ಹೊನ್ನಾವರ: ತಾಲೂಕಿನಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳಗಳು ಮೈದುಂಬಿ ಹರಿಯುತ್ತಿವೆ. ತಾಲೂಕಿನ ಮಾಡಗೇರಿ ಹಳ್ಳ ಬಡಗಣಿ ಹಳ್ಳ, ಸಾಲಕೋಡ ಹಳ್ಳ, ಭಾಸ್ಕೇರಿ ಹಳ್ಳ, ಗುಂಡಬಾಳ ನದಿ, ಮಾಗೋಡ ಹಳ್ಳ, ನದಿಯ ಪಾತ್ರವನ್ನು ಮೀರಿ ಹರಿಯುತ್ತಿದೆ. ಚಿಕ್ಕನಕೋಡ ಭಾಗದಲ್ಲಿ ಗುಂಡಬಾಳ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಚಿಕ್ಕನಕೋಡದಲ್ಲ್ಲಿ ಕಾಳಜಿಕೇಂದ್ರವನ್ನು ಆರಂಭಿಸಲಾಗಿದೆ. ಮೂರು ಕುಟುಂಬದ ಒಟ್ಟೂ ೧೪ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಹಾನಿಯ ವಿವರ: ಮಾಡಗೇರಿ ಗ್ರಾಮದ ಶಂಭು ಶಂಕರ ನಾರಾಯಣ ಭಟ್ ಇವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿ ಆಗಿದೆ. ಕೆಕ್ಕಾರ ಗ್ರಾಮದ ಹುಜಿಮುರಿ ಮಜರೆಯ ದೇವು ಜಟ್ಟಿ ಮುಕ್ರಿ ಇವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಗೆ ಒಳಗಾಗಿದೆ. ಆರೋಳ್ಳಿ ಮುಂಡಗೋಡ ಗ್ರಾಮದ ಕೊಸ್ತಾಂವ್ ಅಂತೋನ ಫರ್ನಾಂಡಿಸ್ ಅವರ ವಾಸ್ಥವ್ಯದ ಮನೆಯು ಗುಡ್ಡದ ಧರೆ ಬಿದ್ದು ಮನೆಯ ಗೋಡೆ ಹಾಗೂ ಮೇಲ್ಛಾವಣಿಯು ಕುಸಿದು ಹಾನಿಯು ಸಂಭವಿಸಿರುತ್ತದೆ. ಯಾವುದೇ ಜನ ಜಾನುವಾರು ಹಾನಿ ಆಗಿರುವುದಿಲ್ಲ.
ಕಾಡುತ್ತಿರುವ ಭೀತಿ: ಶರಾವತಿ ನದಿಯಲ್ಲಿ ಲಿಂಗನಮಕ್ಕಿ, ಗೇರಸೊಪ್ಪಾ ಟ್ಯಾಲರಿಸ್ ಆಣೆಕಟ್ಟುಗಳಿಂದ ವಿದ್ಯುತ್ ಉತ್ಪಾದಿತ ನೀರನ್ನು ಮಾತ್ರ ಬಿಡುತ್ತಿರುವುದರಿಂದ ಯಾವುದೇ ನೆರೆ ಉಂಟಾಗಿಲ್ಲ. ಒಂದೊಮ್ಮೆ ಶಿವಮೊಗ್ಗಾ, ಸಾಗರ, ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಿದರೆ ಡ್ಯಾಂಗಳಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಿ ನೀರನ್ನು ಹೊರಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಆದರೆ ಮಾತ್ರ ನೆರೆಯಿಲ್ಲದೇ ಶರಾವತಿ ನದಿ ಸುಮ್ಮನೆ ಹರಿಯಲು ಸಾಧ್ಯ. ಮಳೆಯ ಪ್ರಮಾಣ ಹೆಚ್ಚಿದ್ದಲ್ಲಿ ನೆರೆಯ ಭೀತಿ ಜನರನ್ನು ಖಂಡಿತ ಕಾಡಲಿದೆ.
Leave a Comment