(ಕೆಲಸ ಮಾಡಿ ಸಂಬಳಕ್ಕೆ ಅಲೆಯುವ ರಗಳೆಗೆ ಬೇಸತ್ತು ನರೇಗಾ ಅಂದರೆ ಮೂಗುಮುರಿಯವ ಮಂದಿ)
ಹೊನ್ನಾವರ – ಜನರು ಕೆಲಸವನ್ನರಸಿ ಗುಳೇ ಹೊಗುವುದನ್ನು ತಪ್ಪಿಸಲು ಮತ್ತು ಗ್ರಾಮೀಣ ಭಾಗದಲ್ಲಿ ಜನರ ಆರ್ಥಿಕ ಮಟ್ಟದ ಸುಧಾರಣೆಯ ಉದ್ದೇಶವನ್ನಿಟ್ಟುಕೊಂಡು ಜಾರಿಯಾದ ನರೇಗಾ (ಉದ್ಯೋಗ ಖಾತ್ರಿ) ಯೋಜನೆಯನ್ನು ಹಳ್ಳ ಹಿಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾಂಟ್ರಾಕ್ಟರ್ಗಳು ಒಳ ಒಪ್ಪಂದಮಾಡಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆನ್ನುವು ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.
ನರೇಗಾದಡಿ ಒಂದು ಕುಟುಂಬಕ್ಕೆ ವರ್ಷದಲ್ಲಿ 100 ಮಾನವ ಶ್ರಮ ದಿನಗಳ ಉದ್ಯೋಗ ಖಾತ್ರಿಯನ್ನು ನೀಡಲಾಗಿದೆ. ಕೆಲಸ ಆರಂಭಿಸಿ ಒಂದು ವಾರದೊಳಗೆ ಎನ್.ಎಂ.ಆರ್ ಬರೆಯಬೇಕು, 15 ದಿನದಲ್ಲಿ ಕೆಲಸ ಮಾಡಿದವರ ಖಾತೆಗೆ ಹಣ ಜಮಾ ಆಗಬೇಕು ಎನ್ನುವ ನಿಯಮವಿದ್ದರೂ ಅದು ಪುಸ್ತಕದಲ್ಲಿ ಮಾತ್ರ ಎನ್ನುವಂತಾಗಿದೆ. ಕೆಲಸ ಮಾಡಿ ಮಾಡಿದ ಕೆಲಸದ ಸಂಬಳಕ್ಕಾಗಿ ತಿಂಗಳ ಗಟ್ಟಲೆ ಕಾದು ಪಂಚಾಯತಗೂ ಬ್ಯಾಂಕ್ಗೂ ಅಲೆದಾಡಿ ಕೊನೆಗೂ ಬೇಸತ್ತು ಈ ನರೇಗಾದ ಸಹವಾಸವೇ ಬೇಡ ಎನ್ನುವ ಮನಸ್ಥಿಗೆ ಜನರು ಬರುತ್ತಿದ್ದಾರೆ. ಅಂತ ಸ್ಥಿತಿಯನ್ನು ಅಧಿಕಾರಿ ಕಾಂಟ್ರಾಕ್ಟರ್ ಅಪವಿತ್ರ ಮೈತ್ರಿ ಉದ್ದೇಶಪೂರ್ವಕವಾಗಿ ನಿರ್ಮಿಸುತ್ತಿದೆ ಎನ್ನಲಾಗಿದೆ.
ನರೇಗಾ ಯೋಜನೆಯಡಿ ಕೆರೆ, ಗೋಕಟ್ಟೆ, ಹೂಳೆತ್ತುವುದು, ಕೊಳವೆಬಾವಿ ಮರು ಪೂರಣ,ಮೈದಾನ, ಕಣ,ಚೆಕ್ಡ್ಯಾಮ್, ದಾರಿ, ಕೃಷಿಹೊಂಡ, ಅಂಗನವಾಡಿ ಕೇಂದ್ರ, ಗ್ರಾಮೀಣ ಗೋದಾಮು, ಸ್ಮಶಾನ ಅಭಿವೃದ್ಧಿ, ಉದ್ಯಾನ, ಕಾಂಕ್ರೀಟ್ ರಸ್ತೆ, ಕೃಷಿ ಸೇರಿದಂತೆ ಬಹುತೇಕ ಎಲ್ಲಾ ಕೆಲಸಗಳನ್ನೂ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಕೋಟಿ ಕೋಟಿ ಅನುದಾನವೂ ಗ್ರಾಮ ಪಂಚಾಯತಗಳಿಗೆ ಬರುತ್ತದೆ.
