ಹಳಿಯಾಳ:- ಹಳಿಯಾಳ ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ನ ಗೌರವಾಧ್ಯಕ್ಷರಾಗಿದ್ದ ಎಂ.ಎನ್.ತಳವಾರ(82) ಅವರು ಅನಾರೋಗ್ಯದಿಂದ ಭಾನುವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಪಟ್ಟಣದ ಆನೆಗುಂದಿ ಬಡಾವಣೆ ನಿವಾಸಿಯಾಗಿದ್ದ ಅವರು ಹಳಿಯಾಳದಲ್ಲಿ “ತಳವಾರ ಅಜ್ಜ” ಎಂದೇ ಖ್ಯಾತರಾಗಿದ್ದರು. ನಿವೃತ್ತ ಇಂಜೀನಿಯರ್ ಆಗಿದ್ದ ಅವರು ಹಳಿಯಾಳ ತಾಲೂಕಿನಲ್ಲಿ ಆಧ್ಯಾತ್ಮದ ಜ್ಞಾನ ಧಿವಿಗೆಯನ್ನು ಪಸರಿಸಿದವರು. ಯಾವುದೇ ಫಲಾಫೆಕ್ಷೆಗಳಿಲ್ಲದೇ ತಮ್ಮ 82ರ ಇಳಿವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಸಮಾಜ ಸೇವೆಯಲ್ಲಿ ಮುಂಚುಣಿಯಲ್ಲಿರುತ್ತಿದ್ದ ಅವರು ಪುರಾಣ, ಪ್ರವಚನ, ಉಪನ್ಯಾಸಗಳಲ್ಲಿ ಜನರಿಗೆ ಮನಮುಟ್ಟುವಂತಹ ವಾಕ್ಚಾತುರ್ಯ ಅವರದ್ದಾಗಿತ್ತು. ಎಲ್ಲ ಧರ್ಮಗಳ ಆಧ್ಯಾತ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ, ಸರ್ಕಾರಿ ಜಯಂತಿಗಳಲ್ಲಿ ತಳವಾರಜ್ಜ ಖಾಯಂ ಆಹ್ವಾನಿತರು.
ಮಹರ್ಷಿ ವಾಲ್ಮೀಕಿಯಂತೆ ಬಿಳಿ ಕೂದಲು, ಬಿಳಿ ಉದ್ದ ಗಡ್ಡ ಬಿಟ್ಟಿದ್ದ ಅವರು ಹಣೆಯ ಮೇಲೆ ವಿಭೂತಿ ಧರಿಸಿ ಶ್ವೇತ ಬಣ್ಣದ ಜುಬ್ಬಾ ಮತ್ತು ಪಂಚೆ ಧರಿಸಿ ಸನ್ಯಾಸಿಗಳಂತೆ ಕಾಣುತ್ತಿದ್ದರು ಅವರ ಆ ವೇಷಭೂಷಣ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಅವರು ಹೆಂಡತಿ ಹಾಗೂ ಇಬ್ಬರು ಮಕ್ಕಳು, ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಉಪ್ಪಿನ ಬೇಟಗೇರಿಯಲ್ಲಿ ನೆರವೆರಿಸಲಾಯಿತು.
ಯುವಕರಿಗೆ ಆಧ್ಯಾತ್ಮದ ಹಾಗೂ ಶ್ರೇಷ್ಠ ದಾರ್ಶನಿಕರ ಚಿಂತನೆಗಳನ್ನು ಹೇಳುವುದರ ಮೂಲಕ ಸ್ಪೂರ್ತಿಯ ಸೆಲೆಯಾಗಿದ್ದ, ಸದಾ ಚಟುವಟಿಕೆಯಿಂದ ಎಲ್ಲರಿಗೂ ಮಾದರಿಯಾಗಿ ಪ್ರೇರಕ ಶಕ್ತಿಯಾಗಿ ಇರುತ್ತಿದ್ದ ಎಮ್ ಎನ್ ತಳವಾರ ಅವರನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟವಾಗಿದೆ ಎಂದು- ಶಾಸಕ ಆರ್ ವಿ ದೇಶಪಾಂಡೆ.
