುಂಜಾನೆ ತಂದೆ ಮಗಳು ಹಳಿಯಾಳ ಬಸ್ಸ್ಟಾಂಡ್ಗೆ ಆಗಮಿಸಿದಾಗ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಅವರಿಗೆ ಅನ್ನ-ನೀರು ಪೊರೈಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ರವಾನಿಸುವುದರ ಮೂಲಕ ಮಾನವೀಯತೆ ಮೆರೆದರು.
ಸಿಡಿಪಿಒ ಅಂಬಿಕಾ ಕಟಕೆ ಅವರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಾಚರಣೆಗೆ ಇಳಿದ ಮೇಲ್ವಿಚಾರಕಿರಾದ ರಾಜೇಶ್ವರಿ ಗವಿಮಠ ಹಾಗೂ ಅನುಸೂಯಾ ರೇಡೆಕರ ಅವರು ಪೋಲಿಸರ ಸಹಾಯದಿಂದ ತಂದೆ ಮಗುವನ್ನು ವಶಕ್ಕೆ ಪಡೆದು ಅವರಿಗೆ ಆಪ್ತ ಸಮಾಲೋಚನೆ ನಡೆಸಿ, ಅಂತಿಮವಾಗಿ ಅವರ ಮನವೊಲಿಸಿ ಮಗುವನ್ನು ಕಾರವಾರದ ಮಕ್ಕಳ ರಕ್ಷಣಾ ಕೇಂದ್ರಕ್ಕೆ ಹಸ್ತಾಂತರಿಸುವಲ್ಲಿ ಯಶ್ವಸಿಯಾದರು.
ಕರವೇಯ ಬಸವರಾಜ ಬೆಂಡಿಗೇರಿಮಠ, ಜಯಕರ್ನಾಟಕದ ವಿಲಾಸ ಕಣಗಲಿ, ಪರಶುರಾಮ ಬಗರಿಕರ, ದಾಂಡೇಲಿ ಸ್ವಾಂತನ ಕೇಂದ್ರದ ಆಪ್ತ ಸಮಾಲೋಚಕಿ ಬಸವಂತವ್ವ ನಾಯಕ, ಪ್ರೊಬೇಶನರಿ ಪಿಎಸೈಗಳಾದ ಅಶೋಕಕುಮಾರ ಹಾಗೂ ಪ್ರಸನ್ನ ಎಸ್. ಇದ್ದರು.
Leave a Comment