‘ಗುರು’-ಯಾರು ನಾವು ನಡೆವ ದಾರಿಗೆ ಬೆಳಕಾಗಿ ನಿಲ್ಲುತ್ತಾರೋ ಅಂಥವರನ್ನು ಗುರು ಎಂದು ಜಗತ್ತು ಗೌರವಿಸಿದೆ. ಯಾವುದೋ ಗೊತ್ತಿಲ್ಲದ ಗುರಿ ಹಿಡಿದು ಹೊರಟವನನ್ನು ಕೈ ಹಿಡಿದು ನಡೆಸಿ ಆತ ಕಂಡ ಕನಸಿಗೆ ನೀರೆರೆದು ಪೋಷಿಸಿ, ಆ ಕನಸಿನ ಬೀಜ ನಾಳೆ ಫಲವಾಗಿ ನಾಲ್ವರಿಗೆ ನೆರಳಾಗಿ ಪರೋಪಕಾರಿಯಾಗುವವರೆಗೂ ಒಬ್ಬ ಗುರುವಿನ ಪಾತ್ರ ಅತ್ಯಂತ ಮಹೋದರವಾದದ್ದಾಗಿರುತ್ತದೆ.
ಒಬ್ಬ ಉತ್ತಮ ಗುರು ಮನಸ್ಸು ಮಾಡಿದಂತೆ ಎಂತಹ ಶತದಡ್ಡನನ್ನು ಸಹ ಜ್ಞಾನಿಯಾಗಿಸಬಹುದು. ಗುರು ಪದದ ಅರ್ಥವೇ ಅದು.ಗು ಕಾರವು ಸಿದ್ಧಿಯನ್ನೂ, ರು ಕಾರವು ಪಾಪವನ್ನೂ ಕಳೆಯುವುದು.ಗುರುವಿನ ಕಾರ್ಯದ ಮೇಲೆಯೇ ಆತನ ಹೆಸರು. ಕಾಯಕಕ್ಕೆ ತಕ್ಕಂತೆ ಗುರು ರೂಢನಾಮವಾಗಿ,ಶ್ರಮಕ್ಕೆ ತಕ್ಕಂತೆ ಅನ್ವರ್ಥ ನಾಮವಾಗಿ ಬದಲಾಗುತ್ತಾನೆ.
ಗುರು ಎಂಬುದು ಉರಿಯುವ ಪ್ರಜ್ವಲ ಸೂರ್ಯನಿದ್ದಂತೆ.ವಿದ್ಯಾರ್ಥಿ ಎಂಬ ಹರಿಯುವ ನೀರನ್ನು ಆತ ಆವಿ ಮಾಡಿ ಮೇಲಕ್ಕೆತ್ತಲಿಲ್ಲ ಅಂತಾದರೆ ನಾಳೆ ನಾವು ಕೆಲಸಗಳ ಮೂಲಕ ವರ್ಷಾಧಾರೆಯಾಗಿ ಮತ್ತೆ ಭೂಮಿಗೆ ಬೀಳಲು ಸಾಧ್ಯವಿಲ್ಲ.ತಾತ್ಪರ್ಯವಾಗಿಯೇ ನಾವುಗಳು ಗುರುಗಳಿಗೆ ನೀಡಿದ ಸ್ಥಾನಮಾನ ಬಹಳ ಎತ್ತರವಾದದ್ದು. ಗುರು ಎಂದರೆ ತೂಕ ಎಂದರ್ಥ.ಅತ್ಯಂತ ಹೆಚ್ಚಿನ ಜ್ಞಾನ ತೂಕವನ್ನು ಹೊಂದಿದವರು ಗುರುವಾಗಬಹುದು. ಗುರುವೆಂಬುದುದಕ್ಕೆ ವ್ಯಾಖ್ಯಾನವಾಗಿ ಸಂಸ್ಕೃತ ಶ್ಲೋಕವೊಂದು ಹೀಗೆ ಹೇಳುತ್ತದೆ-ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಾಶಲಾಕಾಯಚಕ್ಷುರುನ್ಮೀಲಿತಂಯೇನ ತಸ್ಮೈ ಶ್ರೀಗುರವೇ ನಮಃ// ಅಜ್ಞಾನ ಎಂಬ ಕತ್ತಲೆಯಿಂದ ಕುರುಡಾಗಿದ್ದ ಅಕ್ಷಿಗಳನ್ನು, ಜ್ಞಾನ ಎಂಬ ಶಲಾಕೆಯಿಂದ ಹೊಡೆದೋಡಿಸಿ ಅರಿವು ಎಂಬ ದೀಪವನ್ನು ಮನದಲ್ಲಿ ಬೆಳಗಿಸುವವನು ಎಂಬುದು ಇದರ ಅರ್ಥ.
