ತಾಲೂಕಿನ ಹೆಮ್ಮೆ ಕೆಳಗಿನೂರು ವ್ಯವಸಾಯ ಸೇವಾ ಸಹಕಾರಿ ಸಂಘ
ಹೊನ್ನಾವರ – ಎಲ್ಲರೂ ಪ್ರತಿಯೊಬ್ಬನಿಗಾಗಿ ಪ್ರತಿಯೊಬ್ಬನೂ ಎಲ್ಲರಿಗಾಗಿ ಎನ್ನುವ ಸಹಕಾರಿ ತತ್ವದಲ್ಲಿ ನಂಬಿಕೆಯಿಟ್ಟಿರುವ ಅಧ್ಯಕ್ಷರನ್ನೊಳಗೊಂಡ ದಕ್ಷ ಆಡಳಿತ ಮಂಡಳಿ, ಸದಸ್ಯರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸುವ ನೌಕರ ವರ್ಗ, ತಾವು ಬೆಳೆಯುವ ಜೊತೆಗೆ ಸಂಘವನ್ನೂ ಬೆಳೆಸಬೇಕೆನ್ನುವ ತುಡಿತವನ್ನು ಹೊಂದಿರುವ 6 ಸಾವಿರಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಕೆಳಗಿನೂರು ವ್ಯವಸಾಯ ಸೇವಾ ಸಹಕಾರಿ ಸಂಘ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಘಗಳಲ್ಲೊಂದು ಎಂದು ಗುರುತಿಸಲ್ಪಟ್ಟಿದೆ.

ಸಹಕಾರಿ ಸಂಘದ ನಿಜವಾದ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆಗಳನ್ನಿಡುತ್ತಿರುವ ಕೆಳಗಿನೂರು ವಿ.ಎಸ್.ಎಸ್. ಗುಣವಂತೆ, ಹಿರೇಮಠ, ಚಿತ್ತಾರ ಮತ್ತು ಅನಂತವಾಡಿ ಸೇರಿದಂತೆ ನಾಲ್ಕು ಕಡೆ ಶಾಖೆಗಳನ್ನು ತೆರೆದು ತನ್ನ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡಿರುವುದು ಸಂಘದ ಪ್ರಗತಿಗೊಂದು ಸಾಕ್ಷಿ ಎನ್ನುವಂತಿದೆ.
ಬೆಂಬಿಡದೇ ಕಾಡುತ್ತಿರುವ ಕೊರೊನಾ ಸಂಕಷ್ಟದ ದಿನಗಳಲ್ಲಿ ಸಂಘದ ಸದಸ್ಯರು ರೇಷನ್ಗೆ ಬರುವಾಗ ಮಾಸ್ಕ್ ಧರಿಸದೇ ಬರುವುದನ್ನು ಕಂಡು ಪ್ರತಿ ಕಾರ್ಡದಾರರಿಗೂ ಮಾಸ್ಕ್ ವಿತರಿಸಿದ್ದಾರೆ. ಮಾತ್ರವಲ್ಲ ಕೋವಿಡ್ ಕಾರಣದಿಂದ ಸಂಘದ ಸಾಲಗಾರ ಸದಸ್ಯರ ಹಿತದೃಷ್ಠಿಯಿಂದ ಯಾವುದೇ ನೋಟೀಸ್ ವಸೂಲಿಗೆ ಹೋಗದಿದ್ದರೂ ಶೇ.92 ರಷ್ಟು ಸಾಲ ವಸೂಲಾತಿಯಾಗಿರುವುದು ಸದಸ್ಯರು ಸಂಘದಮೇಲಿಟ್ಟಿರುವ ಕಾಳಜಿಯನ್ನು ತೋರಿಸುತ್ತದೆ.
