ಹಳಿಯಾಳ :- ಹಾಡುಹಗಲೆ ತಮ್ಮ ಕೈಚಳ ತೊರಿಸಿರುವ ಯುವ ಕಳ್ಳರಿಬ್ಬರು ಪಟ್ಟಣದ ಬಸ್ ನಿಲ್ದಾಣ ಹಿಂಬದಿಯ ಆನೆಗುಂದಿ ಬಡಾವಣೆಯಲ್ಲಿಯ ಮನೆಯೊಂದಕ್ಕೆ ಕನ್ನ ಹಾಕಿ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿರುವ ವಿದ್ಯಮಾನ ಮಂಗಳವಾರ ನಡೆದಿದ್ದು ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಸ್ ನಿಲ್ದಾಣ ಹಿಂಬಾಗದ ಆನೆಗುಂದಿ (ಕೆಎಚ್ಬಿ) ಕಾಲೋನಿ ಎಂತಲೂ ಕರೆಯುವ ಬಡಾವಣೆಯಲ್ಲಿ ಘಟನೆ ನಡೆದಿದ್ದು ಪಂತಜಲಿ ಯೋಗ ಸಮಿತಿಯ ಕಮಲ್ ಸೀಕ್ವೆರಾ ಅವರ ಮಾಲಿಕತ್ವದ ತಳಮಹಡಿಯಲ್ಲಿ ಭಾಡಿಗೆಯಿಂದ ವಾಸಿಸುತ್ತಿದ್ದ ತಾಲೂಕಿನ ಬೆಳವಟಗಿ ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೇಸಿಲ್ಲಾ ರೋಜಾರಿಯೊ ವಾಸಿಸುವ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ.
ಮಂಗಳವಾರ ಮಧ್ಯಾಹ್ನ ಕಾರ್ಯ ನಿಮಿತ್ತ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದನ್ನು ಗಮನಿಸಿ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು 2 ಗಂಟೆಯ ಸುಮಾರಿಗೆ ಒಡೆದು ಮನೆಯ ಅಲ್ಮೆರಾದಲ್ಲಿ ಇಡಲಾಗಿದ್ದ ತಲಾ 15 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 15 ಗ್ರಾಂ ಚೈನ್ ಮತ್ತು ತಲಾ 5 ಗ್ರಾಂ ಚಿನ್ನದ ಎರಡು ಕಿವಿಯೋಲೆಗಳನ್ನು ಕದ್ದು ಪರಾರಿಯಾಗಿದ್ದಾರೆ.
ಮಧ್ಯಾಹ್ನ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದ ಮನೆಯ ಮಾಲಿಕ ಸಿಕ್ವೇರಾ ಅವರು ಊಟಕ್ಕೆ ಆಗಮಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ಪಿಎಸ್ಐ ಆನಂದಮೂರ್ತಿ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದು ಅಕ್ಕಪಕ್ಕದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು ಅದರಲ್ಲಿ ಕಳ್ಳರು ಬಂದಿರುವ ದೃಶ್ಯಾವಳಿಗಳು ಸೆರೆಯಾಗಿವೆ ಎನ್ನಲಾಗಿದೆ. ಸದ್ಯ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಚುರುಕುಗೊಳಿಸಿದ್ದಾರೆ.
Leave a Comment