ಹಳಿಯಾಳ:- ಜೋಯಿಡಾ-ಅಂಬಿಕಾನಗರ ಭಾಗದಲ್ಲಿ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ಯವರು ಪ್ರವಾಹ ಸಂತ್ರಸ್ಥರಿಗೆ ಸ್ಪಂದಿಸದೆ, ನೆರವಾಗದೆ ನಿರ್ಲಕ್ಷ್ಯ ತಾಳಿದ್ದಾರೆಂದು ಅಲ್ಲಿಯ ನಿರಾಶ್ರಿತರು ಆರೋಪಿಸುತ್ತಿದ್ದು ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ನಡೆಸಿದ ತುರ್ತು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಿರಾಶ್ರಿತರ ಜೊತೆ ಸರಿಯಾಗಿ ಸ್ಪಂದಿಸದ ಕೆಪಿಸಿಯವರ ವರ್ತನೆಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಬಳಿ ಅಹವಾಲು ತೊಡಿಕೊಂಡಿದ್ದಾರೆಂದು ಹೇಳಿದ ಹೆಗಡೆ ಸಂಕಷ್ಟದಲ್ಲಿರುವವರ ಜೊತೆ ಬೆರೆತು ಕೆಲಸ ಮಾಡಿ ಹೊರತು ಸಂಘರ್ಷಕ್ಕೆ ಇಳಿಯಬೇಡಿ ಇಲ್ಲವಾದಲ್ಲಿ ಮುಂದೆ ಇದು ದೊಡ್ಡ ಸಮಸ್ಯೆಯಾಗಲಿದೆ ಎಂದು ಕೆಪಿಸಿಯವರಿಗೆ ಎಚ್ಚರಿಕೆ ನೀಡಿದರು.
ಹಳಿಯಾಳದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ವರುಣನ ಆರ್ಭಟಕ್ಕೆ ನದಿ ಪಾತ್ರದಲ್ಲಿ ನೆರೆ ಉಂಟಾಗಿದ್ದು ಇಲ್ಲಿ ಹಳಿಯಾಳ ತಾಲೂಕಾಡಳಿತ ನೆರೆ ಪಿಡಿತರೊಂದಿಗೆ ತಕ್ಷಣ ಸ್ಪಂದಿಸುತ್ತಿದ್ದು ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಅವರ ಕಾರ್ಯ ಶ್ಲಾಘನೀಯವಾಗಿದ್ದು ಪ್ರಕೃತಿ ವಿಕೋಪದ ಈ ಸಂದರ್ಭದಲ್ಲಿ ತಾಲೂಕಾಡಳಿತದ ಜೊತೆಗಾರರಾಗಿ ತಾವು ಕೆಲಸ ಮಾಡಲು ಸದಾ ಸಿದ್ದ ಎಂದು ಭರವಸೆ ನೀಡಿದ ಸುನೀಲ್ ಹೆಗಡೆ ಸುಮಾರು 700 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಪಕ್ಕದ ಜಿಲ್ಲೆಯ ಧಾರವಾಡದ ಹುಲಿಕೆರಿ ಕೆರೆಯ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಹಳಿಯಾಳದ ನದಿ ಪಾತ್ರಗಳಲ್ಲಿ ಅವಘಡಗಳು ಸಂಭವಿಸಿದವು ಎಂದರು.
ಪ್ರಕೃತಿ ವಿಕೋಪದಿಂದ ಹಾನಿಗಿಡಾಗಿರುವ ಕಟ್ಟ ಕಡೆಯ ನಾಗರಿಕನಿಗೂ ಪರಿಹಾರ ಸಿಗಬೇಕು ಎನ್ನುವ ಆಶಯ ತಮ್ಮದಾಗಿದೆ. ಅತಿಕ್ರಮಣದಾರರು ಮನೆ, ಮಠದ ಜೊತೆಗೆ ಬೆಳೆ ಹಾನಿಯನ್ನು ಅನುಭವಿಸಿದ್ದು ಅವರಿಗೂ ಪರಿಹಾರ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಹಾನಿಯ ಸಮರ್ಪಕ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಲು ಸಿದ್ದವಿದೆ ಎಂದು ತಿಳಿಸಿದರು.