ಗುರುವೆಂದರೆ ಕೇವಲ ಒಂದು ಪದವಲ್ಲ ಅಥವಾ ಪದವಿಯೂ ಅಲ್ಲ. ಅದು ಅತ್ಯಂತ ಜವಾಬ್ದಾರಿಯುತ ಸ್ಥಾನ.ಅನೇಕಾನೇಕ ಸಾಧಕರನ್ನು ಸಾಧನೆಯೆಡೆಗೆ ಕರೆದೊಯ್ದ ಅತ್ಯಮೂಲ್ಯ ಶಕ್ತಿ.ಶಿಷ್ಯನ ದಾರಿಗೆ ದೀವಿಗೆಯಾಗಿ ನಿಂತು ಮುನ್ನಡೆಸುವ ಅದಮ್ಯ ಚೇತನ,ಚೈತನ್ಯ.ಹರ ಮುನಿದರೆ ಗುರು ಕಾಯ್ವ ಎಂಬ ನಾಣ್ಣುಡಿ ಬಂದದ್ದೂ ಆ ಕಾರಣದಿ0ದಲೇ ಇರಬೇಕು.ಎಂತಹುದೇ ಕಷ್ಟ ಬರಲಿ ಗುರುವೆನ್ನುವಾತ ಸರಿಯಾದ ಮಾರ್ಗದರ್ಶನ ನೀಡಿದ ಎಂತಾದರೆ ಅದು ಕರಗಿ ನೀರಾಗಿ ಹೋಗುವುದರಲ್ಲಿ ಸಂಶಯವಿಲ್ಲ.ಬ್ರಹ್ಮ ಬರೆದ ಹಣೆಬರಹವನ್ನೂ ಬದಲಾಯಿಸುವ ತಾಕತ್ತು ಗುರು ಎದೆಯಲ್ಲಿ ಬಿತ್ತಿದ ಅಕ್ಷರಕ್ಕಿದೆ.
ಈ ಗುರು /ಶಿಕ್ಷಕನ ಪಾತ್ರ ಎಷ್ಟು ಗೌರವಾಯುತವಾದದ್ದು,ಅಪರೂಪವಾದದ್ದು ಎಂಬುದಕ್ಕೆ ವಿ.ಕೃ.ಗೋಕಾಕ್ ರಿಗಾದ ಘಟನೆ ನೆನಪಿಗೆ ಬರುತ್ತದೆ. ಒಮ್ಮೆ ಡಾ.ಗೋಕಾಕರು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು. ರಾತ್ರಿ ಪ್ರವಾಸವಾದ್ದರಿಂದ ಪೈಜಾಮ ಶರ್ಟು ಹಾಕಿಕೊಂಡಿದ್ದರು.ಮಲಗುವ ಮುನ್ನ ಶರ್ಟು ತೆಗೆದಿಟ್ಟು ಬನಿಯನ್ ಮೇಲೆ ಮಲಗಿದ್ದರು.ಬೆಳಿಗ್ಗೆ ಎಚ್ಚರವಾದಾಗ ರೈಲು ಒಂದು ನಿಲ್ದಾಣದಲ್ಲಿ ನಿಂತಿತ್ತು. ಗೋಕಾಕರು ಕಿಟಕಿಯಿಂದ ಆಚೆ ನೋಡಿ ಹತ್ತಿರದಲ್ಲೇ ಚಹಾದ ಅಂಗಡಿ ಇರುವುದನ್ನು ಕಂಡರು.ಚಹಾ ಕುಡಿಯಬೇಕೆಂದು ಅವಸರದಿಂದ ಪೈಜಾಮದ ಜೇಬಿನಲ್ಲಿ ಎರದು ರೂಪಾಯಿ ಹಾಕಿಕೊಂಡು ಕೆಳಗಿಳಿದರು.