ಸಹಕಾರಿ ರಂಗದಲ್ಲಿ ಸಲ್ಲಿಸಿದ ಅತ್ಯಮೋಘ ಸೇವೆಗಾಗಿ ಅಜ್ಜೀಬಳ ಪ್ರಶಸ್ತಿ ಪುರಸ್ಕøತರಾಗಿರುವ, ಅಪಾರ ಜೀವನಾನುಭವ ಮತ್ತು ಸಹಕಾರಿ ರಂಗದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವ ಗಣಪಯ್ಯ ಕನ್ಯಾ ಗೌಡ ಮುಗಳಿ ಇವರ ಸಮರ್ಥ ಮುಂದಾಳತ್ವದ ಆಡಳಿತಮಂಡಳಿಯ ದಿಗ್ದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಘ ಕಳೆದೆರಡು ದಶಕಗಳಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ ಎನ್ನುವುದನ್ನು ಖಾತರಿಪಡಿಸುತ್ತದೆ ಸಂಘದ ಸಾಧನೆಗೆ ದೊರಕಿದ ಪ್ರಶಸ್ತಿಗಳ ಪಟ್ಟಿ.
ಸಹಕಾರಿ ಸಂಘಗಳು ಆಡಳಿತ ಮಂಡಳಿ ಮತ್ತು ನೌಕರ ವರ್ಗ ಪ್ರಣೀತ ದುರಾಡಳಿತಕ್ಕೆ ಒಳಗಾಗಿ ಸದಸ್ಯರ ವಿಶ್ವಾಸಕ್ಕೆ ದಕ್ಕೆ ತಂದು ಹಗರಣಗಳಲ್ಲಿ ಮುಳುಗೇಳುತ್ತಾ ಸಹಕಾರಿ ವಲಯವನ್ನೇ ಜನರು ಅನುಮಾನದಿಂದ ನೋಡುವಂತ ಸ್ಥಿತಿ ನಿರ್ಮಾಣವಾಗಿರುವ ಹೊತ್ತಲ್ಲಿ ಕೆಳಗಿನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಬೆಳವಣಿಗೆ ಕಾರ್ಮುಗಿಲ ನಡುವೆ ಮೂಡಿದ ಬೆಳ್ಳಿ ರೇಖೆಯಂತೆ ಕಾಣಿಸುತ್ತಿದೆ.
ಸಂಘ ಅನುಷ್ಠಾನ ಮಾಡಿರುವ ವಿಶೇಷ ಕಾರ್ಯಕ್ರಮಗಳು
ಸಿಬ್ಬಂದಿ ಕಲ್ಯಾಣ ನಿಧಿ – ಸಂಘದ ಯಾವುದೇ ಸಿಬ್ಬಂದಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ ಆಸ್ಪತ್ರೆಯ ವೆಚ್ಚವನ್ನು ಸಂಘದಿಂದಲೇ ಭರಿಸಲಾಗುತ್ತದೆ
ಸದಸ್ಯರ ಕಲ್ಯಾಣ ನಿಧಿ – ಸಾಮಾನ್ಯ ಸಭೆಯಲ್ಲಿ ಹೆಚ್ಚಿನ ಸದಸ್ಯರು ಹಾಜರಾಗಬೇಕೆನ್ನುವ ಕಾರಣಕ್ಕೆ ಸಭೆಗೆ ಬಂದವರನ್ನು ಗೌರವಿಸಲಾಗುತ್ತದೆ.
ಸದಸ್ಯರ ಮರಣೋತ್ತರ ನಿಧಿ – ಸಂಘದ ಸದಸ್ಯರು ಮರಣ ಹೊಂದಿದಲ್ಲಿ ತಕ್ಷಣ ಐದು ಸಾವಿರ ರೂಪಾಯಿ ಅಂತ್ಯ ಸಂಸ್ಕಾರಕ್ಕಾಗಿ ಅವರ ಕುಟುಂಬಕ್ಕೆ ನೀಡುತ್ತಾರೆ.