ಎಲ್ಲಾ ಕೆಲಸವನ್ನೂ ನರೇಗಾದಲ್ಲಿ ಮಾಡಿಕೊಂಡರೆ ಕಾಂಟ್ರಾಕ್ಟರ್ಗಳು ಕೆಲಸವಿಲ್ಲದೇ ಖಾಲಿ ಕುಳಿತುಕೊಳ್ಳಬೇಕಾಗುತ್ತದೆ.ಕಾಮಗಾರಿಯ ಬಿಲ್ ಕೆಲಸಮಾಡಿದವರ ಖಾತೆಗೆ ನೇರ ವರ್ಗಾವಣೆಯಾಗುವುದರಿಂದ ಟೇಬಲ್ ಅಡಿಗೆ ಕೈಚಾಚುವ ಚಾಳಿಯಿರುವ ಕೆಲ ಅಧಿಕಾರಿಗಳಿಗೂ ಪ್ರಯೋಜನವಿಲ್ಲ.ಇದೇ ಕಾರಣಕ್ಕೆ ಜನರನ್ನು ಕಾಡಿಸಿ ಕೆಲಸ ಮಾಡುವುದಕ್ಕೇ ಮುಂದೆ ಬರದಂತೆ ಮಾಡಿದರೆ ಅಲ್ಲಿಗೆ ಇವರ ಅರ್ಧ ಉದ್ದೇಶ ಈಡೇರಿದಂತೆ ಎನ್ನುವುದು ಈ ಖತರ್ನಾಕ್ ಐಡಿಯಾದ ಹಿಂದಿನ ಅಸಲಿಯತ್ತು ಎನ್ನುವುದು ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿರುವ ಮಾತು.
ನಿರುದ್ಯೋಗ ಸಮಸ್ಯೆಯಿಂದ ಕಂಗೆಟ್ಟಿರುವ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಸಾಕಷ್ಟು ನೆರವಾಗಬಲ್ಲುದು. ಅಧಿಕಾರಿಗಳು ಜನರಲ್ಲಿ ಅರಿವು ಮೂಡಿಸಿ ಅವರನ್ನು ಕೆಲಸಕ್ಕಿಳಿಸಬೇಕು, ಸಮಯಕ್ಕೆ ಸರಿಯಾಗಿ ಸಂಬಂಧಪಟ್ಟವರ ಖಾತೆಗೆ ಮಾಡಿದ ಕೆಲಸದ ಹಣ ವರ್ಗಾವಣೆಯಾಗಬೇಕು. ಎಲ್ಲಕ್ಕಿಂತ ಮೊದಲು ಅಧಿಕಾರಿಗಳನ್ನು ಹುಡುಕಿಕೊಂಡು ಜನರು ಅಲೆದಾಡುವುದನ್ನು ತಪ್ಪಿಸಬೇಕು. ಯಾವ ಯಾವ ಗ್ರಾಮಪಂಚಾಯತಗಳಲ್ಲಿ ಅತೀ ಕಡಿಮೆ ನರೇಗಾ ಕೆಲಸವಾಗುತ್ತಿದೆ ಎನ್ನುವ ಮಾಹಿತಿ ಪಡೆದು ಅದರ ಹಿಂದಿನ ನೈಜ ಕಾರಣವನ್ನು ಅರಿಯುವ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳು ಮುಂದಾಗಿ ಸ್ಥಳೀಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರೆ ಮಾತ್ರ ನರೇಗಾದಡಿ ಕೆಲಸಮಾಡಲು ಜನರು ಮುಂದೆ ಬರುತ್ತಾರೆನ್ನುವ ಅಭಿಪ್ರಾಯ ಕೇಳಿಬರುತ್ತಿದೆ.