ನೇರವಾಗಿ ಚಹಾದ ಅಂಗಡಿಗೆ ನಡೆದು ಚಹಾ ಆರ್ಡರ್ ಮಾಡಿದರು. ಚಹ ಕುಡಿಯುತ್ತಿದ್ದಂತೆ ರೈಲು ಹೊರಡತೊಡಗಿತು. ಇವರು ಗಾಬರಿಯಿಂದ ಚಹಾ ಕುಡಿಯುವುದನ್ನೂ ಬಿಟ್ಟು ರೈಲಿನ ಕಡೆಗೆ ಓದಿದರು. ಆದರೆ ರೈಲು ಹೊರಡುತ್ತಾ ವೇಗವನ್ನು ಪಡೆದುಕೊಂಡಿತು. ಇವರು ಎಷ್ಟೇ ಧಾವಂತದಿಂದ ಓಡಿದರೂ ರೈಲು ಮುಂದೆ ಹೋಗಿಯೇ ಬಿಟ್ಟಿತು.
ಡಾ.ಗೋಕಾಕರಿಗೆ ಈಗ ಫಜೀತಿ. ಹಾಕಿಕೊಳ್ಳಲು ಬಟ್ಟೆಯಿಲ್ಲ,ಹಣವೂ ಇಲ್ಲ. ಇದರೊಂದಿಗೆ ತಾವು ಹೊರಟಿದ್ದ ಮಹತ್ವದ ಕಾರ್ಯಕ್ರಮಕ್ಕೂ ಹೋಗಲಾಗುವುದಿಲ್ಲ. ಇನ್ನೆನು ಮಾಡುವುದು ಎಂದು ಚಿಂತಿಸುವಷ್ಟರಲ್ಲಿ ರೈಲು ಪ್ಲಾಟ್ ಫಾರ್ಮ್ ದಾಟಿಯಾಗಿತ್ತು. ಇವರು ಹತಾಶರಾಗಿ ನಿಂತಿದ್ದಾಗ ಒಂದು ಆಶ್ಚರ್ಯಕರ ಸಂಗತಿ ಘಟಿಸಿತು. ಹೊರಟಿದ್ದ ರೈಲು ನಿಂತಿತು. ಇವರು ನೋಡುತ್ತಿದ್ದಂತೆ ಹಿಂದೆ ಹಿಂದೆ ಬರತೊಡಗಿತು. ರೈಲಿನ ಗಾರ್ಡ್ ಇದ್ದ ಬೋಗಿ ಪ್ಲಾಟ್ ಪಾರ್ಮ್ ಮೇಲೆ ಬರುತ್ತಿದ್ದಂತೆ ಅದರಲ್ಲಿದ್ದ ಗಾರ್ಡ ಹೊರಗೆ ಹಾರಿಕೊಂಡ. ಗೋಕಾಕರು ನೋಡುತ್ತಿರುವಂತೆಯೇ ಆತ ಓಡಿಬಂದು ಅವರ ಕಾಲು ಮುಟ್ಟಿ ನಮಸ್ಕರಿಸಿದ.
