ಹೊನ್ನಾವರ – ನೂತನ ಬಸ್ಟ್ಯಾಂಡ್ ನಿರ್ಮಾಣದ ಕೆಲಸ ಆರಂಭವಾಗಿರುವ ಹಿನ್ನಲೆಯಲ್ಲಿ ಪೊಲೀಸ್ ಗ್ರೌಂಡ್ಗೆ ಸ್ಥಳಾಂತರಗೊಂಡು, ನಂತರ ಪೊಲೀಸ್ ಪರವಾನಿಗೆ ಇಲ್ಲದ ಕಾರಣ ಕೆಲವೇ ಗಂಟೆಯಲ್ಲಿ ಪುನ: ಮೊದಲಿದ್ದಲ್ಲಿಗೇ ಬಂದಿದ್ದ ಬಸ್ನಿಲ್ದಾಣ ಇದೀಗ ಪಕ್ಕದಲ್ಲೇ ಇದ್ದ ರಿಕ್ಷಾ ಸ್ಟ್ಯಾಂಡ್ ಇದ್ದಲ್ಲಿಗೆ ಬಂದು ಮುಟ್ಟಿದೆ.
ಮಂಗಳವಾರ ಬೆಳಿಗ್ಗೆ ನಡೆದ ಈ ದಿಢೀರ್ ಬೆಳವಣಿಗೆಯಿಂದ ವಿಚಲಿತರಾದ ಕುಮಟಾ ಮಾರ್ಗದ ಟೆಂಪೋ ಚಾಲಕರು ಕೆಲ ಹೊತ್ತು ವಾಗ್ವಾದಕ್ಕೆ ಮುಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸೂಚನೆ ಸಿಕ್ಕಿತಾದರೂ ಪೊಲೀಸರು ಮಧ್ಯ ಪ್ರವೇಶಿಸಿ ಟೆಂಪೋದವರಿಗೆ ವಸ್ತುಸ್ಥಿತಿಯನ್ನು ವಿವರಿಸಿದರು. ನೀವು ಹೊಂದಿಕೊಂಡು ಹೋಗದಿದ್ದರೆ ಸಮಸ್ಯೆಯಾಗಲಿದೆ ಎನ್ನುವುದನ್ನು ಮನದಟ್ಟುಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ರಿಕ್ಷಾದವರು ಸ್ಟ್ಯಾಂಡ್ ಬಿಟ್ಟು ಬಸ್ಟ್ಯಾಂಡ್ ಪಕ್ಕದಲ್ಲಿದ್ದ ರಸ್ತೆ ಬದಿಯ ಜಾಗಕ್ಕೆ ತೆರಳಿದ್ದಾರೆ.
ಬಸ್ಟ್ಯಾಂಡ್ ನಿರ್ಮಾಣಕ್ಕೆ ಶಿಲಾನ್ಯಾಸವಾಗಿ ಆರೇಳು ತಿಂಗಳು ಕಳೆದ ನಂತರ ಕೆಲಸ ಪ್ರಾರಂಭಿಸಿದ್ದರೂ ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಬಸ್ನಿಲ್ದಾಣವನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡಿಸುತ್ತಿರುವ ಕೆ.ಎಸ್.ಆರ.ಟಿ.ಸಿಯ ಮುಂದಾಲೋಚನೆಯಿಲ್ಲದ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.
[ಪ್ರಯಾಣಿಕರನ್ನು ಸಾಗಿಸುವ ಖಾಸಗಿ ಟೆಂಪೋ ಸ್ಟ್ಯಾಂಡ್, ಟ್ಯಾಕ್ಸಿ ಸ್ಟ್ಯಾಂಡ್ಗಳು ಬಸ್ನಿಲ್ದಾಣದಿಂದ 500 ಮೀಟರ್ ಅಂತರದಲ್ಲಿರಬೇಕು ಎನ್ನುವ ನಿಯಮವಿದ್ದರೂ ಪಟ್ಟಣದಲ್ಲಿ ಈ ನಿಯಮಗಳಾವುದೂ ಪಾಲನೆಯಾಗಿದ್ದೇ ಇಲ್ಲ. ಆದರೂ ಕಷ್ಟಪಟ್ಟು ದುಡಿದು ತಿನ್ನುವವರ ಹೊಟ್ಟೆಯಮೇಲೆ ಹೊಡೆಯಬಾರದು ಎನ್ನುವ ಕಾರಣಕ್ಕೆ ಸಾರ್ವಜನಿಕರಿಂದಲೂ ಈ ಬಗ್ಗೆ ಯಾವುದೇ ವಿರೋಧವ್ಯಕ್ತವಾಗಿರಲಿಲ್ಲ ಎನ್ನಲಾಗಿದೆ. ಖಾಸಗಿ ಟೆಂಪೋದವರು ಸಾರಿಗೆ ಇಲಾಖೆಯವರೊಂದಿಗೆ ಕಿರಿಕ್ ಮಾಡಿಕೊಂಡು 500 ಮೀಟರ್ ಅಂತರದ ನಿಯಮ ಕಡ್ಡಾಯ ಜಾರಿಯಾದರೆ ಅದರಿಂದ ಖಾಸಗಿ ಟೆಂಪೋದವರೇ ಹೆಚ್ಚು ತೊಂದರೆಗೆ ಸಿಲುಕಲಿದ್ದಾರೆ.]
Leave a Comment