ಹೊನ್ನಾವರ: ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಮಾಧ್ಯಮ ಪಾತ್ರ ಮಹತ್ವವಾದುದು' ಮಲೆನಾಡಿನ ಪತ್ರಕರ್ತರು ಇಲ್ಲಿನ ಸೌಂದರ್ಯರಾಶಿಯ ಸೊಬಗಿನಂತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ. ಹೇಳಿದರು. ಪಟ್ಟಣ ಪಂಚಾಯತಿ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಮತ್ತು ವನ್ಯಜೀವಿಗಳ ರಕ್ಷಣೆಗೆ ಯೋಜನೆಗಳನ್ನು ಸಿದ್ದಪಡಿಸಲು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು ಸಹಕಾರಿಯಾದ ಉದಾಹರಣೆಗಳಿವೆ. ಇಂದು ಪರಿಸರ ಮಾಲಿನ್ಯವಾಗುತ್ತಿದೆ; ಅರಣ್ಯ ಸಂಪತ್ತು ರಕ್ಷಣೆಯಾಗಬೇಕಿದೆ. ಇದಕ್ಕೆ ಪತ್ರಕರ್ತರ ಸಹಕಾರ ಬೇಕು. ಪತ್ರಿಕೋದ್ಯಮ ಬಹಳ ಕಷ್ಟಕರವಾದ ಕೆಲಸ. ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತ ಕೆಲಸ ಮಾಡುವ ಸ್ಥಿತಿಯಿರುತ್ತದೆ. ರಚನಾತ್ಮಕ ಕಾರ್ಯಗಳನ್ನು ನಡೆಸಲು ಪತ್ರಿಕಾ ದಿನಾಚರಣೆಯು ವೇದಿಕೆಯಾಗಿದೆ ಎಂದರು. ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿರುವ ಭಟ್ಕಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಮಾತನಾಡಿ,
ತಪ್ಪು ನಡೆದಾಗ ಎಚ್ಚರಿಸುವ, ಉತ್ತಮ ಕಾರ್ಯ ಮಾಡಿದಾಗ ಪ್ರೋತ್ಸಾಹಿಸಿದ ಮಾಧ್ಯಮರಂಗವು ನನ್ನ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದೆ’ ಎಂದರು.
ಸನ್ಮಾನ ಸ್ವೀಕರಿಸಿದ ದಿನೇಶ ಹೆಗಡೆ ಮಾತನಾಡಿ, `ಪತ್ರಿಕಾರಂಗವು ನಾಲ್ಕನೇ ಅಂಗವೆಂದು ಕರೆಸಿಕೊಂಡಿದೆ. ಶಾಸಕಾಂಗ, ಕಾರ್ಯಂಗ, ನ್ಯಾಯಾಂಗ ವ್ಯವಸ್ಥೆಯಲ್ಲಿರುವವರು ಸೂಕ್ತವಾದ ಸೌಲಭ್ಯಗಳನ್ನು ಪಡೆಯುತ್ತಾರೆ. ಪತ್ರಕರ್ತರಿಗೆ ನಿರ್ದಿಷ್ಟ ವೇತನ, ನಿವೃತ್ತಿ ಪಿಂಚಣಿ ಮುಂತಾದ ಸೌಲಭ್ಯಗಳಿಲ್ಲ. ಆದರೆ ಉಳಿದ ಮೂರು ರಂಗಗಳನ್ನು ಎಚ್ಚರಿಸುವ ಕೆಲಸವನ್ನು ಪತ್ರಿಕಾರಂಗ ಮಾಡುತ್ತಿದೆ’ ಎಂದರು. ಪತ್ರಿಕೋದ್ಯಮದಲ್ಲಿ ಸಾಧನೆಗೈದ ಹಿರಿಯ ಪತ್ರಕರ್ತರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರೆ ಯುವಪತ್ರಕರ್ತರಿಗೆ ಹೆಚ್ಚಿನ ಉತ್ಸಾಹ,ಹುಮ್ಮಸ್ಸು ಪಡೆಯುವಂತಾಗುತ್ತದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ಎಂ.ಜಿ.ಹೆಗಡೆ ಮಾತನಾಡಿದರು. ಕೃಷ್ಣಮೂರ್ತಿ ಹೆಬ್ಬಾರ ಸ್ವಾಗತಿಸಿದರು. ಗೋಪಾಲಕೃಷ್ಣ ಭಟ್ ಅತಿಥಿಗಳನ್ನು ಪರಿಚಯಿಸಿದರು. ಕೃಷ್ಣಮೂರ್ತಿ ಭಟ್ ಮತ್ತು ವಿಶ್ವನಾಥ ಸಾಲ್ಕೋಡ ಸನ್ಮಾನಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಎಚ್.ಎಂ.ಮಾರುತಿ ಧನ್ಯವಾದ ಸಮರ್ಪಿಸಿದರು. ಸತೀಶ ತಾಂಡೇಲ, ಗಜು ಗೋಕರ್ಣ ಮುರಳೀಧರ ಗಾಯತೊಂಡೆ, ಸುಧೀರ ಕಡ್ನೀರ, ಶ್ರೀಧರ ನಾಯ್ಕ ಪುಷ್ಪ ಮತ್ತು ನೆನಪಿನ ಕಾಣಿಕೆ ನೀಡಿದರು. ವೆಂಕಟೇಶ ಮೇಸ್ತ, ನಾಗರಾಜ ನಾಯ್ಕ ಖರ್ವಾ ನಿರ್ವಹಿಸಿದರು.
Leave a Comment