ಅರೇ ಇದೇನಿದು!…ಇಂಗ್ಲೆಂಡಿನ ಥೇಮ್ಸ್ ನದಿ ಭಾರತದಲ್ಲೇಕೆ ಹರಿಯಬೇಕು ಎಂದು ಯೋಚಿಸುತ್ತಿದ್ದೀರಾ?…ಖಂಡಿತಾ ಅದು ಸಾಧ್ಯವಿಲ್ಲದ ಮಾತು. ಆದರೆ ವಿಷಯ ಬೇರೆಯೇ ಇದೆ. ಭಾರತ ಹೇಳಿ ಕೇಳಿ ನದಿಗಳಿಂದ ತುಂಬಿದ ದೇಶ. ಭಾರತದಲ್ಲಿರುವಷ್ಟು ನದಿಗಳು ವಿಶ್ವದ ಮತ್ತಾವ ರಾಷ್ಟ್ರದಲ್ಲೂ ಹರಿದಿರಲಿಕ್ಕಿಲ್ಲ. ಉತ್ತರದ ಹಿಮಾಯಲಯದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ನದಿಗಳು ಯಥೇಚ್ಛವಾಗಿ ಹರಿದಿದೆ. ಭಾರತೀಯ ಸಂಸ್ಕೃತಿಯೂ ಈ ನದಿಗಳಿಗೆ ಹೊಂದಿಕೊಂಡೇ ಬಂದಿದೆ. ನಾವು ಯಾವುದೇ ನದಿಮೂಲವನ್ನು ಕಂಡರೂ ಗಂಗೆಯೆಂದೇ ಕರೆದು ಪೂಜಿಸುತ್ತೇವೆ. ಅಲ್ಲದೇ ಈ ನದಿಗಳಿಂದಲೇ ನಮ್ಮ ನಾಗರಿಕತೆ ಬೆಳೆದುಬಂದಿದ್ದು. ಮೆಸಪಟೋಮಿಯಾ, ಹರಪ್ಪ , ಮೊಹೆಂಜೋದಾರೋದಂತಹ ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳು ಬೆಳೆದುಬಂದಿದ್ದು ಇದೇ ಭಾರತದ ಸಿಂಧೂ ನದಿ ತಟದಲ್ಲಿ. ಹಾಗಾಗಿ ಮಾನವನ ಬೆಳೆವಣಿಗೆಯನ್ನು ನಾವು ನದೀ ಉಪಕ್ರಮದೊಂದಿಗೆ ಆರಾಮವಾಗಿ ಜೋಡಿಸಬಹುದು.ಆದ್ದರಿಂದ ಎಲ್ಲಿಯವರೆಗೆ ನದಿಗಳು ತಮ್ಮ ಪ್ರಾತಿನಿಧ್ಯವನ್ನು ಉಳಿಸಿಕೊಳ್ಳುತ್ತವೆಯೋ ಅಲ್ಲಿಯವರೆಗೆ ಮಾನವ ಸಮಾಜ ಅಥವಾ ನಮ್ಮ ನಾಗರಿಕತೆ ಬೆಳೆಯುತ್ತದೆ, ಉಳಿಯುತ್ತದೆ. ನಮ್ಮ ನಾಳೆಯ ಉಳಿವು ಇಂದಿನ ನದಿಗಳ ಉಳಿವಿನ ಮೇಲೆ ನಿಂತಿದೆ. ಸದ್ಯ ನಮ್ಮ ನಾಳೆಗಳು ತೂಗುವ ಕತ್ತಿಯ ನೆರಳಲ್ಲಿ ನಿಂತಿದೆ , ಅರ್ತಾಥ್ ನದಿಗಳು ತಮ್ಮ ಜೀವಾಧಾರಣಾ ಸಾಮರ್ಥ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ. ಹಾಗಾಗಿ ಈ ನದಿಗಳನ್ನು ಜೀವಂತವಾಗಿರಿಕೊಳ್ಳುವ ಜೊತೆ ಜೊತೆಗೆ ನಮ್ಮ ಭವಿಷ್ಯವನ್ನು ಮತ್ತೆ ಹಸನಾಗಿಸಿಕೊಳ್ಳುವ ಕೊನೆಯ ಅವಕಾಶ ನಮ್ಮ ಕೈಲಿದೆ.
