ಹೊನ್ನಾವರ: ತಾಲೂಕಿನ ಕಡ್ನೀರು ಮೇಲಿನಕೇರಿ ಹಾಗೂ ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಹೋಗುವ ಸಾರ್ವಜನಿಕ ರಸ್ತೆಯನ್ನು ವ್ಯಕ್ತಿಯೊಬ್ಬರು ಗುಂಡಿ ತೆಗೆದು ಸಂಚಾರಕ್ಕೆ ಅಡ್ಡಿಪಡಿಸಿದ್ದನ್ನು ವಿರೋಧಿಸಿ ಅಲ್ಲಿನ ಸಾರ್ವಜನಿಕರು ಬುಧವಾರ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.
`ಅನಾದಿಕಾಲದಿಂದಲೂ ಇದ್ದ ಕಡ್ನೀರು ಮೇಲಿನ ಕೇರಿಗೆ ಹೋಗುವ ಸಾರ್ವಜನಿಕ ರಸ್ತೆಯನ್ನು ವ್ಯಕ್ತಿಯೊಬ್ಬರು ಒಂದು ತಿಂಗಳ ಹಿಂದೆ ಯಾರ ಗಮನಕ್ಕೂ ತರದೇ ಏಕಾಏಕಿ ಬಂದ್ ಮಾಡಿದ್ದಾರೆ. ಈ ಕುರಿತು ಸಾರ್ವಜನಿಕರೆಲ್ಲರೂ ಸೇರಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಗಮನಕ್ಕೂ ತರಲಾಗಿದ್ದು, ಅದರಂತೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಪುನಃ ಜೆಸಿಬಿ ಯಂತ್ರಗಳ ಮೂಲಕ ಇದ್ದ ರಸ್ತೆಯಲ್ಲಿ ಮಣ್ಣು ಸುರಿದು ಹಳೆಯ ರಸ್ತೆಯ ಕುರುಹುಗಳೂ ಕಾಣದಂತೆ ಮಾಡಿ, ಅದಕ್ಕೆ ಅಡ್ಡಲಾಗಿ ಗುಂಡಿ ತೆಗೆದಿದ್ದಾರೆ. ಇದಕ್ಕೆ ಪರ್ಯಾಯವಾಗಿ ಹಳ್ಳದ ಬದುವಿನಲ್ಲಿ ಕಿರಿದಾದ ಜಾಗ ಬಿಟ್ಟು, ಆ ಮಾರ್ಗದಲ್ಲಿ ಓಡಾಡಲು ತಿಳಿಸಿದ್ದಾರೆ. ಆದರೆ ಈ ಮಾರ್ಗ ತೀರಾ ಅಪಾಯಕಾರಿಯಾಗಿದ್ದು, ಇದರಿಂದಾಗಿ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕಾರಣ ಹಳ್ಳದ ಬದುವಿನಲ್ಲಿ ಸೂಚಿಸಿರುವ ಮಾರ್ಗ ತೀರಾ ಅಪಾಯಕಾರಿ ಇದ್ದು, ಮಳೆಗಾಲದ ನೀರಿನ ರಭಸಕ್ಕೆ ಕೊಚ್ಚಿಹೋಗುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಜೀವಕ್ಕೆ ಅಪಾಯಕಾರಿಗಾಗಿದೆ.
