
ಕುರಿತೋದದೆಯಿಂ ಕಾವ್ಯಪ್ರಯೋಗಮತಿಗಳ್ ಕನ್ನಡಿಗರ್ ಎಂಬುದು ಶಾಸನದ ಒಂದು ಸಾಲು. ಇದರರ್ಥ ಏನೇ ಆದರೂ ಕಾವ್ಯಪ್ರಯೋಗಮತಿಗಳು ಕನ್ನಡಿಗರು ಎಂಬುದು ಮಾತ್ರ ಸುಳ್ಳಲ್ಲ. ಕರ್ನಾಟಕದಲ್ಲಿ ಕಲಾ ಪ್ರಕಾರಗಳಿಗಂತೂ ದೇವರಾಣೆಗೂ ಬರವಿಲ್ಲ. ಭರತನಾಟ್ಯ,ಯಕ್ಷಗಾನ,ಡೊಳ್ಳುಕುಣಿತ,ಮಲ್ಲಕಂಬ,ನಾಟಕ ಇವೆಲ್ಲವೂ ಕನ್ನಡದ ವಿವಿಧ ಕಲಾ ಪ್ರಕಾರಗಳು. ಆದರೆ ಈ ಎಲ್ಲವುಗಳಲ್ಲೂ ವಿಶೇಷವಾಗಿರುವುದು ಕರಾವಳಿಯ ಗಂಡು ಕಲೆ ಯಕ್ಷಗಾನ. ನವರಸಗಳನ್ನೂ ಒಂದೇ ವೇದಿಕೆಯಡಿಯಲ್ಲಿ ತಂದು ಜನಮನಗಳನ್ನು ಯಥೇಚ್ಛವಾಗಿ ತಣಿಸುವ ಅಭೂತಪೂರ್ವ ಕಲಾಪ್ರಕಾರ. ಶಾಸ್ತ್ರೋಕ್ತವಾದರೂ ಜನಪದದಲ್ಲಿ ನೆಲೆಸಿ ಜಾನಪದವಾದ ಅಪರೂಪದ ಕಲೆ. ದೇವತಾರಾಧನೆಯೇ ಧ್ಯೇಯೋದ್ದೇಶ ಎಂದು ನಂಬಿ ಬೆಳೆದುಬಂದ ಅಮೂರ್ತ ಭಾವನೆಗಿರುವ ಮುಖವೇ ಯಕ್ಷಗಾನ. ಕರ್ನಾಟಕದ ಕರಾವಳಿಯ ಸೊಬಗನ್ನು ಇಮ್ಮಡಿಗೊಳಿಸಿದ ಪ್ರಚಂಡ ಶಕ್ತಿ. ಹಾಗಾಗಿ ಕರಾವಳಿಯವರಾಗಿ ಅದರ ಮೇಲ್ನೋಟವೂ ಇಲ್ಲದಿದ್ದರೆ ಹೇಗೆ?
