ಹೊನ್ನಾವರ ;
ಸರ್ಕಾರದ ಅಭಯಾರಣ್ಯ ಘೋಷಣೆ ನಿರ್ಧಾರದಿಂದ ಜನಜೀವನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಅರಣ್ಯ ಉಳಿಸುವ ಹೆಸರಿನಲ್ಲಿ ಅಕೇಶಿಯಾ, ನೀಲಗಿರಿ ಮುಂತಾದ ಗಿಡಗಳನ್ನು ನೆಟ್ಟು ಪ್ರಾಣಿಗಳಿಗೆ ವಾಸಕ್ಕೆ ಅಯೋಗ್ಯ ಮಾಡಲಾಗುತ್ತಿದೆ ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿ ಧರ್ಮದರ್ಶಿಗಳಾದ ಮಾರುತಿ ಗುರೂಜಿ ಅವರು ಸರ್ಕಾರದ ನಿರ್ಧಾರದ ವಿರುದ್ಧ ಅಸಹನೆ ವ್ಯಕ್ತಪಡಿಸಿದರು.
ಅವರು ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆದ ಅಭಯಾರಣ್ಯ ಘೋಷಣೆ ವಿರೋಧಿ ಹಾಗೂ ಶರಾವತಿ ನದಿ ನೀರು ಸಂರಕ್ಷಣ ಸಮಿತಿ, ಗೇರಸೊಪ್ಪಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೇವಲ ಸರ್ಕಾರಕ್ಕೆ ಮನವಿ ಸಲ್ಲಿಸುವ ಹೋರಾಟ ನಮ್ಮದಾಗಬಾರದು, ತಾತ್ವಿಕವಾಗಿ ನಿರ್ಧಾರ ಮಾಡಿ ಹೋರಾಟಕ್ಕೆ ಸರ್ಕಾರ ಸ್ಪಂದಿಸುವವರೆಗೂ ನಮ್ಮ ಹೋರಾಟ ನಿಲ್ಲಿಸಬಾರದು ಎಂದು ಕರೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಸೂಚಿಸಲು ಅವಕಾಶ ಮಾಡಿಕೊಡಲಾಗಿತ್ತು. ದಯಾನಂದ ಹಾಡಗೇರಿ, ಗಿರೀಶ ನಾಯ್ಕ ಕಾನಗೋಡ, ಶ್ರೀಧರ ನಾಯ್ಕ ಜನ್ನಕಡ್ಕಲ್, ತಿಮ್ಮಪ್ಪ ಹಿರೇಬೈಲ್, ದತ್ತಾ ಮಡಿವಾಳ ಉಪ್ಪೋಣಿ, ವಿನಾಯಕ ಸಾಲ್ಕೋಡ, ಆರ್. ಹೆಚ್. ನಾಯ್ಕ ಚಿಕ್ಕನಕೋಡ, ಸಚಿನ್ ನಾಯ್ಕ, ಕೃಷ್ಣ ನಾಯ್ಕ ಮಾಗೋಡ, ತಿಮ್ಮಪ್ಪ ಗೌಡ ಮಹಿಮೆ, ನಾಗರಾಜ ನಾಯ್ಕ ಜನ್ನಕಡ್ಕಲ್, ನಾರಾಯಣ ನಾಯ್ಕ ಉಪ್ಪೋಣಿ, ಧರ್ಮಾ ನಾಯ್ಕ ಜನ್ನಕಡ್ಕಲ್ ಮತ್ತಿತರರು ತಮ್ಮ ತಮ್ಮ ಗ್ರಾಮದ ಸಮಸ್ಯೆಗಳನ್ನು ಮುಂದಿಟ್ಟು, ತಾವು ಹಿಂದೆ ಭಾಗವಹಿಸಿದ್ದ ಸಾರ್ವಜನಿಕ ಸಭೆಗಳ ಅನುಭವಗಳನ್ನು ಹಂಚಿಕೊಂಡರು. ಗುರೂಜಿಯವರ ಅಭಿಯಾರಣ್ಯ ಘೋಷಣೆ ವಿರೋಧದ ಹೋರಾಟವನ್ನು ಶ್ಲಾಘಿಸಿ ಒಕ್ಕೊರಲಿನಿಂದ ತಮ್ಮ ಬೆಂಬಲ ವ್ಯಕ್ತಪಡಿಸಿದರು.