ಶಿಕ್ಷಣ ಪ್ರೋತ್ಸಾಹ ನಿಧಿ – ಸಂಘದ ಕಾರ್ಯವ್ಯಾಪ್ತಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಕೂಲ್ಬ್ಯಾಗ್ ಹಾಗೂ ಇನ್ನಿತರ ಪ್ರೋತ್ಸಾಹ
ಕಟ್ಟಡ ನಿಧಿ – ಕಟ್ಟಡ ನಿರ್ಮಾಣಕ್ಕೆ ಹಣ ಅನುವುಮಾಡಿ ಪ್ರಧಾನ ಕಛೇರಿ ಮತ್ತು ಗುಣವಂತೆಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ
ಡಿವಿಡೆಂಡ್ – ಸಂಘದ ಏಳ್ಗೆಗೆ ಕಾರಣರಾಗಿರುವ ಶೇರುದಾರರಿಗೆ ಸತತವಾಗಿ 20 % ಡಿವಿಡೆಂಡ್ ನೀಡುತ್ತಾ ಬಂದಿರುತ್ತಾರೆ.
ಸಂಘದ ಮುಡಿಗೆ ಸಂದಾಯವಾದ ಪ್ರಶಸ್ತಿಗಳ ಗರಿ
2003-04 ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಉತ್ತಮ ಸಾಧನೆಗಾಗಿ ಸುಭಾಷ ಯಾದವ ರಾಷ್ಟ್ರ ಪ್ರಶಸ್ತಿ, 1997 ರಿಂದ 2016-17 ರ ಅವಧಿಯಲ್ಲಿ 11 ಬಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇವರು ನೀಡುವ ರಾಜ್ಯಮಟ್ಟದ ಅತ್ಯುನ್ನತ ಸಾಧನಾ ಪ್ರಶಸ್ತಿ, 1995 -96 ರಿಂದ 2017 -18 ರವರೆಗೆ 5 ಬಾರಿ ಕೆ.ಡಿ.ಸಿ.ಸಿ ಬ್ಯಾಂಕ್ ಪ್ರಶಸ್ತಿ ಸಂಘಕ್ಕೆ ಸಂದಿದೆ.
ಸತತ 30 ವರ್ಷಗಳಿಂದ ಸಂಘದ ಅಭಿವೃದ್ಧಿಗೆ ಕಾಣಿಕೆ ನೀಡಲು ನಮ್ಮನ್ನು ಆಯ್ಕೆಮಾಡುತ್ತಿರುವ ಸದಸ್ಯರ ವಿಶ್ವಾಸಕ್ಕೆ ದಕ್ಕೆಯಾಗುವ ಕೆಲಸವನ್ನು ಆಡಳಿತಮಂಡಳಿ ಸದಸ್ಯರಾಗಲಿ ಸಿಬ್ಬಂದಿಗಳಾಗಲಿ ಯಾವತ್ತೂ ಮಾಡಿಲ್ಲ. ಸದಸ್ಯರ ಬೇಡಿಕೆಗಳಿಗನುಗುಣವಾಗಿ ಸಾಲ ಸೌಲಭ್ಯಗಳನ್ನು ಪೂರೈಸಿದ್ದೇವೆ. ಸಂಘದ ಸಾಧನೆ ಯಾರೊಬ್ಬರ ಸಾಧನೆಯಲ್ಲ. ಅದು ನಮ್ಮೆಲ್ಲಾ ಸದಸ್ಯರು, ನೌಕರರು, ಆಡಳಿತ ಮಂಡಳಿಯವರ ಸಹಕಾರದಿಂದ ಸಾಧ್ಯವಾಗಿದ್ದು. ಪ್ರಾಮಾಣಿಕತೆಯನ್ನು ಜನ ಯಾವಾಗಲೂ ಬೆಂಬಲಿಸುತ್ತಾರೆ.- ಗಣಪಯ್ಯ.ಕೆ.ಗೌಡ ಮುಗಳಿ, ಅಧ್ಯಕ್ಷರು ವಿ.ಎಸ್.ಎಸ್.ಕೆಳಗಿನೂರು.
Leave a Comment