ಸ್ಥಳೀಯ ಶಾಸಕರು ಚೆಕ್ ವಿತರಣೆ ಕಾರ್ಯಗಳನ್ನು, ಸಭೆಗಳನ್ನು ಮಾಡುವುದನ್ನು ಬಿಟ್ಟು ಜನರ ಬಳಿಗೆ ತೆರಳಿ ಅವರಿಗೆ ಸ್ಪಂದಿಸಲಿ ಎಂದರು. ಜನರು ಮೊದಲು ನಿಮ್ಮನ್ನು ರಕ್ಷಿಸಿಕೊಳ್ಳಿ ನಾವು ನಿಮ್ಮೊಂದಿಗಿದ್ದು ಆಶ್ರಯ ನೀಡುತ್ತೇವೆ ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಧೈರ್ಯ ತುಂಬಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ತಂಡ ಹಳಿಯಾಳದಲ್ಲಿ ಮಳೆಯಿಂದ ಉಂಟಾಗಿರುವ ನೆರೆ ಸಮೀಕ್ಷೆಗೆ ಶನಿವಾರ ಹಳಿಯಾಳಕ್ಕೆ ಆಗಮಿಸಲಿದ್ದು ಬೆಳಿಗ್ಗೆ ಅಧಿಕಾರಿಗಳ ಸಭೆ ನಡೆಸಿ ಬಳಿಕ ರಕ್ಷಣಾ ಕೇಂದ್ರಗಳು ಹಾಗೂ ನೆರೆ ಪಿಡಿತ, ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದ ಅವರು ಕೆನರಾ ಸಂಸದ ಅನಂತಕುಮಾರ ಹೆಗಡೆ ಭಾನುವಾರ ಹಳಿಯಾಳಕ್ಕೆ ಆಗಮಿಸಿ ನಿರಾಶ್ರಿತರನ್ನು ಭೇಟಿಯಾಗಿ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಅಧ್ಯಯನ ನಡೆಸಲಿದ್ದಾರೆಂದರು.
ಸಂಸದರು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಹಳಿಯಾಳದಿಂದ 25 ಕೀಮಿ ಅಂತರದಲ್ಲಿರುವ ಹುಲಿಕೇರಿ ಕೆರೆ ಒಡೆದು ಹೊಗುವ ಸಂಭವವಿರುವ ಕಾರಣ ಹಳಿಯಾಳದ ನದಿ ಪಾತ್ರದಲ್ಲಿ ಮತ್ತೇ ಪ್ರವಾಹ ಉಂಟಾಗುವ ಮೂನ್ಸೂಚನೆ ಇರುವ ಕಾರಣ ಹಳಿಯಾಳಕ್ಕೆ ಎನ್ಡಿಆರ್ಎಫ್ ತಂಡ ಹಾಗೂ ಅವಶ್ಯಕತೆ ಇದ್ದಲ್ಲಿ ಏರ್ಲಿಫ್ಟ್ ಮಾಡಲು ಮನವಿ ಮಾಡಿದ್ದು ಈ ತಂಡ ಆಗಮಿಸಲಿದೆ ಎಂದು ಕೂಡ ಸುನೀಲ್ ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪ್ರಮುಖರಾದ ಅನಿಲ ಮುತ್ನಾಳ, ವಿಲಾಸ ಯಡವಿ, ಸಂತೋಷ ಘಟಕಾಂಬಳೆ, ವಿಜಯ ಬೋಬಾಟಿ, ವಾಸು ಪೂಜಾರಿ ಮೊದಲಾದವರು ಇದ್ದರು.
Leave a Comment