ನಮ್ಮ ವಿಶ್ವವೇ ಒಂದು ಅದ್ಭುತ.ಇಡೀ ಸೌರಮಂಡಲದಲ್ಲಿ ಜೀವಿಗಳನ್ನೂ, ಸುಂದರ ವಾತಾವರಣವನ್ನೂ ಹೊಂದಿದ ಏಕೈಕ ಗ್ರಹ ನಮ್ಮ ಭೂಮಿ..ಈ ಭೂಮಿ ಸೃಷ್ಟಿಯಾದಾಗಿನಿಂದ ಹಿಡಿದು ಇಲ್ಲಿಯವರೆಗೂ ಕಂಡ ಅನಾಹುತಗಳೆಷ್ಟೋ?, ಅಪಘಾತಗಳೆದೆಷ್ಟೊ?!!…ಆದರೆ ಪ್ರತಿಬಾರಿಯೂ ಪವಾಡವೋ ಎಂಬಂತೆ ಮತ್ತೆ ಪುತಿದೆದ್ದು ನಿಂತಿರುವುದು ಮಾನವ ಸಾಹಸಕ್ಕೆ ಸಾಕ್ಷಿ. ಮಾನವ ತನ್ನ ಅಪರಿಮಿತವಾದ ಬುದ್ಧಿ, ಹಾಗೂ ಕೌಶಲ್ಯದಿಂದ ಪೃಕೃತಿಯ ಎಲ್ಲ ಹೊಡೆತಗಳನ್ನೂ ಸಮರ್ಥವಾಗಿ ಎದುರಿಸಿ ಗೆದ್ದಿದ್ದಾನೆ. ಹಾಗಾಗಿ ವಿಜಯದ ಮದವೇರಿದ್ದಂತೂ ಸುಳ್ಳಲ್ಲ. ತನ್ನ ಕ್ರೌರ್ಯ ಪರಂಪರೆಗೆ ಎಲ್ಲೆಯೇ ಇಲ್ಲ ಎನ್ನುವಂತೆ ವರ್ತಿಸುತ್ತ ಬಂದಿದ್ದಾನೆ.. ಹಾಗಂತ ಇದು ಬೆರೆಯಾರದೋ ಕಥೆಯಲ್ಲ. ನಮ್ಮ ನಿಮ್ಮ ಕಥೆ…ನಾವು ನೀವುಗಳು ಮಾಡಿಕೊಂಡ ಯಡವಟ್ಟಿನ ವ್ಯಥೆ. ಹೌದು ಮಾನವ ಇಂದು ಅಭೇದ್ಯವಾಗಿ ಬೆಳೆದಿದ್ದಾನೆ. ನಾವಿಂದು ಮಂಗಳನ ಅಂಗಳಕ್ಕೂ ಇಳಿದಿದ್ದೇವೆ,ಭೂಮಿಯ ಆಳಕ್ಕೂ ಇಣುಕಿದ್ದೇವೆ. ಪರಿಣಾಮವಾಗಿ ಪರಿಸರದ ಮೇಲೆ ಶೋಷಣೆಯ ಸವಾರಿಯನ್ನೇ ಮಾಡಿದ್ದೇವೆ. ವನ್ಯ ಪ್ರಾಣಿಯಂತೆ ಗುಡ್ಡ ಗಾಡುಗಳಲ್ಲಿ , ಕಾಡು ಮೇಡು ಗಳಲ್ಲಿ ಅಲೆಯುತ್ತಿದ್ದ ನಾವುಗಳು ಸಾವಕಾಶವಾಗಿ ವಿಕಾಸ ಎಂಬ ಹೆಸರಿನಲ್ಲಿ ವಿನಾಶಕ್ಕೆ ನಾಂದಿ ಹಾದಿದ್ದೇವೆ. ಬಹುಶಃ ಈ ವಿನಾಶದ ಪುಸ್ತಕ ಒಳಗೊಂಡಿರದ ಸನ್ನಿವೇಶಗಳೇ ಇಲ್ಲ. ಆದರೂ ನಾವು ಈ ವಿನಾಶದ ಹೆಸರಿನಲ್ಲಿ ಸಾಧಿಸಿದ ಪ್ರಗತಿಯೂ ಅಂಥಿಂಥದಲ್ಲ. ರಸ್ತೆಗಳು ಇಂದು ಮೂಲೆ,ಮೂಲೆಯನ್ನೂ ಹೊಕ್ಕಿವೆ, ವಿದ್ಯುತ ಮನೆ ಮನೆಯನ್ನು ಬೆಳಗಿಸಿದೆ. ಸಾರಿಗೆ ವ್ಯವಸ್ಥೆ ದೇಶದೇಶಗಳನ್ನೇ ಬೆಸೆದಿದೆ. ಸಂಪರ್ಕ ಮಾಧ್ಯಮಗಳು ಪೂರಾ ವಿಶ್ವವನ್ನೇ ಒಂದುಗೂಡಿಸಿದೆ….