ಯಕ್ಷಗಾನದಲ್ಲಿ ಪ್ರಮುಖವಾಗಿ ಮೂರು ಪ್ರಕಾರಗಳು. ತೆಂಕು ,ಬಡಗು ಮತ್ತು ಬಡಾಬಡಗು. ಇವುಗಳನ್ನು ಸಾಮಾನ್ಯವಾಗಿ ತಿಟ್ಟುಗಳೆಂದು ಕರೆಯುತ್ತಾರೆ. ತೆಂಕುತಿಟ್ಟು ಹೆಸರೇ ಸೂಚಿಸುವಂತೆ ತೆಂಕಿನ ಭಾಗದ ಜನರ ಯಕ್ಷಗಾನ ಪ್ರಕಾರ. ಕಾಸರಗೋಡು,ದಕ್ಷಿಣ ಕನ್ನಡ ಮತ್ತು ಉಡುಪಿ ಯಲ್ಲಿ ಈ ಪ್ರಕಾರ ಚಾಲ್ತಿಯಲ್ಲಿದೆ. ತೆಂಕುತಿಟ್ಟಿನಲ್ಲಿ ಗಿರಕಿ ಹೊಡೆಯುವುದು ಕುಣಿತದ ಪ್ರಮುಖ ಆಕರ್ಷಣೆ . ದೊಡ್ಡ ದೊಡ್ಡ ಬಣ್ಣದ ವೇಷಗಳು ತೆಂಕುತಿಟ್ಟಿನ ವಿಶೇಷ,ಅರ್ಥಗಾರಿಕೆಗೆ ಇಲ್ಲಿ ಬಹಳ ಪ್ರಾಶಸ್ತ್ಯ. ದಕ್ಷಿಣದ ಈ ಶೈಲಿ ಇಂದು ಬಹುತೇಕ ಕಡಿಮೆಯಾದರೂ ಅದರ ಗತ್ತು ಕಡಿಮೆಯಾಗಿಲ್ಲ. ಇನ್ನು ಬಡಾಬಡಗು ಶೈಲಿ ಉಡುಪಿ ಕುಂದಾಪುರ ಭಾಗದಲ್ಲಿ ಮೊದಲು ಆಡುತ್ತಿದ್ದರಂತೆ ಎಂದು ಹೇಳಿದ್ದು ಕೇಳಿದ್ದೇನೆ. ಇಂದು ಬಡಗು ಶೈಲಿಯಲ್ಲಿಯೇ ಅದು ವಿಲೀನವಾಗಿದೆ ಎಂಬುದು ಕೆಲವರ ಅಭಿಪ್ರಾಯ. ಜಿಜ್ಞಾಸೆ ಏನೇ ಇದ್ದರೂ ಆ ಶೈಲಿ ಇಂದು ಇಲ್ಲದಿರುವುದಂತೂ ಸತ್ಯ. ಮೂರನೆಯ ಶೈಲಿ ಬಡಗುತಿಟ್ಟು. ಉತ್ತರಕನ್ನಡದ ಭಾಗದಲ್ಲಿ ಈ ಶೈಲಿ ಅತ್ಯಂತ ಪ್ರಚಲಿತ. ಬಹಳ ಆಕರ್ಷಣೀಯ ಯಕ್ಷಗಾನ ಪ್ರಕಾರ . ಮಂಡಿ ಕುಣಿತ ಬಡಗುತಿಟ್ಟಿನ ವೈಶಿಷ್ಟ್ಯ. ಇಲ್ಲಿ ಕುಣಿತ,ಅಭಿನಯಕ್ಕೆ ಹೆಚ್ಚು ಬೇಡಿಕೆ. ಪುಂಡು ವೇಷಗಳು ಇಲ್ಲಿನ ಪ್ರಮುಖ ಆಕರ್ಷಣೆ, ಇಂದು ಬಡಗುತಿಟ್ಟು ತನ್ನ ಛಾಪನ್ನು ಅರೆಬರೆ ಮಟ್ಟಿಗಾದರೂ ಉಳಿಸಿಕೊಂಡಿರುವುದೇ ಖುಷಿಯ ಸಂಗತಿ.