ಹೌದು, ಭಾರತದಲ್ಲಿ ಹರಿಯುವ ಅನೇಕ ನದಿಗಳು ಇಂದು ನೀರಿನ ಸ್ಟ್ರೋತವಾಗಿ ಉಳಿದಿಲ್ಲ. ಬದಲಾಗಿ ನಮ್ಮ ಕಸಗಳನ್ನು ಬಿಸಾಡುವ ಕಸದ ತೊಟ್ಟಿಯಾಗಿ ಬದಲಾಗಿದೆ, ನಮ್ಮ ಮನೆಗಳ ಕೊಳಕು ನೀರನ್ನು ಸಾಗಿಸುವ ಚರಂಡಿಯಾಗಿ ಬದಲಾಗಿದೆ, ಸೀವೇಜ್ ಗಳನ್ನು ಹೊತ್ತೊಯ್ಯುವ ಮೋರಿಯಾಗಿ ಬದಲಾಗಿದೆ. ನದಿಗಳೆಂದರೆ ಏನು ಎಂದು ಇಂದಿನ ಮಕ್ಕಳು ಕೇಳುವ ಪರಿಸ್ಥಿತಿ ಬಂದಿದೆ. ಭಾರತದ ಅನೇಕ ಕಡೆಗಳಲ್ಲಿ ಇಲ್ಲೊಂದು ನದಿ ಇತ್ತು ಎಂಬ ಕುರುಹುಗಳೇ ನಾಶವಾಗಿಹೋಗಿವೆ. ನಮ್ಮ ಜೀವನದ ಜೊತೆ ನದಿಗಳನ್ನು ಬೆಸೆದುಕೊಳ್ಳಲೇಬೇಕಾಗಿದ್ದ ನಾವುಗಳು ಜೀವನದಲ್ಲಿ ನದಿಯೇ ಬರದಂತೆ ನೋಡಿಕೊಳ್ಳುತ್ತಿದ್ದೇವೆ. ಈಗಲಾದರೂ ಎಚ್ಚೆತ್ತುಕೊಂಡರೆ ಇಂಗ್ಲೆಂಡಿನಲ್ಲಿ ಥೇಮ್ಸ್ ನದಿಯನ್ನು ಉಳಿಸಿಕೊಂಡಂತೆ ನಮ್ಮ ನದಿಗಳನ್ನೂ ಉಳಿಸಿಕೊಳ್ಳಬಹುದು
ಥೇಮ್ಸ್ ನದಿಯ ಕಥೆ:
‘ಥೇಮ್ಸ್’ ಇಂಗ್ಲೆಂಡಿನ ಅತಿ ಉದ್ದದ ನದಿ. ಥೇಮ್ಸ್ ಹೆಡ್ ಮತ್ತು ಉಲ್ಲನ್ ವುಡ್ ಎಂಬ ಸ್ಥಳದಲ್ಲಿ ಹುಟ್ಟುವ ಈ ನದಿ ಸುಮಾರು ೩೪೬ ಕಿ.ಮೀ. ಹರಿದು ಥೇಮ್ಸ್ ಈಶ್ಚರಿ ಎಂಬಲ್ಲಿ ಸಾಗರವನ್ನು ಸೇರುತ್ತದೆ. ವಿಶೇಷವೆಂದರೆ ಈ ಥೇಮ್ಸ್ ನದಿ ಇಂಗ್ಲೆಂಡಿನ ರಾಜಧಾನಿಯಾದ ಲಂಡನ್ ನ ಜೀವನದಿಯಾಗಿ ಇಂದು ರೂಪುಗೊಂಡಿದ್ದಾಳೆ. ಒಂದಾನೊಂದು