ಇನ್ನೂ ಹೇಳ ಹೊರಟರೆ ಸಾಲು ಬೆಳೆಯುತ್ತಲೇ ಇರುತ್ತದೆ. ಹೊಡೆತಗಳ ಮೇಲೆ ಹೊಡೆತಗಳನ್ನು ಅನುಭವಿಸಿಯೂ ನಾವುಗಳು ಬದುಕುತ್ತಿರುವ ಪರಿ ನಿಜಕ್ಕೂ ಆ ಸೃಷ್ಟಿಕರ್ತನಿಗೇ ಅಚ್ಚರಿ ಉಂಟುಮಾಡುವಂಥದ್ದು… ಇಡೀ ವಿಶ್ವವನ್ನೇ ಒಂದು ಕಾಲದಲ್ಲಿ ಬೆಂಬಿಡದೆ ಕಾದಿದ್ದ ಕಾಲರಾ ರೋಗ ಇಂದು ಹೆಸರೂ ಇಲ್ಲದಂತೆ ಮಾಯವಾಗಿದೆ. ಸಹಸ್ರಾರು ಸಹಸ್ರಾರು ಸುನಾಮಿಗಳನ್ನು ಎದುರಿಸಿದ ಜಪಾನ್ ಏನೂ ಆಗಲೇ ಇಲ್ಲವೇನೋ ಎಂಬಂತೆ ಮುಂದಡಿಯಿಡುತ್ತಿದೆ. ಕೋಟಿ ಸಂಖ್ಯೆಯಲ್ಲಿ ಜೀವಗಳನ್ನು ಬಲಿ ತೆಗೆದುಕೊಂದು ಹೋಗುವ ಭೂಕುಸಿತ ಹಾಗೂ ಭೂಕಂಪಗಳು , ಬಾರಿ ಬಾರಿ ಬಡಿದೆಚ್ಚರಿಸಿದರೂ ನಾವು ಬಗ್ಗುವ ರೀತಿಯನ್ನು ಮೀರಿದ್ದೇವೆ. ಜಗತ್ತನ್ನು ಕಾಡಿದ ಪ್ಲೇಗ್ ಮಹಾಮಾರಿ ಇಂದು ವಿಳಾಸವೆ ಇಲ್ಲದ ಅಬ್ಬೇಪಾರಿಯಾಗಿದೆ.ಕಾಡ್ಗಿಚ್ಚು, ಪ್ರವಾಹಗಳನ್ನು ನಾವು ದಿನಬೆಳಗಾದರೆ ನೋಡಿ ಮರೆತು ಬಿಡುವ ಸನ್ನಿವೇಶಕ್ಕೆ ಬಂದಿದ್ದೇವೆ. ಇದೆಲ್ಲದರ ಅರ್ಥ ಒಂದೇ. ಎಲ್ಲದಕ್ಕೂ ಒಂದು ಕೊನೆ ಇದ್ದೇ ಇದೆ. ಅದಕ್ಕಾಗಿಯೇ ಹೇಳಿದ್ದು ಕಡಲ ನೆರೆ ತಗ್ಗುವುದು , ಪೊಡವಿ ಧೂಳ್ ಇಳಿಯುವುದು ಎಂದು.. ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಅಡನ್ನೇ ಬಹಳ ಮಾರ್ಮಿಕವಾಗಿ ನುಡಿದ್ದಾರೆ. ಕಡಲ್ ಗಳೊಂದಾದೊಡಮ್ ಪೊಡವಿ ಹಬೆಯಾದೊಡಮ್ಬಿಡದಿರೊಳ ನೆಮ್ಮದಿಯ ಬಿಡು ಗಾಬರಿಕೆಯಕಡಲ ನೆರೆ ತಗ್ಗುವುದು ಪೊಡವಿ ಧೂಳ್ ಇಳಿಯುವುದುಗಡುವಿರುವುದೆಲ್ಲಕುಂ – ಮಂಕುತಿಮ್ಮ// ಸಪ್ತ ಸಾಗರಗಳು ಒಂದುಗೂಡಿದರೂ , ಅಡವಿ ಹೊತ್ತಿ ಉರಿದರೂ ಅದು ಕೊನೆಗೊಮ್ಮೆ ಅಂತ್ಯವಾಗಲೇ ಬೇಕು. ಅಲ್ಲಿಯವರೆಗೆ ನಮ್ಮ ಗಾಬರಿಕೆ , ಭಯ, ನೆಮ್ಮದಿಗಳನ್ನು ಮೂಟೆ ಕಟ್ಟಿಕೊಳ್ಳಬೇಕು..ಎಲ್ಲದಕ್ಕೂ ಒಂದು ಕೊನೆಯಿದೆ ಎಂಬ ಸುಲಭಾರ್ಥವನ್ನು ನೀಡುವ ಈ ಕಗ್ಗವೊಂದೇ ಸಾಕು ಮನುಷ್ಯ ಆಶಾವಾದಿ ಎಂಬುದಕ್ಕೆ ಉದಾಹರಣೆಯಾಗಿ. ಖಂಡಿತ ಹೌದು..ಇದೀಗ ಎದುರಿಸುತ್ತಿರುವುದೂ ಅಂಥದೇ ಸ್ಥಿತಿ. ಕೋವಿಡ್ -19 ಎಂಬ ಸಾಮಾಜಿಕ ರೋಗ ಪೂರ್ತಿ ವಿಶ್ವವನ್ನೇ ಅಲುಗಾಡಿಸಿಬಿಟ್ಟಿದೆ. ವಿಜ್ಞಾನಿಗಳು ಹಗಲು ರಾತ್ರಿ ಎನ್ನದೆ ಔಷಧಿಗಾಗಿ ಶತಪ್ರಯತ್ನ ಮಾಡುತ್ತಿದ್ದಾರೆ. ಒಂದು ಕಡೆ ಹೆಣಗಳು ರಾಶಿರಾಶಿಯಾಗಿ ಬೀಳುತ್ತಿದ್ದರೆ ಮತ್ತೊಂದು ಕಡೆ ಬದುಕಿದೆಯಾ ಬಡಜೀವವೇ ಎಂದು ಸೋಂಕಿತರು ಗುಣವಾಗಿ ಹೊರಬರುತ್ತಿದ್ದಾರೆ. ಅಂಕಿ ಸಂಖ್ಯೆಯ ಆಟವೇನೋ ಎಂಬಂತೆ ಕೊರೊನಾ ಜಾಕ್ ಪಾಟ್ ಹೊಡೆಯುತ್ತಿದೆ.ಮನೆಯಲ್ಲಿ ಕುಳಿತವರೂ ಈಗ ಅನ್ ಲಾಕ್ ಆದಾಗಿನಿಂದ ಅಡ್ಡಾಡಲು ತೊಡಗಿದ್ದಾರೆ.ಕೆಲವರು ಮನೆಯಲ್ಲೇ ಕುಳಿತು, ಕುಳಿತು ಮನೋರೋಗಿಗಳಾಗುವಂತೆ ಕಾಣುತ್ತಿದ್ದಾರೆ. ಕೆಲಸವಿಲ್ಲದೆ ಇಡೀ ದಿನ ಯಾವುದೇ ಚಟುವಟಿಕೆಯಿಲ್ಲದೆ ಅದೆಷ್ಟೋ ಜನ ತಲೆ ಚಿಟ್ಟು ಹಿಡಿದು ಕುಳಿತಿದ್ದಾರೆ. ಒಂದು ವರದಿ ಹೇಳುವಂತೆ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ ಲಾಕ್ ಡೌನ್ ನಿಂದಾಗಿ 6 ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ನಮಗೀಗ ಕೊರೊನಾ ಎಂಬ ಚೀನಿ ವೈರಸ್ ಗಿಂತ ಮನೋದುರ್ಬಲತೆಯದ್ದೇ ಚಿಂತೆಯಾಗಿದೆ. ಕುಳಿತಲ್ಲಿ ಕೂರಲು ಆಗುತ್ತಿಲ್ಲ, ನಿಂತಲ್ಲಿ ನಿಲ್ಲಲು ಆಗುತ್ತಿಲ್ಲ, ಫೋನ್ ನೋಡಲು ಬೇಸರ, ಹೊರಗಡೆ ಅಡ್ಡಾಡಲೂ ಭಯ ಹಾಗಾಗಿ ನಮಗೆ , ನಭೋಮಂಡಲವನ್ನೇ ಗೆದ್ದ ಮಾನವಗೆ ತನ್ನ ಮನಸ್ಸನ್ನು ತಾನು ಗೆಲ್ಲುವುದೇ ಕಷ್ಟವಾಗಿದೆ.. ಹೇಗೆ ಹಿಂದೆಲ್ಲ ಬಂದಪ್ಪಳಿಸಿದ ಮಹಾರೋಗಗಳು ಇಂದು ಮಕಾಡೆ ಮಲಗಿವೆಯೋ ಹಾಗೆಯೇ ಇದೂ ಸಹ ….ಮುಂದೊಂದು ದಿನ ಕಣ್ಮರೆಯಾಗಲೇ ಬೇಕು.ಅಲ್ಲಿಯವರೆಗೆ ಶಾಂತಿ, ಸಮಾಧಾನ ತಾಳ್ಮೆಯನ್ನು ರೂಢಿಸಿಕೊಳ್ಳಲೇ ಬೇಕು…ಮನೋನಿಗ್ರಹ ಮಾಡಲೇಬೇಕು…..ಬೇರೆ ದಾರಿಯೇ ಇಲ್ಲ….ಈಗ ತಾಳಿದವನು ನಾಳೆ ಬಾಳಿಯಾನು…. ಸ್ನೇಹಿತರೆ, ಭಾರತ ಸಣ್ಣಪುಟ್ಟ ರಾಷ್ಟ್ರವಲ್ಲ , ನಮ್ಮ ಹಿರಿಯರು ಮನೋಬಲ ಮತ್ತು ಆತ್ಮಬಲದಲ್ಲಿ ಜಗತ್ತಿಗೆ ದಾರಿತೋರಿದವರು…ಅವರ ತಪೋಬಲದ ಭೂಮಿಯಾದ ಭರತ ನೆಲದಲ್ಲಿ ಜನಿಸಿದ ನಾವುಗಳು ಧನ್ಯರು…..ಇಂದು ವಿಶ್ವ ಯೋಗ ದಿನ….ಯೋಗ ,ಧ್ಯಾನ ,ಪ್ರಾಣಾಯಾಮಗಳ ಮೂಲಕ ಮನವನ್ನು ಲಗಾಮು ಹಾಕಿ ನಿಲ್ಲಿಸಲೇಬೇಕು….ಆ ಮೂಲಕ ಜಗತ್ತಿಗೇ ಮಾದರಿಯಾಗಬೇಕು…ಬನ್ನಿ ಬಲಿಷ್ಠ ಭಾರತವನ್ನು ಕಟ್ಟೋಣ..ಈ ಬಾರಿ ಕಟ್ಟುವ ಭಾರತ ಸಣ್ಣಪುಟ್ಟದಾಗಿರಬಾರದು…ಉತ್ತೀಷ್ಟೋ,ದೃಢೀಷ್ಟೋ, ಬಲಿಷ್ಟೋ……ಎಂಬಂತೆ ವಿಶ್ವಗುರು ಭಾರತವನ್ನು ನಿರ್ಮಿಸೋಣ…..ಬನ್ನಿ ಬದಲಾಗೋಣ ,ಬದಲಾಯಿಸೋಣ..
Leave a Comment