ಯಕ್ಷಗಾನದಲ್ಲಿ ಎರಡು ಭಾಗಗಳು . ಒಂದು ಹಿಮ್ಮೇಳ ಮತ್ತು ಮುಮ್ಮೇಳ. ಹಿಮ್ಮೇಳವೆಂದರೆ ರಂಗದಲ್ಲಿ ಹಿಂಬದಿಗೆ ನಿಂತು ಯಕ್ಷಗಾನವನ್ನು ನಡೆಸುವವರು. ಇವರನ್ನು ನಾಟಕದ ಸೂತ್ರಧಾರನಿಗೆ ಹೋಲಿಸಬಹುದು. ಇವರಲ್ಲಿ ಭಾಗವತರು ,ಚಂಡೆಯವರು ,ಮದ್ದಲೆಯವರು ಪ್ರಮುಖರು. ತೆಂಕು ತಿಟ್ಟಿನಲ್ಲಿ ಚಕ್ರತಾಳದರೂ ಹಿಮ್ಮೇಳದಲ್ಲೇ ಸೇರುತ್ತಾರೆ. ಅದರಲ್ಲಿ ಚಕ್ರತಾಳ,ಜಾಗಟೆ,ಮದ್ದಳೆ,ಚಂಡೆ ಹಾಗೂ ಶೃತಿ ಪೆಟ್ಟಿಗೆ ಒಳಗೊಂಡಿರುತ್ತದೆ. ಹಿಮ್ಮೇಳವೆಲ್ಲವೂ ಸಂಗೀತದ ಮುಖಗಳು. ಯಕ್ಷಗಾನದ ಬಹುಪ್ರಧಾನ ಅಂಗ ಈ ಹಿಮ್ಮೇಳ. ಇನ್ನು ಬಡಗುತಿಟ್ಟಿನಲ್ಲಿ ತಾಳ,ಶ್ರುತಿ ,ಮದ್ದಳೆ ಹಾಗೂ ಚಂಡೆ ಇದರ ಭಾಗಗಳು. ಆಯಾ ಪ್ರಸಂಗಕ್ಕೆ ತಕ್ಕುದಾದ ಪದ್ಯಗಳನ್ನು ಹಾಡುತ್ತಾ ಮುಮ್ಮೇಳದವರನ್ನು ಕುಣಿಸುವುದು ಇವರ ಕೆಲಸ. ಮುಮ್ಮೇಳವೆಂದರೆ ರಂಗದಲ್ಲಿ ಜನರನ್ನು ಇದಿರುಗೊಂಡು ಅಭಿನಯಿಸುವ ಕಲಾವಿದರು. ಪ್ರತಿಯೊಬ್ಬರೂ ಒಂದೊಂದು ಪಾತ್ರವಾಗಿ ಬಂದು ತಮ್ಮ ಪಾತ್ರಕ್ಕೆ ತಕ್ಕುದಾದ ಜೀವವನ್ನು ತುಂಬಿ ಅಭಿನಯಿಸುವ ಕಲಾಪ್ರವೀಣರು. ಪ್ರಮುಖ ಪಾತ್ರಧಾರಿ ,ಸ್ತೀವೇಷ ,ಪೋಷಕ ಪಾತ್ರಧಾರಿ,ಹಾಸ್ಯಗಾರ ಇವೆಲ್ಲ ಮುಮ್ಮೇಳದಲ್ಲಿ ಬಂದು ಜನರನ್ನು ರಂಜಿಸುವ ಪಾತ್ರಗಳು. ಮನಸ್ಸು ಮಾಡಿದರೆ ದೇವೇಂದ್ರನ ಸಭೆಯನ್ನೂ,ಸಮುದ್ರಮಂಥನವನ್ನೋ ಅಭಿನಯದಲ್ಲೇ ಸೃಷ್ಟಿಸುವ ತಾಕತ್ತು ಮುಮ್ಮೇಳದವರಿಗಿರುತ್ತದೆ.