ಇವರು ಬೆರಗಿನಲ್ಲಿದ್ದಂತೆಯೇ ಆತ ಹೇಳಿದ, “ಸರ್ ನಾನು ಕರ್ನಾಟಕ ಕಾಲೇಜಿನಲ್ಲಿ ನಿಮ್ಮ ವಿದ್ಯಾರ್ಥಿಯಾಗಿದ್ದೆ. ನಾನು ಬಿ.ಎ ಓದುತ್ತಿರುವಾಗ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದೇನೆಂದು ನೀವು ಮೂರು ವರ್ಷ ಡಿಬಾರ್ ಮಾಡಿದ್ದೀರಿ.” “ಹೌದಲ್ಲ,ನೀನು ಮೆನೇಜಿಸ್ ಅಲ್ಲವೇ?” ಕೇಳಿದರು ಗೋಕಾಕ್. “ಹೌದು ಸರ್. ಡಿಬಾರ್ ಮಾಡಿದ್ದು ನಿಮ್ಮ ತಪ್ಪಲ್ಲ. ಅದು ನನ್ನ ತಪ್ಪಿಗೆ ಶಿಕ್ಷೆ. ಆ ಬಳಿಕ ನಾನು ನಿಮ್ಮನ್ನು ಕಂಡು ತಪ್ಪೊಪ್ಪಿಕೊಂಡಾಗ ನೀವು ಡಿಬಾರ್ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದಿರಿ.
ನಾನು ಪರಿಶ್ರಮದಿಂದ ಓದಿದೆ.ಮರುವರ್ಷ ಪಾಸಾದೆ.ಈ ಗಾರ್ಡ್ ಕೆಲಸ ಸಿಕ್ಕಿತು.”ಎಂದ . ಗೋಕಾಕರು ಬಹಳ ಸಂತೋಷಗೊಂದು ರೈಲನ್ನೇರಿ ತಮ್ಮ ಪ್ರಯಾಣ ಮುಂದುವರಿಸಿದರು. ಇದು ಒಬ್ಬ ಆದರ್ಶ ಶಿಕ್ಷಕ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಣ್ಣ ನಿದರ್ಶನ. ವಿದ್ಯಾರ್ಥಿಗಳನ್ನು ವಿಷಯದಲ್ಲಿ ಪ್ರೋತ್ಸಾಹಿಸಬಹುದು.ಅವರ ಬದುಕಿಗೆ ಮಾರ್ಗದರ್ಶನ ನೀಡಬಹುದು. ಸಮಾಜದಲ್ಲಿ ಪರಿವರ್ತನೆ ತರಬಹುದು.ಇದೆಲ್ಲದರ ಜೊತೆಗೆ ಮುಂದೆ ಹೋದ ರೈಲನ್ನೂ ಮರಳಿ ಪ್ಲಾಟ್ಫಾರ್ಮ್ ಗೆ
ಕರೆತರಬಹುದು.
ಇದು ಶಿಕ್ಷಕನಿಗಿರುವ ಶಕ್ತಿ. ಜಾನಪದದಲ್ಲಿ ಒಂದು ಮಾತಿದೆ,’ಮುಂದೆ ಗುರಿ ,ಹಿಂದೆ ಗುರು’.ಹಿಂದಿನ ಕಾಲದಲ್ಲಿ ಹಾಗಿದ್ದುದೂ ಸತ್ಯ. ಸಾಧನೆಯ ಹಾದಿಯಲ್ಲಿ ತಪಸ್ಸನ್ನಾಚರಿಸುವವ ಗುರುವಿನ ಮಾರ್ಗದರ್ಶನದಂತೆ ನಡೆಯುತ್ತಿದ್ದ. ಸಾಧನೆಯ ಶಿಖರವನ್ನೇರುತ್ತಿದ್ದ. ಆದರೆ ಇಂದು ಹಾಗಿಲ್ಲ. ನಮಗೀಗ ಮುಂದೆ ಗುರಿಯೂ ಇಲ್ಲ,ಹಿಂದೆ ಗುರುವೂ ಇಲ್ಲ. ಶಿಕ್ಷಕರ ಬಗೆಗಿದ್ದ ಗೌರವ ತಿರಸ್ಕಾರವಾಗಿ ಬದಲಾಗಿದೆ.