[ಬೆಂಗಳೂರಿನಲ್ಲಿದ್ದ ನಾನು ಕೊರೊನಾ ಕಾರಣಕ್ಕೆ ಲಾಕ್ಡೌನ್ ಆದಾಗ ಊರಿಗೆ ಬಂದಿದ್ದೆ. ಕೆಲಸವಿಲ್ಲದೇ ಖಾಲಿ ಕುಳಿತು ಹಣಕಾಸಿನ ಸಮಸ್ಯೆ ಎದುರಾದಾಗ ಸಂಬಳ ಕಡಿಮೆ ಆದರೂ ಪರವಾಗಿಲ್ಲ ಎಂದು 20 ದಿನ ನರೇಗಾ ಕೆಲಸಕ್ಕೆ ಹೋಗಿದ್ದೆ. ಕೆಲಸ ಮುಗಿದು ನಾಲ್ಕು ತಿಂಗಳಾಯ್ತು ಇದುವರೆಗೆ ನಮ್ಮ ಖಾತೆಗೆ ಬಂದಿರುವುದು ಕೇವಲ 1140 ರುಪಾಯಿ ಮಾತ್ರ. ಹೀಗಾದರೆ ಯಾರು ಕೆಲಸಕ್ಕೆ ಹೋಗ್ತಾರೆ – ಚಂದ್ರು, ಖರ್ವಾ]
ನರೇಗಾ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿದ ತಾಲೂಕಿನ 5 ಗ್ರಾಮ ಪಂಚಾಯತಗಳು (2019 -20 ನೇ ಸಾಲಿನಲ್ಲಿ)
ಅ.ನಂ ಗ್ರಾಮ ಪಂಚಾಯತ ಗುರಿ(ಮಾನವ ಶ್ರಮ ದಿನ) ಸಾಧನೆ (ಮಾನವ ಶ್ರಮ ದಿನ) ಶೇಕಡಾವಾರು ಸಾಧನೆ
01 ಚಿಕ್ಕನಕೋಡ 2798 4608 164%
02 ಮಾಗೋಡ 1814 2236 123.22%
03 ಉಪ್ಪೋಣಿ 2687 2847 105.95%
04 ಕಡತೋಕ 2034 2138 105.11%
05 ಅನಂತವಾಡಿ 2641 2535 95.99
ಕಳಪೆ ಸಾಧನೆ ದಾಖಲಿಸಿದ 5 ಗ್ರಾಮ ಪಂಚಾಯತಗಳು (2019 -20 ನೇ ಸಾಲಿನಲ್ಲಿ)
ಅ.ನಂ ಗ್ರಾಮಪಂಚಾಯತ ಗುರಿ(ಮಾನವ ಶ್ರಮ ದಿನ) ಸಾಧನೆ (ಮಾನವ ಶ್ರಮ ದಿನ) ಶೇಕಡಾವಾರು ಸಾಧನೆ
01 ಮಂಕಿ 6036 1857 30.77%
02 ಹೊಸಾಕುಳಿ 2553 860 33.69%
03 ನವಿಲಗೋಣ 1823 940 51.56%
04 ಕೆಳಗಿನೂರು 4787 2569 53.67%
05 ಅನಂತವಾಡಿ 5384 3073 57.08%
2019 -20 ಸಾಲಿನಲ್ಲಿ ಹೊನ್ನಾವರ ತಾಲೂಕಿನ 28 ಗ್ರಾಮಪಂಚಾಯತಗಳಿಂದ ಒಟ್ಟೂ 1 ಲಕ್ಷ 29 ಮಾನವ ಶ್ರಮ ದಿನಗಳ ಗುರಿಯನ್ನು ಹಾಕಿಕೊಂಡಿದ್ದು 75876 ಮಾನವ ಶ್ರಮ ದಿನಗಳ ಕೆಲಸ ಮಾತ್ರ ಆಗಿದೆ ಸಾಧನೆ 75.85%. ಆಯವ್ಯಯ ವಾರ್ಷಿಕ ಗುರಿ 4 ಕೋಟಿ 15 ಲಕ್ಷ 12 ಸಾವಿರದ ಮೂವತೈದು ರುಪಾಯಿ. ಸಾಧನೆ 2 ಕೋಟಿ 45 ಲಕ್ಷ 51 ಸಾವಿರ ರುಪಾಯಿ ಮಾತ್ರ ಶೇಕಡಾ 59.14%
Leave a Comment