
ಹೊನ್ನಾವರ ತಾಲೂಕಿನ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದಲ್ಲಿ ನಡೆದ ಸಾಮೂಹಿಕ ಬ್ರಹ್ಮೋಪದೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ನೂರಾರು ಮಕ್ಕಳು ಬ್ರಹ್ಮೋಪದೇಶದಲ್ಲಿ ಪಾಲ್ಗೊಂಡಿದ್ದರು.
`ಗಾಯತ್ರಿ ಮಂತ್ರ ಜಪಿಸುವುದರಿಂದ ಮನುಷ್ಯನ ಹೃದಯ, ಮೆದುಳು ಸೇರಿದಂತೆ 72 ಸಾವಿರ ನರನಾಡಿಗಳು ಸುಸೂತ್ರವಾಗಿ ಕೆಲಸಮಾಡುವುದಲ್ಲದೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ತಾಲೂಕಿನ ಮಾಡಗೇರಿಯ ಶ್ರೀ ರಾಮನಾಥ ದೇವಾಲಯದಲ್ಲಿ ನಾಮಧಾರಿ ಸಮಾಜ ಸೇವಾ ಸಂಘ ಕಡತೋಕಾ ಇವರ ಆಶ್ರಯದಲ್ಲಿ ಭಾನುವಾರ ನಡೆದ ಸಾಮೂಹಿಕ ಬ್ರಹ್ಮೋಪದೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಲಶ ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಗಾಯತ್ರಿ ಮಂತ್ರಕ್ಕೆ ಯಾವುದೇ ಜಾತಿ, ಮತ-ಧರ್ಮದ ತಾರತಮ್ಯ ಇಲ್ಲ. ಆಧ್ಯಾತ್ಮ ಎನ್ನುವುದು ಯಾರ ಸ್ವತ್ತಲ್ಲ. ಮನಸ್ಸನ್ನು ಕೇಂದ್ರೀಕರಿಸಿದಾಗ ಮಾತ್ರ ಆಧ್ಯಾತ್ಮ ಸಿದ್ಧಿಯಾಗುತ್ತದೆ. ಇತ್ತೀಚೆಗೆ ಜನರಲ್ಲಿ ಮಂತ್ರ ಪಠಿಸುವ ಆಸಕ್ತಿ ಕ್ಷೀಣಿಸುತ್ತಿದೆ. ದಿನನಿತ್ಯ ದೇವರ ಸ್ಮರಣೆ ಮಾಡುವುದರಿಂದ ಮನಸ್ಸು ಹಗುರವಾಗುವುದಲ್ಲದೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಉಪನಯನ ಮಾಡುವುದರಿಂದ ಅವರ ಶಕ್ತಿ ವೃದ್ಧಿಯಾಗುವುದಲ್ಲದೆ ಮನಸ್ಸು ಹಗುರವಾಗುತ್ತದೆ. ಓದುವ ಶಕ್ತಿ ಜತೆಗೆ ಜ್ಞಾಪಕ ಶಕ್ತಿಯೂ ಅಧಿಕವಾಗುತ್ತದೆ.
ದೇಹದ ಎಲ್ಲಾ ಅಂಗಾಂಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಬ್ರಾಹ್ಮಣತ್ವ ಎಲ್ಲರಿಗೂ ಸುಲಭವಾಗಿ ಸಿಗುವಂತದಲ್ಲ. ಯಾವ ವರ್ಗದವರಾದರೂ ಸರಿ ಯಾರಿಗೆ ಎದೆಗಾರಿಕೆ ಮತ್ತು ಇಚ್ಛಾಶಕ್ತಿ ಮತ್ತು ತ್ಯಾಗ ಮನೋಭಾವನೆ ಇರುತ್ತದೆ ಅವರು ಮಾತ್ರ ಬ್ರಾಹ್ಮಣತ್ವ ಪಡೆಯಬಹುದಾಗಿದೆ ಎಂದರು.

ಕೇಂದ್ರ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಸಮಾಜ ಸಂಘಟಿತವಾದರೆ ಮಾತ್ರ ಅಭಿವೃದ್ಧಿ ಸಾಧ್ಯ. ಒಂದು ಸಮಾಜ ಉನ್ನತಿಯತ್ತ ಸಾಗಬೇಕಾದರೆ ಕ್ರಿಯಾಶೀಲ ಯುವಕರು ಮತ್ತು ಸಂಘಟನೆ ಇರಬೇಕು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ತತ್ವ ಬಲಿಷ್ಠಗೊಳ್ಳಬೇಕಿದೆ. ಸಮಾಜದ ಕಟ್ಟಕಡೆಯ ಮಗುವೂ ಕೂಡ ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ ತಲುಪುವಂತಾಗಬೇಕು. ಇಂದಿನ ಮಕ್ಕಳು ಉತ್ತಮ ಸಂಸ್ಕಾರವಂತರಾಗಿ ಬಾಳಲು ಇಂತಹ ಬ್ರಹ್ಮೋಪದೇಶ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು. ಮುಂಬರುವ ದಿನಗಳಲ್ಲಿ ದೇವಾಲಯದ ಅಭಿವೃದ್ಧಿಗೆ ಸರ್ಕಾರದಿಂದ ಸಿಗಬಹುದಾದ ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಸಮಾಜ ಉತ್ತಮ ಸಂಘಟನೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಏಳ್ಗೆಯತ್ತ ಸಾಗುತ್ತಿದೆ ಎಂದರು.
ಜಿಪಂ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಕೇವಲ ಒಂದು ಸಮಾಜದ ಆಸ್ತಿಯಲ್ಲ. ಅವರು ಈ ದೇಶದ ಆಸ್ತಿ. ಅವರ ಪಾದಸ್ಪರ್ಶದಿಂದ ಇಲ್ಲಿಯ ಕ್ಷೇತ್ರ ಪಾವನವಾಗಿದೆ. ಇಂತಹ ಬ್ರಹ್ಮೋಪದೇಶ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭಹಾರೈಸಿದರು.
ಸಾಹಿತಿ ಸುಮುಖಾನಂದ ಜಲವಳ್ಳಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ವಟುಗಳ ಬ್ರಹ್ಮೋಪದೇಶ ನಡೆಯಿತು. ಗ್ರಾಪಂ ಅಧ್ಯಕ್ಷೆ ಶೋಭಾ ನಾಯ್ಕ, ನಾಮಧಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ನಾಯ್ಕ ಉಪಸ್ಥಿತರಿದ್ದರು. ಸಮಾಜದ ಸಾವಿರಾರು ಸಂಖ್ಯೆಯಲ್ಲಿ ಸಮಾಜಬಾಂಧವರು ಪಾಲ್ಗೊಂಡಿದ್ದರು.

Leave a Comment