ಇಂದಿನ ಆನ್ಲೈನ್ ಶಿಕ್ಷಣ ಈ ಸಂಪ್ರದಾಯಕ್ಕೆ ಕೊಟ್ಟ ಪುಷ್ಟಿ ಅಷ್ಟಿಷ್ಟಲ್ಲ. ಶಿಕ್ಷಣ ಹಣ ಮಾಡುವ ಉದ್ಯೋಗವಾದ ಮೇಲೆ ಶಿಕ್ಷಕ ಕೇವಲ ಒಬ್ಬ ಉದ್ಯೋಗಿಯಾಗಿ ಮಾತ್ರ ಉಳಿದಿದ್ದಾನೆ. ಕಾಲ ಬದಲಾಗುತ್ತಿದೆ. ಶಿಕ್ಷಕರಿಗೇ ಎದುರು ಮಾತನಾಡುವ ಸಂಸ್ಕೃತಿ ಬೆಳೆಯುತ್ತಿದೆ. ಇದು ಇಂದಿನ ಗುರು ಶಿಷ್ಯರ ಸಂಬಂಧಕ್ಕೆ ಹಿಡಿದ ‘ಕೈಗನ್ನಡಿ’ಯಾಗಿದೆ. ಮಕ್ಕಳ ಸುಪ್ತ ಶಕ್ತಿಯನ್ನು ಜಾಗೃತಗೊಳಿಸಬೇಕಾಗಿದ್ದ ಗುರು ವಿಂದು ದುಡ್ಡಿನ ಹಿಂದೆ ಬಿದ್ದಿದ್ದಾನೆ. ಶಿಕ್ಷಕರೆಂದರೆ ದೇಶ ಕಟ್ಟುವ ಅಪರೂಪದ ಸೈನಿಕರು.
ನಿಜವಾಗಿಯೂ ಒಂದು ರಾಷ್ಟ್ರವನ್ನು,ರಾಷ್ಟ್ರೀಯತೆಯನ್ನು ಬೆಳೆಸುವವ ಒಬ್ಬ ಸಮರ್ಥ ಗುರು ಮಾತ್ರ.ಇದು ಹಿಂದೂ,ಇಂದೂ,ಮುಂದೂ ಸಹ ಅಹುದು. ಪುರಾತನ ಭಾರತದಲ್ಲಿ ಯಾವಗೆಲ್ಲವೂ ದೇಶ ಅಧೋಗತಿಗೆ ಹೋಗುವ ಸ್ಥಿತಿಯಲ್ಲಿತ್ತೋ ಆವಾಗೆಲ್ಲ ಒಬ್ಬರಲ್ಲ ಒಬ್ಬ ಗುರು ಬಂದು ಭಾರತವನ್ನು ಮತ್ತೆ ಉನ್ನತಿಯ ಹಾದಿಗೆ ಮರಳಿಸಿದ್ದಾನೆ. ದೇಶವನ್ನು ಕಾಪಾದಿದ್ದಾರೆ.ಇಂದು ಅಂತಹ ಗುರುಗಳೂ ವಿರಳ.ತನ್ನ ಹೆಬ್ಬೆರಳನ್ನೇ ಕೋಟ್ಟ ಏಕಲವ್ಯರೂ ವಿರಳ.ಅಲ್ಲೊಬ್ಬರು ಇಲ್ಲೊಬ್ಬರು ಬೆರಳೆಣಿಕೆಯಷ್ಟು ಮಾತ್ರ ದೇಶ ಕಟ್ಟುವ ಮಹೋನ್ನತ ಕಾರ್ಯದಲ್ಲಿ ತೊಡಗಿಕೊಂಡವರು ಕಾಣಸಿಗುತ್ತಾರೆ ಅಷ್ಟೇ.
