ಹೊನ್ನಾವರ ,ಎಸ್.ಡಿ.ಎಂ. ಪ್ರಥಮ ದರ್ಜೆ ಮಹಾವಿದ್ಯಾಲಯ, ರೋಟರಿ ಸಂಸ್ಥೆ ಹೊನ್ನಾವರ ಮತ್ತು ಕಾಲೇಜಿನ ರೋಟ್ರ್ಯಾಕ್ಟ್ ಸಂಘಗಳ ಸಹಯೋಗದಲ್ಲಿ ಪ್ರಸ್ತುತ ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಹೊನ್ನಾವರದ ಆರ್.ಟಿ.ಓ. ವಾಸೀಂ ಬಾಬಾ ಮಾತನಾಡಿ ಮೋಟಾರು ವಾಹನ ಚಾಲನೆಯನ್ನು ಮಾಡುವವರು ಅನುಸರಿಸಬೇಕಾದ ನಿಯಮಗಳನ್ನು ಪ್ರಾತ್ಯಕ್ಷಿಕೆ ಮೂಲಕವಾಗಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಕೇಂದ್ರ ಸರಕಾರ ಹೊಸದಾಗಿ ತಿದ್ದುಪಡಿ ಮಾಡಿ ಜಾರಿಗೆ ತಂದಿರುವ ಮೋಟಾರು ವಾಹನ ಕಾನೂನುಗಳನ್ನು ಉಲ್ಲಂಘಿಸುವುದರಿಂದ ಮೋಟಾರು ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ವಿವರವಾಗಿ ತಿಳಿಸಿದರು.
ನ್ಯಾಯವಾದಿ ಉದಯ ಡಿ. ನಾಯ್ಕ ಮಾತನಾಡಿ ಮೋಟಾರು ವಾಹನ ಕಾನೂನಿಗೆ ಹೊಸದಾಗಿ ಕೇಂದ್ರ ಸರಕಾರ ಹಲವಾರು ತಿದ್ದುಪಡಿಗಳನ್ನು ಮಾಡಿ ಕಾನೂನನ್ನು ಉಲ್ಲಂಘಿಸುವವರಿಗೆ ದೊಡ್ಡ ಪ್ರಮಾಣದ ದಂಡವನ್ನು ವಿಧಿಸುವಂತೆ ತಿಳಿಸಿದೆ. ಇದು ರಾಷ್ಟ್ರಾದ್ಯಂತ ಜಾರಿಯಲ್ಲಿದ್ದು, ಕೆಲವು ರಾಜ್ಯ ಸರಕಾರಗಳು ದೊಡ್ಡ ಪ್ರಮಾಣದ ದಂಡದಿಂದ ಸ್ವಲ್ಪ ಪ್ರಮಾಣದ ಪರೀಷ್ಕರಣೆಯನ್ನು ಮಾಡಿದೆ. ವಾಹನ ಚಾಲನೆಯನ್ನು ಮಾಡುವವರು ಯಾವ ಯಾವ ದಾಖಲೆಗಳನ್ನು ತಮ್ಮ ಜೊತೆಯಲ್ಲಿಯೇ ಹೊಂದಿರಬೇಕು ಹೇಗೆ ರಸ್ತೆ ನಿಯಮಗಳನ್ನು ಪಾಲಿಸಬೇಕು ಎನ್ನವುದನ್ನು ತಮ್ಮ ಉಪನ್ಯಾಸದಲ್ಲಿ ತಿಳಿಸಿ ಅಗತ್ಯವಿರುವ ದಾಖಲೆಗಳನ್ನು ಹೊಂದದಿರುವುದರಿಂದ ಯಾವ ಯಾವ ರೀತಿಯ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಮತ್ತು ಯಾವುದಕ್ಕೆ ಎಷ್ಟು ದಂಡವನ್ನು ನೀಡಬೇಕಾಗುತ್ತದೆ ಎಂಬುದನ್ನು ವಿವರವಾಗಿ ಕಾನೂನಿನ ಪರಭಾಷೆಯಲ್ಲಿ ಅರ್ಥಪೂರ್ಣವಾಗಿ ಮನವರಿಕೆ ಮಾಡಿಕೊಟ್ಟರು.
ಯೂನಿಯನ್ ಉಪಾಧ್ಯಕ್ಷರಾದ ಡಾ. ಎಂ. ಆರ್. ನಾಯಕ ಮಾತನಾಡಿ ನಮ್ಮ ದೇಶದಲ್ಲಿ ಶಾಸನದ ಪ್ರಭುತ್ವವಿದ್ದು, ಸರ್ವರ ಹಿತಕ್ಕಾಗಿ ಶಾಸನವನ್ನು ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸುತ್ತಿರುವ ಜನರನ್ನು ವಿಶೇಷವಾಗಿ ಯುವಜನರನ್ನು ಜಾಗೃತಿಗೊಳಿಸುವುದಕ್ಕಾಗಿ ದೊಡ್ಡ ಪ್ರಮಾಣದ ದಂಡವನ್ನು ವಿಧಿಸುವ ಮೂಲಕ ಹೊಸ ಮೋಟಾರು ವಾಹನ ಕಾನೂನಿಗೆ ತಿದ್ದುಪಡಿಯನ್ನು ತಂದಿದೆ. ಸಾರ್ವಜನಿಕ ಆಸ್ತಿ ಪಾಸ್ತಿಗೆ ಸಾರ್ವಜನಿಕರಿಗೆ ಮತ್ತು ನಿರಪರಾಧಿಗಳಿಗೆ ಪ್ರಾಣ ಹಾನಿ ಮತ್ತು ತೊಂದರೆಯಾಗುವುದನ್ನು ತಪ್ಪಿಸುವುದಕ್ಕಾಗಿ ಪ್ರತಿಯೊಬ್ಬ ನಾಗರಕರೂ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕಾದ ಹೊಣೆಗಾರಿಕೆ ಬದ್ಧರಾಗರಬೇಕು ಎಂದರು ,
. ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.
ರೋಟ್ರ್ಯಾಕ್ಟ್ ಸಂಚಾಲಕರಾದ ಪ್ರೊ. ಹರಿದಾಸ ಅರ್ವಾರೆ, ರೋಟರಿ ಸಂಸ್ಥೆಯ ಅಧ್ಯಕ್ಷರಾದ ದಿನೇಶ ಕಾಮತ್ . ಎಂ.ಪಿ.ಇ. ಸೊಸೈಟಯ ಕಾರ್ಯದರ್ಶಿಗಳಾದ ಎಸ್.ಎಂ. ಭಟ್ಟ ಹಾಗೂ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Leave a Comment