ಗುರುಕರುಣೆ ಪಡೆದು ಹರನಾಮ ಪಿಡಿದು ಸಮಾಜವನ್ನೇ ಮಂದಿರ ಮಾಡಿ ಅಸಂಖ್ಯಾತ ಬಳಗ ಗಳಿಸಿ ಆಧ್ಯಾತ್ಮದ ಮಳೆಗರೆದು ಬಾರದ ಲೋಕಕ್ಕೆ ಪಯಣ ಬೆಳೆಸಿದ ಆಧ್ಯಾತ್ಮಿಕ ಚಿಂತಕರಾದ ಎಮ್.ಎನ್ ತಳವಾರ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಸದ್ಗತಿ ಪ್ರಾಪ್ತಿಯಾಗಲಿ ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ- ಮಾಜಿ ಶಾಸಕ ಸುನೀಲ್ ಹೆಗಡೆ.
ಅತ್ಯಂತ ಸರಳ ಸ್ವಭಾವದ, ಸಜ್ಜನ ವ್ಯಕ್ತಿತ್ವದ ಆಧ್ಯಾತ್ಮಿಕ ಚಿಂತನೆಯ ಮೂಲಕ ಹಳಿಯಾಳದಲ್ಲಿ ಮನೆ ಮಾತಾಗಿದ್ದ ಹಿರಿಯಜ್ಜನಂತೆ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದ ಎಮ್.ಎನ್.ತಳವಾರ ಅವರನ್ನು ಕಳೆದುಕೊಂಡು ಹಳಿಯಾಳ ಬಡವಾಗಿದೆ ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ- ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ.
ಸಾಧಕರಿಗೆ, ಸನ್ಯಾಸಿಗಳಿಗೆ ಸದಾಕಾಲ ಮಾರ್ಗದರ್ಶಕರು, ಆಶ್ರಯದಾತರಾಗಿದ್ದ ಎಮ್.ಎನ್.ತಳವಾರ ಅವರು ಜಾತಿ, ಮತ, ಪಂಥ, ಧರ್ಮ ಮೀರಿ ಬೆಳೆದ ಹಿರಿಯ ಚೇತನರಾಗಿದ್ದರು. ಅವರ ಅಗಲಿಕೆ ಹಳಿಯಾಳ ತಾಲೂಕಿನ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಂತಾಗಿದೆ - ಬೆಂಗಳೂರು ಗೋಸಾಯಿ ಮಹಾಸಂಸ್ಥಾನ ಮಠದ ಮರಾಠಾ ಜಗದ್ಗುರು, ಗಾನಯೋಗಿ ಮಂಜುನಾಥ ಮಹಾರಾಜ.
ಗಣ್ಯರಿಂದ ಸಂತಾಪ:- ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಕುಮಾರ ವಿರುಪಾಕ್ಷೇಶ್ವರ ಮಹಾಸ್ವಾಮಿಜಿಗಳು, ಶಿರಸಿ ಬಣ್ಣದ ಮಠದ ಶಿವಲಿಂಗ ಸ್ವಾಮಿಜಿಗಳು, ಇಂಗಳೇಶ್ವರ ಮಠದ ಚೆನ್ನಬಸವ ಮಹಾಸ್ವಾಮಿಜಿಗಳು, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿಸ್ವಾಮಿ, ಬಸವಕೇಂದ್ರ ಅಧ್ಯಕ್ಷ ಚಂದ್ರಕಾಂತ ಅಂಗಡಿ, ಸುಮಂಗಲಾ ಅಂಗಡಿ, ಕರ್ನಾಟಕ ರಕ್ಷಣಾ ವೇದಿಕೆ ಬಸವರಾಜ ಬೆಂಡಿಗೆರಿಮಠ, ಜಯ ಕರ್ನಾಟಕ ಸಂಘಟನೆ ವಿಲಾಸ ಕಣಗಲಿ, ಹಳಿಯಾಳ ನಾಗರಿಕ ವೇದಿಕೆ ಮಂಜುನಾಥ ಮಾದರ, ಜೀಜಾಮಾತಾ ಸಂಘಟನೆ, ಹಿರಿಯ ನಾಗರಿಕರ ವೇದಿಕೆ, ವ್ಯಾಪಾರಸ್ಥರ ಸಂಘಟನೆ, ಪುರಸಭೆ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
Leave a Comment