ತಾವು ಕಲಿಸಿದ ವಿದ್ಯಾರ್ಥಿಗಳೆಲ್ಲ ಒಂದು ಉನ್ನತ ಸ್ಥಾನಕ್ಕೇರಲಿ ಎಂದು ಆಶಿಸುವವರು ,ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಅವರಿನ್ನೂ ತಮ್ಮ ದೇಶಸೇವೆಯ ಶಿಕ್ಷಕ ವೃತ್ತಿಯಲ್ಲೇ ಇರುತ್ತಾರೆ. ಒಬ್ಬ ಶಿಕ್ಷಕ ತಾನು ಪ್ರಧಾನಿಯಾಗದಿರಬಹುದು,ತಾನು ರಾಷ್ಟ್ರಪತಿಯಾಗದಿರಬಹುದು,ಆದರೆ ಅಂತಹ ಅದೇಷ್ಟೋ ನಾಯಕರನ್ನ,ಕಾರ್ಮಿಕರನ್ನ,ದೇಶಭಕ್ತರನ್ನ ತಯಾರಿಸುವ ಅಪ್ರತಿಮ ಬಲ ಹೊಂದಿರುತ್ತಾನೆ. ಸ್ನೇಹಿತರೆ ನಮ್ಮ ನಿಮ್ಮೆಲ್ಲರ ಜೀವನದಲ್ಲಿಯೂ ಗುರುವಿನ ಪಾತ್ರ ಅತ್ಯಂತ ಆತ್ಮೀಯವಾಗಿ ಖಂಡಿತಾ ನಡೆದಿರುತ್ತದೆ. ಆದರೆ ಆ ಗುರುವಿಗೆ ಶಿಕ್ಷಕನೆಂದು ಮರುನಾಮಕರಣ ಮಾಡಿದ್ದೇವೆ ಅಷ್ಟೇ. ನಿಮ್ಮ ಪ್ರಾಥಮಿಕ ಹಂತದಿಂದ ಹಿಡಿದು ಪದವಿಯ ತನಕ ಒಬ್ಬರಲ್ಲ ಒಬ್ಬರ ಪ್ರಭಾವ ಖಂಡಿತ ನಿಮ್ಮ ಮೇಲೆ ನಡೆದಿರುತ್ತದೆ.
ನೀವು ಇಂದು ಒಂದು ಸ್ಥಾನದಲ್ಲಿರಲು ಹಲವಾರು ಶಿಕ್ಷಕರ ಮಹೋನ್ನತ ಪಾತ್ರ ಇದ್ದಿರುತ್ತದೆ. ನಿಮ್ಮೊಳಗಿನ ನಿಮ್ಮನ್ನು ಹೊರತೆಗೆದು ನಿಮಗೇ ಪರಿಚಯಿಸಿದ ಅಂತವರಿಂದಲೇ ನೀವಿಂದು ಉನ್ನತ ಹುದ್ದೆಗೇರಿರಬಹುದು. ಅಥವಾ ಸಾಧಕರಾಗಿರಬಹುದು.ಅದರಲ್ಲಿ ಅಕಸ್ಮಾತ್ ನಿಮ್ಮ ಕಣ್ತೆರೆದ ಆ ಕ್ಷಣವೊಂದು ಕಣ್ಮರೆಯಾದರೂ ನೀವಿಂದು ಬೇರೇನೂ ಆಗಿರುತ್ತಿದ್ದೀರಿ ಅಲ್ಲವೇ.?.ಅದು ಒಬ್ಬ ವ್ಯಕ್ತಿಯೂ ಆಗಿರಬಹುದು,ಇಲ್ಲ ಅಮೂಲ್ಯ ಅರಿವು ಕೂಡ ಆಗಿರಬಹುದು.ಬನ್ನಿ ಅಂತಹ ಎಲ್ಲ ಅಮೋಘ ರತ್ನಗಳಿಗೆ ನಮನ ಸಲ್ಲಿಸೋಣ.ನಮನ ಎಂಬುದಕ್ಕಿಂತಲೂ ಗೌರವ ,ಧನ್ಯತಾಭಾವ ತೋರೋಣ. ದೇಶ ಕಟ್ಟುವ ಎಲೆಮರೆಯ ಕಾಯಿಗಳಿಗೆ ನತಮಸ್ತಕರಾಗೋಣ.ಬನ್ನಿ ಬದಲಾಗೋಣ,ಬದಲಾಯಿಸೋಣ.ವಿಶ್ವಗುರು ಭಾರತವನ್ನು ನಿರ್ಮಿಸೋಣ.. |
Leave a Comment