ಕಾಲದಲ್ಲಿ ಕೊಳೆತು ನಾರುತ್ತಿದ್ದ ಥೇಮ್ಸ್ ಇಂದು ವಿಶ್ವದ ಅತ್ಯನ್ತ ಸ್ವಚ್ಛ ನದಿಗಳ ಪಟ್ಟಿಯಲ್ಲಿ ಸೇರಿದ್ದಾಳೆ. ಈ ರೀತಿಯಾದ ಆಮೂಲಾಗ್ರ ಬದಲಾವಣೆಗೆ ಜ್ವಲಂತ ಸಾಕ್ಷಿಯಾಗಿ ನಿಂತಿದ್ದಾಳೆ. ಹೌದು. ಸುಮಾರು ೧೮೫೫ ರ ಆಸುಪಾಸಿನಲ್ಲಿ ನಡೆದ ಒಂದು ಸಮೀಕ್ಷೆಯಂತೆ ೧೮೩೦ ರಿಂದ ೧೮೬೦ ವರೆಗೆ ಇಂಗ್ಲೆಂಡಿನಲ್ಲಿ ಕಾಲರಾದಿಂದಾಗಿ ಸಾವಿರಾರು ಜನ ಸತ್ತಿದ್ದರು. ಇದಕ್ಕೆ ಕಾರಣವನ್ನು ಹುಡುಕಿ ಹೊರಟಾಗ ಸಿಕ್ಕಿದ್ದು ಥೇಮ್ಸ್ ನ ರಾಡಿ. ಸುತ್ತಮುತ್ತಲಿನ ಜನ ಇದೇ ಥೇಮ್ಸ್ ನ ನೀರನ್ನು ತಮ್ಮ ಸ್ನಾನಕ್ಕೆ ಹಾಗೂ ದಿನಬಳಕೆಗಾಗಿ ಬಳಸುತ್ತಿದ್ದರು. ಜೊತೆಗೆ ಕುಡಿಯಲೂ ಸಹ ಥೇಮ್ಸ್ ನದಿಯೇ ಮೂಲವಾಗಿತ್ತು. ಅವರುಗಳೇ ತಮ್ಮ ಬಳಕೆಯ ನಂತರ ಕೊಳಕು ನೀರನ್ನು ಮತ್ತೆ ಅದೇ ನದಿಗೆ ಬಿಡುತ್ತಿದ್ದರು. ಇದರಿಂದಾಗಿ ಆಸುಪಾಸಿನ ಬಹುತೇಕ ಮಂದಿ ಕಾಲರಾಕ್ಕೆ ತುತ್ತಾಗಿದ್ದರು. ಅಲ್ಲದೆ ೧೮೫೫ ರಲ್ಲಿ ಲಂಡನ್ ನ ಟೈಮ್ಸ್ ಪತ್ರಿಕೆಯಲ್ಲಿ ಮೈಕಲ್ ಪ್ಯಾರಡೆಯವರು ಈ ನದಿಯ ಕುರಿತು “ಇಡೀ ನದಿಯು ಅಪಾರದರ್ಶಕ , ಮಸುಕಾದ, ಕಂದು ಬಣ್ಣದ ದ್ರವವಾಗಿದೆ. ಲಂಡನ್ ನ ಮೂಲಕ ಹಲವು ಮೈಲಿಗಳಷ್ಟು ಹರಿಯುವ ಈ ನದಿಯನ್ನು ತೆರೆದ ಚರಂಡಿಯನ್ನಾಗಿಸಲು ಖಂಡಿತ ಬಿಡಬಾರದು ” ಎಂದು ಬರೆದಿದ್ದರು.