ಯಕ್ಷಗಾನದ ಬಣ್ಣದ ಮನೆಯೇ ಚೌಕಿ . ಇಲ್ಲಿ ನಿಜಜೀವನದ ಜನಸಾಮಾನ್ಯರೆಲ್ಲ ರಂಗದ ರಾಜರಾಗಿ,ದೇವಲೋಕದ ಇಂದ್ರರಾಗಿ ,ತ್ರಿಮೂರ್ತಿಗಳೂ ಆಗಿ ಬದಲಾಗುತ್ತಾರೆ. .ಇಲ್ಲಿ ಕೇವಲ ಬಣ್ಣ ಮಾಡಿಕೊಳ್ಳುವ ಕಾರ್ಯ ಮಾತ್ರವಲ್ಲದೆ ಆಯಾ ಕಲಾವಿದರು ತಮ್ಮ ಪಾತ್ರದ ಕುರಿತಾಗಿ ಸಹ ಕಲಾವಿದರೊಂದಿಗೆ ,ಭಾಗವತರೊಂದಿಗೆ ಚರ್ಚಿಸುತ್ತಾರೆ. ಇಲ್ಲಿ ಪ್ರಮುಖ ಪಾತ್ರ ಇರುವುದು ವೇಷಭೂಷಣದವರದ್ದು. ಅವರು ಪ್ರತಿ ಕಲಾವಿದನಿಗೂ ಆಭರಣ ಕೊಡುವುದರಲ್ಲಿ,ವಸ್ತ್ರ ಕೊಡುವುದರಲ್ಲಿ ಸಕ್ರಿಯರಾಗಿರುತ್ತಾರೆ. ಚೌಕಿಯಲ್ಲಿ ಗಣಪತಿ ಪೂಜೆ ಆದ ನಂತರವೇ ಯಕ್ಷಗಾನ ಪ್ರಾರಂಭವಾಗುವುದು. ‘ರಂಗಸ್ಥಳಕ್ಕಪ್ಪಣೆ ದೇವರಪ್ಪಣೆ ‘ಎಂಬ ಅವಿಚ್ಚಿನ್ನ ಯಕ್ಶವ್ಯಾಖ್ಯೆಯಿಂದಲೇ ಭಾಗವತರು ರಂಗಸ್ಥಳಕ್ಕೆ ಅಪ್ಪಣೆಯನ್ನು ಪಡೆಯುತ್ತಾರೆ. ಅಲ್ಲಿಯೂ ಮತ್ತೊಮ್ಮೆ ಗಜಮುಖನ ನೆನೆಯುತ್ತಾರೆ. ನಂತರ ಕೋಡಂಗಿಗಳ ಪ್ರವೇಶವಾಗುತ್ತದೆ. ೨೦ರ ದಶಕದಲ್ಲಿ ಈ ಪದ್ಧತಿ ಅಳಿಸಿಹೋಗಿದೆ. ಇದಾದ ನಂತರ ಬಾಲಗೋಪಾಲರ ಪ್ರವೇಶ . ಇದೂ ಅಲ್ಲೋ ಇಲ್ಲೋ ಕಾಣಸಿಗುತ್ತದೆ. ಮುಂದಿನದು ಸ್ತ್ರೀವೇಷದ ಕುಣಿತ. ಇದಕ್ಕೆ ಯಕ್ಷಗಾನದ ಭಾಷೆಯಲ್ಲಿ ಪೀಠಿಕೆ ಸ್ತ್ರೀವೇಷ ಎನ್ನುತ್ತಾರೆ. ಕೊನೆಯಲ್ಲಿ ಒಡ್ಡೋಲಗ ಕುಣಿತವಿರುತ್ತದೆ. ಈ ಒಡ್ಡೋಲಗ ಸ್ವಲ್ಪವಾದರೂ ಕಾಣಸಿಗುವುದು ಕೆರೆಮನೆ ಯಕ್ಷಗಾನ ಮೇಳದಲ್ಲಿ ಮಾತ್ರವೇನೋ!ಈ ನಾಲ್ಕೂ ವಿಶಿಷ್ಟ ಪಾತ್ರಗಳೂ ತಮ್ಮ ಅಸ್ತಿತ್ವವನ್ನು ಬಹುತೇಕ ಕಳೆದುಕೊಂಡಿದೆ.