.
ಖ್ಯಾತ ನ್ಯಾಯವಾದಿಗಳಾದ ನಾಗರಾಜ ನಾಯಕ, ಕಾರವಾರ ಮಾತನಾಡಿ. ಶರಾವತಿಯಂಥ ನದಿಗಳ ತಿರುವಿನ ಯೋಜನೆಗಳು ಇತ್ತೀಚಿನದಲ್ಲ, ಅನೇಕ ದಶಕಗಳಿಂದ ಇಂತಹ ಯೋಜನೆಗಳಿಗೆ ರೂಪುರೇಷೆ ನಡೆಸಲಾಗುತ್ತಿದೆ. ಕಾರ್ಖಾನೆಗಳ ಕೆಟ್ಟ ಪರಿಣಾಮದಿಂದ ಬೆಂಗಳೂರಿನ ಪವಿತ್ರ ನದಿಯಾಗಿದ್ದ ವೃಷಭಾವತಿ ಇಂದು ಕೊಳಚೆಯಾಗಿದೆ, ಬೆಂಗಳೂರಿಗರು ನದಿಗಳ ನೀರು ಸಮುದ್ರ ಸೇರಿ ಪೋಲಾಗುತ್ತಿದೆ ಎಂಬ ಅವೈಜ್ಞಾನಿಕ ಕಾರಣ ನೀಡಿ ಮಲೆನಾಡಿನ ಸಹ್ಯಾದ್ರಿ ಭಾಗಕ್ಕೆ ಕಣ್ಣು ಹಾಕುತ್ತಿದ್ದಾರೆ, ಇದಕ್ಕೆ ನಮ್ಮ ಧಿಕ್ಕಾರವಿದೆ ಎಂದರು.
ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಶರಾವತಿ ನದಿ ತಿರುವು ಯೋಜನೆ ಗಾಬರಿಗೊಳಿಸುತ್ತಿದೆ, ಮನುಷ್ಯನೂ ಕೂಡ ಅಭಯಾರಣ್ಯದ ಅಂಗ, ಮನುಷ್ಯನನ್ನು ಹೊರತುಪಡಿಸಿ ಅರಣ್ಯ ಉಳಿಸುತ್ತೇವೆಂಬುದು ವಿರೋಧಾಭಾಸದ ಹೇಳಿಕೆಯಾಗುತ್ತದೆ ಎಂದರು. ಸರ್ಕಾರ ಎಂದರೆ ನಾವು ನೀವು ಎಲ್ಲರೂ ಕೂಡ, ವಿಧಾನಸೌಧಕ್ಕೆ ನಾವು ಯಾಕೆ ಹೋಗಬೇಕು? ಮುಖ್ಯಮಂತ್ರಿಗಳೇ ಬಂದು ನಮ್ಮನ್ನೆಲ್ಲ ಭೇಟಿಯಾಗಲಿ, ಗಂಗಾ ನದಿಗಿಂತಲೂ ಪುರಾತನ ನದಿ ನಮ್ಮ ಶರಾವತಿ ನದಿ, ಈ ಜೀವನದಿಯನ್ನು ಬತ್ತಲು ನಾವು ಬಿಡಬಾರದು, ನದಿಗಳ ಶುದ್ಧೀಕರಣ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಂತ ರೈತ ಸಂಘ ಹೊನ್ನಾವರದ ತಾಲೂಕಾ ಕಾರ್ಯದರ್ಶಿ ಗಣೇಶ ಭಂಡಾರಿ 10-15 ವರ್ಷಗಳ ಮೊದಲೇ ಇಂತಹ ಸಮಿತಿಗಳು ರಚನೆಯಾಗಿದ್ದರೆ ಇವತ್ತು ಹೋರಾಟ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ, ರಾಜಕೀಯ ಪ್ರೇರಿತ ಹೋರಾಟದಿಂದ ಜಯ ಸಿಗುವುದಿಲ್ಲ, ನಾವು ದೃಢಸಂಕಲ್ಪದೊಂದಿಗೆ ಜಾತಿ, ಮತ, ರಾಜಕೀಯ ತೊರೆದು ಒಂದಾಗಿ ಸಮಷ್ಠಿಯಿಂದ ಹೋರಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷರಾದ ರವೀಂದ್ರ ನಾಯ್ಕ ಜನಪ್ರತಿನಿಧಿಗಳೇ ಸುಮ್ಮನೆ ಕುಳಿತಿರುವಾಗ ಗುರೂಜಿಯವರು ತಮ್ಮ ಧ್ವನಿ ಎತ್ತಿರುವುದು ಪ್ರಶಂಸನಾರ್ಹ, ನದಿಗಳನ್ನು ಸಂರಕ್ಷಿಸಿಕೊಂಡಿದ್ದರೆ ಬೆಂಗಳೂರಿಗೇ ನಮಗೆಲ್ಲ ನೀರನ್ನು ಪೂರೈಸುವ ಸಾಮಥ್ರ್ಯವಿರುತ್ತಿತ್ತು, ಜಿಲ್ಲೆಯ ಎಲ್ಲ ಅತಿಕ್ರಮಣದಾರರ ಕುಟುಂಬಗಳು ಗುರೂಜಿಯವರಿಗೆ ಬೆಂಬಲ ನೀಡುತ್ತಾರೆ, ಗುರೂಜಿಯವರ ನೇತೃತ್ವದಲ್ಲೇ ಈ ಹೋರಾಟ ಮಾಡಲು ಬಯಸುತ್ತೇನೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಮೂರು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಗ್ರಾಮ ಪಂಚಾಯತ ಮಟ್ಟದಲ್ಲಿ ಸಭೆ ಮಾಡಿ ಒಕ್ಕೊರಲಿನಿಂದ ಖಂಡನಾ ನಿರ್ಣಯ ಕೈಗೊಳ್ಳಿ ಎಂದು ಆಗ್ರಹಿಸಿದರು. ಕೇವಲ ಗೇರಸೊಪ್ಪ ಗ್ರಾಮ ಪಂಚಾಯತ ಈ ನಿರ್ಧಾರ ಕೈಗೊಂಡಿದೆ, ಉಳಿದ ಗ್ರಾಮ ಪಂಚಾಯತಗಳಿಗೆ ಏನಾಗಿದೆ ಎಂದು ಪ್ರಶ್ನಿಸಿದರು. ಈ ಸಂಘಟನೆ ಇವತ್ತೇ ಆಗಬೇಕು, ತಮ್ಮ ತಮ್ಮ ಗ್ರಾಮದಲ್ಲಿ ಸಮಸ್ಯೆಯ ಚಿತ್ರವನ್ನು ಬಿತ್ತರಿಸಬೇಕು, ಚುನಾವಣಾ ನೀತಿಸಂಹಿತೆ ಮುಗಿದ ನಂತರ ಸಭೆ ಮಾಡಿ ಖಂಡನಾ ನಿರ್ಣಯ ಕೈಗೊಳ್ಳಿ ಎಂದು ಎಲ್ಲ ಗ್ರಾಮ ಪಂಚಾಯತಗಳ ಮುಖಂಡರಿಗೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 1,500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶೈಲೇಶ್ ನಾಯ್ಕ ಕುಮಟಾ ಕಾರ್ಯಕ್ರಮ ನಿರೂಪಿಸಿದರು.
Leave a Comment