ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರಕನ್ನಡ, ಕೃಷಿ ಇಲಾಖೆ ಮತ್ತು ಕೃಷಿಸಂಬಧಿತ ಇಲಾಖೆಯ ಸಹಯೋಗದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಕುಮುಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಹಳದೀಪುರ ಗ್ರಾಮ ಪಂಚಾಯತ ಸಭಾಭವನದಲ್ಲಿ ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಅಭಿಯಾನ ಗ್ರಾಮೀಣ ಭಾಗದ ರೈತರ ಮನೆಬಾಗಿಲಿಗೆ ಕೃಷಿ ಸೌಲಭ್ಯವನ್ನು ತಲುಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಧಿಕಾರಿಗಳು ಸರ್ಕಾರದ ಸೌಲಭ್ಯವನ್ನು ರೈತರಿಗೆ ತಲುಪಿಸುವ ಕೆಲಸವನ್ನು ಚುರುಕಾಗಿ ಮಾಡಬೇಕು. ರೇಷ್ಮೆ ಇಲಾಖೆಯು ತಾಲೂಕಿನಲ್ಲಿ ನಾಮವಕಾಸ್ಥೆಯಿಂದ ಕೂಡಿದೆ. ಇಲಾಖೆಯ ಸಮಸ್ಯೆ ಹಾಗೂ ಬೇಡಿಕೆಯನ್ನು ಜನಪ್ರತಿನಿಧಿಗಳಿಗೆ ತಲುಪಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಗ್ರಾಮದ ಹಲವು ವರ್ಷದ ಬೇಡಿಕೆಯನ್ನು ಇಂದು ಗಮನಕ್ಕೆ ತಂದಿರುದರಿಂದ ಸಮಸ್ಯೆ ಬಗೆಹರಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಜಿಲ್ಲೆಯ ಬಹುಮುಖ್ಯವಾದ ಇಲಾಖೆ ಕೃಷಿ ಇಲಾಖೆ ಆದರೂ ರೈತರ ನೆರವಿಗೆ ಧಾವಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಮುಂದಿನ ದಿನದಲ್ಲಾದರೂ ಆ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷರಾದ ಗುಣಮಾಲ ಜೈನ್ ಮಾತನಾಡಿ ಗ್ರಾಮದ ಅಭಿವೃದ್ದಿಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಹಕಾರ ಅಗತ್ಯ ಆ ನಿಟ್ಟಿನಲ್ಲಿ ಇರ್ವರು ಕಾರ್ಯನಿರ್ವಹಿಸಬೇಕಿದೆ. ರೈತ ಸಂಪರ್ಕ ಕೇಂದ್ರವನ್ನು ಹಳದೀಪುರದಲ್ಲಿ ಮರಳಿ ಸ್ಥಾಪಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಸಹಾಯಕ ಕೃಷಿ ನಿರ್ದೇಶಕರಾದರಾದ ಜಯರಾಮ ಹೆಬ್ಬಾರ ಮಾತನಾಡಿ ಇಲಾಖೆಯ ನಡಿಗೆ ರೈತನ ಮನೆ ಬಾಗಿಲಿಗೆ ಎನ್ನುವ ಧೈಯದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ್ದು 3 ಹೋಬಳಿಯ ಪ್ರತಿ ಗ್ರಾಮ ಪಂಚಾಯತಿಗೆ ಚಲಿಸುವ ವಾಹನ ಹೋಬಳಿಯ ಒಂದು ಕಡೆ ವಿಜ್ಞಾನಿಗಳು, ರೈತರು ಮತ್ತು ಅಧಿಕಾರಿಗಳ ನಡುವೆ ಸಂವಾದ ವಸ್ತು ಪ್ರದರ್ಶನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಟಿ.ಎಸ್.ಹೆಗಡೆ, ಸುರೇಶ ಶೆಟ್ಟಿ, ಉಪಾಧ್ಯಕ್ಷ ಗಣೇಶ ಪೈ, ಇಲಾಖೆಯ ಅಧಿಕಾರಿಗಳಾದ ಲಕ್ಷ್ಮೀ ದಳವಾಯಿ, ಎಂ.ಜಿ.ಗೌಡ, ಎಂ.ಎಸ್.ನಾಯ್ಕ, ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಲಕ್ಷ್ಮಿ ದಳವಾಯಿ ಸ್ವಾಗತಿಸಿ ಯುವಜನಸೇವಾ ಕ್ರೀಡಾದಿಕಾರಿ ಸುದೇಶ ನಾಯ್ಕ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಸಭೆ ಪ್ರಾರಂಭದಲ್ಲಿ ಬೆರಳಣಿಕೆಯಷ್ಟು ಹಾಜರಿದ್ದ ರೈತರ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಶಾಸಕರು ವಿವಿಧ ಇಲಾಖಾ ಅಧಿಕಾರಿಗಳ ಉಪಸ್ಥಿತಿಯನ್ನು ಪ್ರಶ್ನಿಸಿದರು. ರೈತರಿಂದ ಸಮಸ್ಯೆ ಬಗ್ಗೆ ವಿಚಾರಿಸಿದಾಗ ಸಮಸ್ಯೆಗಳ ಸುರಿಮಳೆಗೈದರು. ಹಳದೀಪುರದಲ್ಲಿ ನಿರ್ಮಿಸಿದ ರೈತಸಂಪರ್ಕ ಕೇಂದ್ರ ಕೃಷಿ ಇಲಾಖೆ ಕೇಂದ್ರ ಪಾಳು ಬಿದ್ದಿದೆ. ಭತ್ತದ ಬೆಲೆಗೆ ಉಪ್ಪು ನೀರು ಬಂದು ನಾಶವಾದರೂ ಇಲಾಖಾಧಿಕಾರಿಗಳು ತಲೆ ಹಾಕುವುದಿಲ್ಲ. 100 ಎಕರೆಗೂ ಅಧಿಕ ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕಳೆದ 10 ವರ್ಷದಿಂದ ರೈತ ಸಂಪರ್ಕ ಕೇಂದ್ರ ಪುನಃ ಸ್ಥಾಪಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಂದು ಅಧಿಕಾರಿಗಳು ಪೇಪರ್ ಕೃಷಿ ಅಭಿಯಾನಕ್ಕೆ ಬಂದಿದ್ದಾರೆ. ರೈತರಿಗೆ ಕಾರ್ಯಕ್ರಮದ ಕುರಿತು ಮಾಹಿತಿಯೇ ನೀಡಿಲ್ಲ. ಜನಪ್ರತಿನಿಧಿಗಳಿಗೆ 3 ದಿನದ ಮೊದಲು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Leave a Comment