೧೮೭೮ ರಲ್ಲಿ ಇದೆ ನದಿಯಲ್ಲಿ ಸುಮಾರು ೬೦೦ ಜನರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ಮುಳುಗಿ ಅದರಲ್ಲಿರುವ ಎಲ್ಲ ಪ್ರಯಾಣಿಕರೂ ಪ್ರಾಣಬಿಟ್ಟಿದ್ದರು. ಆದರೆ ಅವರಲ್ಲಿರುವ ಎಲ್ಲರೂ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿರಲಿಲ್ಲ. ಬದಲಾಗಿ ಈ ನದಿಯ ಕಲುಷಿತ ನೀರಿನಿಂದಾಗಿ ಸಾವನ್ನಪ್ಪಿದ್ದರು ಎಂದು ವರದಿ ಹೇಳುತ್ತದೆ. ಇದಾದ ಕೆಲವರ್ಷಗಳಲ್ಲೇ ಇಂಗ್ಲೆಂಡ್ ನ ಸಂಸತ್ತಿನಲ್ಲಿ ಈ ನದಿಯಿಂದ ಬರುತ್ತಿರುವ ದುರ್ವಾಸನೆ ತಾಳಲಾಗದೆ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಬೇಕಾದ ಪರಿಸ್ಥಿತಿ ಬಂತು. ತಕ್ಷಣವೇ ಅಲ್ಲಿನ ಸರ್ಕಾರ ಜಾಗೃತವಾಯ್ತು. ಮುಂದಿನ ದಿನಗಳಲ್ಲಿ ನದಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸಿ ಘನತ್ಯಾಜ್ಯಗಳನ್ನು ತೆಗೆಯಲಾಯಿತು. ಕೊಳಚೆ ನೀರನ್ನು ಹೊತ್ತು ತಂದು ನದಿಗೆ ಬಿಡುತ್ತಿದ್ದ ಒಳಚರಂಡಿಗಳನ್ನು ಮುಚ್ಚಲಾಯ್ತು. ಪ್ರತಿ ಹಳ್ಳಿ, ನಗರಗಳಲ್ಲಿ ಸೀವೇಜ್ ಟ್ರೀಟ್ಮೆಂಟ್ ಪಾರ್ಕ್ ಗಳನ್ನೂ ನಿರ್ಮಿಸಲಾಯ್ತು. ನದಿಗೆ ನೀರನ್ನು ಬಿಡುವ ಸಂದರ್ಭದಲ್ಲಿ ಅದರ ಮೂಲದಲ್ಲೊಮ್ಮೆ ಹಾಗೂ ಕೊನೆಯಲ್ಲೊಮ್ಮೆ, ಎರಡೆರಡು ಬಾರಿ ಸ್ವಚ್ಛಗೊಳಿಸಲಾಯ್ತು. ಅನೇಕ ಕಾರ್ಖಾನೆಗಳನ್ನು ಮುಚ್ಚಲಾಯ್ತು.
ಆದರೆ ಇವುಗಳೆಲ್ಲವೂ ಫಲ ಕೊಡುವಷ್ಟರ ವೇಳೆಗೆ ೨ ನೇ ಮಹಾಯುದ್ಧ ನಡೆದು, ಬಹುತೇಕ ಎಲ್ಲ ಸಂಸ್ಕರಣಾ ಘಟಕಗಳೂ ಹಾನಿಗೊಳಗಾದವು. ಮತ್ತೆ ಚರಂಡಿಯ ನೀರು ಥೇಮ್ಸ್ ನ ಒಡಲನ್ನು ಹೊಕ್ಕಿತು. ಆಗಷ್ಟೇ ಸ್ವಚ್ಛವಾಗುತ್ತಿದ್ದ ನದಿ ಮತ್ತೆ ಕೊಳಚೆಯಾಗಿ ಬದಲಾಯಿತು. ಅದೆಷ್ಟರ ಮಟ್ಟಿಗೆ ಎಂದರೆ ೧೯೫೭ರಲ್ಲಿ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಥೇಮ್ಸ್ ನದಿಯನ್ನು ಜೈವಿಕವಾಗಿ ಸತ್ತಿದೆ( biologically dead )ಎಂದು ಘೋಷಿಸಿತು. ಅಂದರೆ ಇನ್ನು ಮುಂದೆ ಈ ನದಿಯಲ್ಲಿ ಯಾವ ಪ್ರಾಣಿಗಳೂ ಬದುಕಲು ಸಾಧ್ಯವಿಲ್ಲ ಮತ್ತು ಇದು ಕುಡಿಯಲು ಯೋಗ್ಯವಲ್ಲದ ನೀರು ಎಂದು ಅಭಿಪ್ರಾಯ ಪಟ್ಟಿತು. ಮತ್ತೆ ಕಾರ್ಯೋನ್ಮುಖವಾದ ಅಲ್ಲಿನ ಸರ್ಕಾರ ೧೯೬೦ ರಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿತು. ಪ್ರತಿ ಮನೆಯಲ್ಲೂ ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್ ಗಳು ಇರಬೇಕೆಂಬ ನಿಯಮವನ್ನು ಜಾರಿಗೆ ತಂದಿತು. ಮತ್ತು ನದಿಗೆ ಬಿಡುವ ಮುನ್ನ ಚರಂಡಿಯ ನೀರನ್ನು ಇನ್ನೊಮ್ಮೆ ಶುದ್ದೀಕರಿಸಲಾಯ್ತು. ನದಿಯಲ್ಲಿಯೂ ಅಲ್ಲಲ್ಲಿ ಸೂಕ್ಷ್ಮ ಅಂಶಗಳನ್ನು ಹೊರತೆಗೆಯಲು ಕ್ರಮ ಕೈಗೊಂಡಿತು. ೧೯೭೦ ರಲ್ಲಿ ಪರಿಸರ ಜಾಗೃತಿಯನ್ನು ಸಾರ್ವಜನಿಕರಿಗೆ ಮೂಡಿಸುವ ಕೆಲಸವನ್ನು ಹಮ್ಮಿಕೊಳ್ಳಲಾಯ್ತು. ಆ ಮೂಲಕ ಕ್ರಿಮಿನಾಶಕ ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆಯ ಮೇಲೆ ನಿರ್ಬಂಧ ಹೇರಲಾಯ್ತು. ಅಲ್ಲಲ್ಲಿ ಒಂದೊಂದರಂತೆ ನದಿಯ ಇಕ್ಕೆಲ್ಲಗಳಲ್ಲಿ ನೈಸರ್ಗಿಕ ಆವಾಸಸ್ಥಾನಗಳನ್ನು ನಿರ್ಮಿಸಿತು. ಆ ಮೂಲಕ ನದಿಗೆ ಕ್ರಮೇಣ ಜಲಚರಗಳು ಹಾಗೂ ಸೂಕ್ಷಾಣುಜೀವಿಗಳನ್ನು ಮರುಪೂರಣ ಮಾಡುವ ಸಂಕಲ್ಪ ಮಾಡಿತು.
ಇದೆಲ್ಲವೂ ಆದ ಬಳಿಕ ಥೇಮ್ಸ್ ಮತ್ತೆ ನಗಲಾರಂಭಿಸಿದಳು. ಬಯೋಲಾಜಿಕಲ್ ಸೊಸೈಟಿ ಆಫ್ ಲಂಡನ್ ೨೦೦೪ರಿಂದ ೨೦೧೪ ರವರೆಗೆ ಮಾಡಿದ ಸಮೀಕ್ಷೆಯ ಪ್ರಕಾರ ಥೇಮ್ಸ್ ನಲ್ಲಿ ಈಗ ೨೦೦ ಕ್ಕೋ ಮೀರಿದ ವಿವಿಧ ಜಾತಿಯ ಜೀವಪ್ರಭೇಧಗಳಿವೆ. ಜೊತೆಗೆ ಅಪರೂಪದ ತಿಮಿಂಗಲವೂ ಸೇರಿ ೧೨೫ ಹೆಚ್ಚು ಜಾತಿಯ ಮೀನುಗಳಿವೆ. ಥೇಮ್ಸ್ ಶತಮಾನದ ವನವಾಸದ ಬಳಿಕ ಪುನಃ ಮೊದಲಿನಂತಾಗಿದ್ದಾಳೆ. ಈಗ ಆ ನದಿಯಲ್ಲಿ ಒಳನಾಡ ಜಲಸಾರಿಗೆಯೂ ಲಭ್ಯವಿದೆ. ಇದರಿಂದ ಪ್ರವಾಸೋದ್ಯಮವೂ ಪುಷ್ಟಿ ಪಡೆದಿದೆ. ೨೦೧೫ ರಿಂದ ಈಚೆಗೆ ನೀರಿನಲ್ಲಿ ಕರಗಿರುವ ಪ್ಲಾಸ್ಟಿಕ್ ನಿರ್ಮೂಲನೆಗೂ ಯೋಜನೆ ರೂಪಿಸಲಾಗಿದೆ.