ಇವೆಲ್ಲವೂ ಪ್ರೇಕ್ಷಕನನ್ನು ಯಕ್ಷಗಾನ ಪ್ರದರ್ಶನಕ್ಕೆ ಮಾನಸಿಕವಾಗಿ ತಯಾರಿಸುವುದಾಗಿತ್ತು. ಅದೆಲ್ಲದಕ್ಕೂ ಈಗ ಕತ್ತರಿ ಬಿದ್ದಿದೆ. ಯಕ್ಷಗಾನ ನಡೆಯುವುದು ಸಾಮಾನ್ಯವಾಗಿ ರಾತ್ರಿಯಲ್ಲಾಗಿರುವುದರಿ೦ದ ಸುಮಾರು ಮಧ್ಯರಾತ್ರಿ ಅಥವಾ ಎರಡು ಗಂಟೆಯ ಹೊತ್ತಿಗೆ ಅಬ್ಬರದ ಚಂಡೆ ,ಮದ್ದಲೆಯೊಂದಿಗೆ ಖಳನಾಯಕನ ಪ್ರವೇಶವಾಗುತ್ತದೆ. ಇದು ಅರೆಬರೆ ನಿದ್ದೆಯಲ್ಲಿದ್ದವರನ್ನು ಬಡಿದೆಬ್ಬಿಸುತ್ತದೆ. ಇನ್ನು ಮಧ್ಯ ಮಧ್ಯ ಬರುವ ವಿದೂಷಕನ ಅಥವಾ ಹಾಸ್ಯಗಾರನ ಪಾತ್ರ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸುತ್ತದೆ. ರಾಜ ರಾಣಿಯ ನಡುವೆ ನಡೆಯುವ ಶೃಂಗಾರ ರಸ,ತಾಯಿ ಮಗನೊಂದಿಗೆ ನಡೆಯುವ ಕರುಣಾರಸ,ರಾಕ್ಷಸರ ರೌದ್ರ ರಸ ಇವೆಲ್ಲವೂ ಯಕ್ಷಗಾನದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕೊನೆಯಲ್ಲಿ ಒಂದು ಒಳ್ಳೆಯ ಸಂದೇಶದೊಂದಿಗೆ ಯಕ್ಷಗಾನ ಮುಗಿಯುತ್ತದೆ. ಮುಗಿಸುವಾಗಲೂ ಸಹ ರಂಗದಲ್ಲಿ ಹಾಗೂ ಚೌಕಿಯಲ್ಲಿ ಮಂಗಳ ಹಾಡಿಯೇ ಮುಗಿಸುತ್ತಾರೆ.
ಯಕ್ಷಗಾನಕ್ಕೆ ಆಟ ,ದೊಡ್ಡಾಟ,ಬಯಲಾಟ,ದಶಾವತಾರ ಆಟ,ಭಾಗವತರ ಆಟ ಎಂದೂ ಕರೆಯುತ್ತಾರೆ. ಮೊದಲೇ ಹೇಳಿದಂತೆ ಇದೊಂದು ದೇವತಾರಾಧನೆಯ ಕಲೆಯಾಗಿತ್ತು. ಮೊದಲೆಲ್ಲ ಯಕ್ಷಗಾನ ಮಾಡಿಸುತ್ತೇನೆಂದು ಹರಕೆ ಹೊರುತ್ತಿದ್ದರು. ಹಾಗೆ ಹರಕೆ ಹೊತ್ತವರು ಬಯಲುಗಳಲ್ಲಿ ಆಟ ಆಡಿಸುತ್ತಿದ್ದರು.ಹೀಗಾಗಿಯೇ ಇದಕ್ಕೆ ಬಯಲಾಟ ಎನ್ನುತ್ತಿದ್ದಿರಬಹುದೆಂಬುದು ಊಹೆ. ಈ ತರಹದ ಹರಕೆ ಆಟಗಳು ಹೊನ್ನಾವರದ ಗುಂಡಬಾಳದಲ್ಲಿ ಇಂದು ನೋಡಲು ಸಿಗುತ್ತದೆ . ವರ್ಷದ ೬ ತಿಂಗಳುಗಳ ಕಾಲ ಇಲ್ಲಿ ಹರಕೆಯಾಟ ನಡೆಯುತ್ತಿರುತ್ತದೆ, ಆದ್ದರಿಂದಲೇ ಗುಂಡಬಾಳಕ್ಕೆ “ಯಕ್ಷಕಾಶಿ” ಎಂದೇ ಹೆಸರು. ಈ ಕ್ಷೇತ್ರ ಯಕ್ಷಗಾನ ಕಲಿಯುವವವರ ಪಾಲಿಗೆ ಸ್ವಕಲಿಕಾ ಕೇಂದ್ರವಿದ್ದಂತೆ. ಅಲ್ಲದೆ ಹೆಚ್ಚಿನ ಎಲ್ಲ ಯಕ್ಷಗಾನ ಕಲಾವಿದರೂ ಪ್ರತಿ ವರ್ಷ ಒಂದು ದಿನ ಇಲ್ಲಿ ಬಂದು ತಮ್ಮ ಸೇವೆಯನ್ನು ಸಲ್ಲಿಸಿ ಹೋಗುತ್ತಾರೆ. ಈಗೀಗ ಎಲ್ಲ ಕಡೆ ಡೇರೆ ಮೇಳಗಳ ಆಟಗಳು ನಡೆಯುತ್ತದೆ. ಅಂದಿನ ಮೂಡ್ಕಣಿ ಮೇಳ,ಕೊಂಡದಕುಳಿ ಮೇಳ,ಕೆರೆಮನೆ/ಇಡಗುಂಜಿ ಮೇಳ ,ಕರ್ಕಿ ಮೇಳ,ಧರ್ಮಸ್ಥಳ ಮೇಳದಿಂದ ಇಂದಿನ ಪೆರ್ಡೂರು ಮೇಳ,ಸಾಲಿಗ್ರಾಮ ಮೇಳ,ಜಲವಳ್ಳಿ ಮೇಳದ ವರೆಗೂ ಎಲ್ಲವೂ ಯಕ್ಷರಸಿಕರಿಕೆ ಕಲೆಯನ್ನು ಉಣಬಡಿಸುತ್ತಲೇ ಬಂದಿದೆ.
ಯಕ್ಷಗಾನದ ಅಲಿಖಿತವಾದ ಇನ್ನೊಂದು ಭಾಗವೇ ತಾಳಮದ್ದಳೆ. ಇದು ೯೦ ಪ್ರತಿಶತದಷ್ಟು ಯಕ್ಷಗಾನವೇ. ಆದರೆ ಕಲಾವಿದರು ವೇಷಭೂಷಣಗಳಿಲ್ಲದೆ ಒಂದೇ ಕಡೆ ಕುಳಿತುಕೊಂಡು ನಡೆಸಿಕೊಡುವ ಪ್ರಸಂಗ . ಇಲ್ಲಿ ಅರ್ಥಕ್ಕೆ ಪ್ರಧಾನ ಬೆಲೆ. ಕಲಾವಿದ ತನ್ನ ಮಾತಿನ ಮಂಟಪದಲ್ಲಿಯೇ ನೆರೆದಿರುವ ಪ್ರೇಕ್ಷಕರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯಬೇಕಾಗುತ್ತದೆ. ತಾಳಮದ್ದಲೆಯಲ್ಲೇ ನಿಜವಾದ ಕಲಾವಿದ ಉದಯಿಸುವುದು ಹಾಗೂ ಆತನ ಸಾಮರ್ಥ್ಯ ಪರೀಕ್ಷೆಯಾಗುವುದು. ನಾನೂ ತಾಳಮದ್ದಳೆಯೆಂದರೆ ಅಸಡ್ಡೆ ತೋರುತ್ತಿದ್ದೆ ಆದರೆ ಲಕ್ಷೀಕಾಂತ ಹೆಗಡೆಯವರ ಸತ್ಯ ಹರಿಶ್ಚಂದ್ರದ ಹರಿಶ್ಚಂದ್ರನನ್ನು ಕಂಡ ಮೇಲೆ ಅದರ ಮೇಲಿನ ಉತ್ಸಾಹ ಬೆಳೆಯಿತು. ಅಷ್ಟು ಪ್ರಖರವಾದ ಮಾತಿನ ಶೈಲಿ ,ಇಂತವರ ಕಣ್ಣಲ್ಲೂ ನೀರು ತರಿಸುವಂತಹ ಅದ್ಭುತ ವಾಕ್ಚಾತುರ್ಯ ನನ್ನನ್ನು ಅತೀವವಾಗಿ ಕಾಡಿತ್ತು. ಇದು ಕೇವಲ ಉದಾಹರಣೆಯಷ್ಟೇ.ಅಷ್ಟರ ಮಟ್ಟಿಗೆ ತಾಕತ್ತು ತಾಳಮದ್ದಲೆಗೆ ,ಕಲಾವಿದನಿಗಿರುತ್ತದೆ.