ಇದಲ್ಲದೆ ರಸ್ತೆಯ ಬದುವಿನಲ್ಲೇ ಟ್ರಾನ್ಸ್ಫಾರರ್ಮರ್ ಸಹ ಇದ್ದು, ಯಾವುದೇ ಸಮಯದಲ್ಲಿ ವಿದ್ಯುತ್ ಅವಘಡ ಸಂಭವಿಸಬಹುದಾಗಿದೆ. ಆದ್ದರಿಂದ ಅನಾದಿಕಾಲದಿಂದಲೂ ಇದ್ದ ರಸ್ತೆ ಸಾರ್ವಜನಿಕರ ಓಡಾಟಕ್ಕೆ ಅನುಕೂಲಕರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮುಂದಿನ 24 ಗಂಟೆಯ ಒಳಗಾಗಿ ತೆರವುಗೊಳಿಸಿಕೊಡಬೇಕು. ಇಲ್ಲವಾದಲ್ಲಿ ಆ ಭಾಗದ ಸಾರ್ವಜನಿಕರೆಲ್ಲರೂ ಸೇರಿ ಅನಿವಾರ್ಯವಾಗಿ ಗುಂಡಿಯನ್ನು ಮುಚ್ಚಿ, ರಸ್ತೆಯನ್ನು ತೆರವುಗೊಳಿಸುತ್ತೇವೆ. ಮುಂದೆ ಸಾರ್ವಜನಿಕರಿಗೆ ಸಂಭವಿಸಬಹುದಾದ ಅನಾಹುತ, ಅಡ್ಡಿ-ಆತಂಕಗಳಿಗೆ ಸರ್ಕಾರ ಮತ್ತು ತಾಲೂಕಾಡಳಿತದ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗ್ರಾಪಂ ಸದಸ್ಯ ವಿನಯ ಮೋಹನ ನಾಯ್ಕ ಮಾತನಾಡಿ, ಕಡ್ನೀರು ಪುರಾತನ ಸಾರ್ವಜನಿಕ ರಸ್ತೆಯನ್ನು ಗುಂಡಿ ತೆಗೆದು ಸಾರ್ವಜನಿಕರಿಗೆ ತೊಂದರೆ ಮಾಡಿದ್ದನ್ನು ವಿರೋಧಿಸಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೂ ಮನವಿ ಸಲ್ಲಿಸಿದ್ದೇವೆ. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು, ನಂತರದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪುನಃ ಮನವಿ ಸಲ್ಲಿಸಿದ್ದೇವೆ. ಮನವಿಗೆ ಯಾವುದೇ ಸ್ಪಂದನೆ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಊರಿನ ಮುಖಂಡ ತಿಮ್ಮಪ್ಪ ನಾಯ್ಕ ಮಾತನಾಡಿ ಬಹಳ ಹಿಂದಿನ 1988 ರಲ್ಲಿ ಮಂಡಲ ಪಂಚಾಯಿತಿ ವತಿಯಿಂದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿದೆ. ಈಗಾಲೇ ಹಲವಾರು ಅನುದಾನವೂ ಬಳಕೆಯಾದ ದಾಖಲೆಗಳಿವೆ. ಪುರಾಣ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೂ ಇದೇ ರಸ್ತೆ ಹೊಂದಿಕೊಂಡಿದ್ದು, ಭಕ್ತರಿಗೆ ಮತ್ತು ಸಾರ್ವಜನಿಕಲರಿಗೆ ತೀವ್ರ ತೊಂದರೆಯಾಗಿದೆ. ಅದಲ್ಲದೇ ಆ ರಸ್ತೆಯಿಂದ ಮೇಲಿನಕೇರಿಗೆ ಹೋಗುವ ಸಾರ್ವಜನಿಕ ವಾಹನಗಳನ್ನು ತಡೆದು ನನ್ನ ಪರವಾನಿಗೆ ಇಲ್ಲದೆ ರಸ್ತೆಯಲ್ಲಿ ಸಂಚಲರಿಸುವಂತಿಲ್ಲ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹಿರಿಸಿ ಕೂಡಲೇ ಕ್ರಮ ಕೈಗೊಂಡು ನೊಂದ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಇಲಾಖೆಗೂ ಮನವಿ: ಈ ಕುರಿತು ಸಾರ್ವಜನಿಕರು ರಕ್ಷಣೆ ಕೋರಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದು, ಕಂದಾಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಾರ್ವಜನಿಕರೇ ಸೇರಿ ರಸ್ತೆ ತೆರವುಗೊಳಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ತಿಮ್ಮಪ್ಪ ನಾಯ್ಕ, ಮಾಬ್ಲೇಶ್ವರ ನಾಯ್ಕ, ಶ್ರೀಧರ ನಾಯ್ಕ, ಗಣೇಶ ಬಿಳಿಯಪ್ಪ ನಾಯ್ಕ, ಜಗದೀಶ ಮಂಜುನಾಥ ನಾಯ್ಕ, ಮಾಸ್ತಿ ನಾಯ್ಕ, ಸುಧೀರ್ ಕಡ್ನಿರ್, ರಾಜು ಈಶ್ವರ ನಾಯ್ಕ, ಲಕ್ಷ್ಮಣ ನಾರಾಯಣ ನಾಯ್ಕ, ಅನಂತ ನಾಯ್ಕ, ಈಶ್ವರ ನಾಯ್ಕ, ದಿನೇಶ ನಾಯ್ಕ, ಸತ್ಯನಾರಾಯಣ ನಾಯ್ಕ ಇತರರು ಇದ್ದರು.
Leave a Comment