ಸ್ನೇಹಿತರೆ ಇದು ಥೇಮ್ಸ್ ನದಿಯೊಂದರ ಕಥೆಯಾಗಬಾರದು. ಜಗತ್ತಿನ ಎಲ್ಲ ನದಿಗಳ ಕಥೆಯಾಗಬೇಕು. ಅದರಲ್ಲೂ ಭಾರತದ ನದಿಗಳ ಪುನಶ್ಚೇತನಕ್ಕೆ ಇದು ಮಾದರಿಗಬೇಕು. ‘ನಮಾಮಿ ಗಂಗೆ’ ದೇಶದ ಎಲ್ಲ ನದಿಗಳಿಗೂ ವಿಸ್ತರಿಸಬೇಕು. ಜೀವಜಲದ ಸ್ಟ್ರೋತಗಳನ್ನು ಕಾಪಿಡಿದು ರಕ್ಷಿಸಿಕೊಳ್ಳಬೇಕು. ಕಡೆ ಪಕ್ಷ ನಮ್ಮ ಮುಂದಿನ ಪೀಳಿಗೆಗೆ ಶುದ್ಧ ನೀರನ್ನಾದರೂ ಕೊಟ್ಟುಹೋಗಬೇಕು.ಇನ್ನು ಬೆಂಗಳೂರಿನ ವೃಷಭಾವತಿಯ ಸಮಸ್ಯೆಗೆ ಸರ್ಕಾರವೂ ಯೋಜನೆ ರೂಪಿಸಿ ಕಾರ್ಯಪ್ರವೃತ್ತವಾಗಬೇಕು. ಏಕೆಂದರೆ ಇದು ಯಾವುದೇ ಒಂದು ಸಂಘಟನೆ, ಸಂಸ್ಥೆ ಯಿಂದ ಆಗುವ ಕೆಲಸವಲ್ಲ ಮತ್ತೂ ಅಲ್ಪಕಾಲಾವಧಿಯ ಕಾರ್ಯವೂ ಅಲ್ಲ. ಸರ್ಕಾರ ಹಾಗೂ ಜನತೆ ಜಂಟಿಯಾಗಿ ನಡೆಸಬೇಕಾದ ಕಾರ್ಯ. ಈ ಕಾರ್ಯ ಸಫಲವಾದರೆ ಜಗತ್ತಿನ ಇತಿಹಾಸದಲ್ಲಿ ನಾವುಗಳೂ ಸ್ಥಾನ ಪಡೆಯಬಹುದು. ಬನ್ನಿ ಆ ದಿಶೆಯತ್ತ ಹೆಜ್ಜೆಯನಿರಿಸೋಣ. ನೆಲ-ಜಲಗಳನ್ನು ರಕ್ಷಿಸೋಣ. ಭಾರತ ಬದಲಾಗಲಿ….. ಭಾರತ ವಿಶ್ವಗುರುವಾಗಲಿ…. ಬನ್ನಿ ಬದಲಾಗೋಣ ಬದಲಾಯಿಸೋಣ.
Leave a Comment