ಸ್ನೇಹಿತರೆ ಯಾವುದೇ ದೃಕ್ ಶ್ರಾವಣ ಮಾಧ್ಯಮಗಳಿಲ್ಲದಿರುವಾಗಲೇ ಲಕ್ಷಾಂತರ ಜನರ ಮನಸೂರೆಗೊಂಡಿದ್ದ ಯಕ್ಷಗಾನ ಇಂದು ತನ್ನ ಪ್ರೌಢಿಮೆಯನ್ನು ಕಳೆದುಕೊಳ್ಳುತ್ತಿದೆ. ರಾತ್ರಿಯಿಡಿ ನಡೆಯುತ್ತಿದ್ದ ಆಟಗಳು ಇಂದು ಕಾಲಮಿತಿಗೆ ಬಂದು ನಿಂತಿದೆ. ಇದು ಒಳ್ಳೆಯ ಬೆಳವಣಿಗೆಯೇ ಆದರೂ ಯಕ್ಷಗಾನದ ಅವನತಿಗೆ ಬರೆದ ಮುನ್ನುಡಿ ಎಂಬುದು ನನ್ನ ಭಾವನೆ. ಪುರಾಣದ ಪ್ರಸಂಗಗಳನ್ನು ಆಡಿಸುತ್ತಿದ್ದ ಮೇಳಗಳೂ ಹೊಸ ಹೊಸ ಪ್ರಸಂಗಗಳ ಪ್ರಯೋಗ ಮಾಡತೊಡಗಿವೆ. ಯಕ್ಷಗಾನದಲ್ಲಿ ಸಿನಿಮಾ ಶೈಲಿಯ ಹಾಡುಗಳು ಕೇಳಿಸುತ್ತಿದೆ. ಕಲಾವಿದ ಹಣದ ಹಿಂದೆ ಬಿದ್ದಿದ್ದಾನೆ. ಯುವ ಜನತೆ ಯಕ್ಷಗಾನದಲ್ಲಿ ನಿರಾಸಕ್ತಿ ತಳೆದಿದೆ. ಉಳಿದ ಕಲಾಪ್ರಕಾರಗಳನ್ನು ಯಕ್ಷಗಾನದೊಂದಿಗೆ ಕಸಿಮಾಡುವ ಕೆಲಸವೂ ನಡೆಯುತ್ತಿದೆ. ಇವೆಲ್ಲವೂ ಯಕ್ಷಗಾನದ ಭವಿಷ್ಯಕ್ಕೆ ಮಾರಕವಾಗುವುದರಲ್ಲಿ ಸಂದೇಹವೇ ಇಲ್ಲ. ಅಪ್ಪಟ ಕನ್ನಡವನ್ನು ಮಾತನಾಡುವ ,ಇತರ ಜಾನಪದ ಕಲೆಗಳಲ್ಲಿಲ್ಲದ ,ಶಾಸ್ತ್ರದ ಚೌಕಟ್ಟಿನಿಂದ ಕೂಡಿದ್ದ,ಉತ್ತಮ ಸಂದೇಶ ಸಾರುವ ಯಕ್ಷಗಾನವನ್ನು ನಾಳೆಗಾಗಿ ಉಳಿಸಿಕೊಳ್ಳೋಣ. ಯಕ್ಶಗಾನಮ್ ವಿಶ್ವಗಾನಮ್ . ಬನ್ನಿ ಬದಲಾಗೋಣ,ಬದಲಾಯಿಸೋಣ.
ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ
ಕಲಿಸಲದನಳವಲ್ಲ ಬಾಹ್ಯ ಬೋಧನೆಯಿಂ
ಒಲಿದೊಳಿಸಿಕೊಳುವ ಲೌಕಿಕ ನಯದ ಸೊಗಸಿನಿಂ
ತಿಳಿವುದೊಳಹದದಿಂದ -ಮಂಕುತಿಮ್ಮ ।

Leave a Comment