ಹೊನ್ನಾವರ ಪಟ್ಟಣ ಪಂಚಾಯತ ಆವಾರದಲ್ಲಿ ಮಾರಾಮಾರಿ.ಅವಾಚ್ಯ ಶಬ್ದದಿಂದ ನಿಂದಿಸಿಕೊಂಡು ,ದೈಹಿಕ ಹಲ್ಲೆಯ ಬಳಿಕ ಇ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾದ ಘಟನೆ ವರದಿಯಾಗಿದೆ.
ಪಟ್ಟಣದ ರಾಮತೀರ್ಥ ನಿವಾಸಿ ಕುಮಟಾ ಪುರಸಭೆ ನಿವೃತ್ತ ನೌಕರ ಮಹೇಶ್ ಬಹಿರಾಮ ಪಾಲೇಕರ್ ಎನ್ನುವವರು ಅಕ್ಟೋಬರ್ ೬ರಂದು ಮಧ್ಯಾಹ್ನ 1-20 ಗಂಟೆಯ ಸುಮಾರಿಗೆ ಪ.ಪಂ ಹೊನ್ನಾವರ ಮುಖ್ಯಾಧಿಕಾರಿಗಳ ಕಛೇರಿಯ ಕೊಠಡಿಗೆ ತಮ್ಮ ಕಾಗದ ಪತ್ರಗಳನ್ನು ಪಡೆದುಕೊಳ್ಳಲೆಂದು ಹೋಗಿದ್ದರು ಎನ್ನಲಾಗಿದೆ. ಆಗ ಅಲ್ಲಿ ಹಾಜರಿದ್ದ ವೃತ್ತಿಯಲ್ಲಿ ಚಹಾ ಅಂಗಡಿ ವ್ಯಾಪಾರಸ್ಥ ಕನ್ನಡ ಅಭಿಮಾನಿ ಸಂಘದ ಸಂಸ್ಥಾಪಕ ಅಧ್ಯಕ್ಷ ಆದ ಪಟ್ಟಣದ ನಿವಾಸಿ ಉದಯರಾಜ ಗಣಪತಿ ಮೇಸ್ತ ಮಹೇಶ್ ಬಹಿರಾಮ ಪಾಲೇಕರ್ ಅವರನ್ನು ನೋಡಿ ಈ ಹಿಂದೆ ಕಛೇರಿಯಲ್ಲಿ ಕೆಲಸ ಮಾಡಿದ್ದರ ಬಗ್ಗೆ ಹೇಳುತ್ತಾ ‘ವಸಂತ ಫ್ರಭು ಇವರ ಬಳಿಯಲ್ಲಿ ಹಣ ತಿಂದು ನೀನು ನಾಯಿ ಬದುಕು ನಡೆಸುತ್ತಿದ್ದೀಯಾ’ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ ಎನ್ನಲಾಗಿದೆ. ಆಗ ಮಹೇಶ್ ಅವರು ಅದಕ್ಕೆ ವಿರೋಧ ವ್ಯಕ್ತ ಪಡಿಸಿ, ಹೊರಗೆ ಬರುತ್ತಿದ್ದಾಗ ಉದಯರಾಜ ಮತ್ತು ಮಹೇಶ್ ನಡುವೆ ವಾದ ಪ್ರತಿವಾದ ನಿಂದನೆ ಆರಂಭಗೊಂಡು ಕೈ ಕೈ ಮಿಲಾಯಿಸಿಕೊಂಡಿದ್ದಾರೆ.
ಈ ಘಟನೆ ಠಾಣೆಯ ಮೆಟ್ಟಿಲೆರಿದ್ದು ಮಹೇಶ ಎನ್ನುವಾತ ಉದಯರಾಜ ಮೇಲೆ ದೂರು ನೀಡಿದ್ದು ದೂರಿನಲ್ಲಿ ಕೆಲಸ ನಿಮಿತ್ತ ಹೋದಾಗ ನನ್ನನ್ನು ನಿಂದಿಸಿ ಅಡ್ಡಗಟ್ಟಿ ಹಿಡಿದು ಏಕಾಏಕಿ ಕೈಯಿಂದ ಬೆನ್ನಿನ ಮೇಲೆ, ಮುಖದ ಮೇಲೆ ಹೊಡೆದು ದೂಡಿ ಹಾಕಿ ಬಲಗೈ ಮೊಣ ಕೈಗೆ ಹಾಗೂ ಎಡಗಣ್ಣಿನ ಕೆಳಭಾಗದಲ್ಲಿ ಒಳನೋವು ಪಡಿಸಿ ಕನ್ನಡಕವನ್ನು ಒಡೆದು ಹಾಕಿದ್ದಾರೆ ಎನ್ನಲಾಗಿದೆ. ಉದಯರಾಜ ಮೇಸ್ತ ಅವರು ಬಲಿರಾಮ ಅವರಿಗೆ ‘ಮುಂದಿನ ದಿನಗಳಲ್ಲಿ ನಿನಗೆ ಜೀವ ಸಹಿತ ಬಿಡುವುದಿಲ್ಲ’ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಹೇಶ ಬಹಿರಾಮ ಪಾಲೇಕರ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆಗೆ ಸಂಭದಿಸಿದಂತೆ ಪ್ರತಿದೂರು ಇನ್ನೂ ಪ್ರಕರಣಕ್ಕೆ ಕುರಿತಂತೆ ಉದಯರಾಜ ಮೇಸ್ತ ಅವರು ಐವರ ವಿರುದ್ದ ಪ್ರತಿದೂರು ನೀಡಿದ್ದಾರೆ. ಪಟ್ಟಣದ ರಾಮತಿರ್ಥದ ಹಾಲಿ ನಿವಾಸಿಗಳಾದ ಮಹೇಶ ಬಹಿರಾಮ ಪಾಲೇಕರ, ಸ್ವರಾಜ ಮಹೇಶ ಪಾಲೇಕರ, ಪ್ರಥ್ವಿರಾಜ ಮಹೇಶ ಪಾಲೇಕರ, ಟೊಂಕ, ಕಾಸರಕೋಡದ ನಿವಾಸಿಗಳಾದ ಸಮರ್ಥ ತಾಂಡೇಲ್, ಸಿದ್ದಾರ್ಥ ತಾಂಡೇಲ್ ವಿರುದ್ದ ಪ್ರಕರಣ ದಾಖಲಾಗಿದೆ. ಅಕ್ಟೋಬರ್ ೬ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಪಟ್ಟಣ ಪಂಚಾಯತಿ ಹೊನ್ನಾವರ ಕಛೇರಿಯಲ್ಲಿ ಮನೆಯ ಟ್ಯಾಕ್ಸ್ ತುಂಬಲು ಹೋಗಿ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡುತ್ತಿದ್ದಾಗ ಆರೋಪಿತರಲ್ಲಿ ಮಹೇಶ್ ಅವರು ಉದಯರಾಜ ಅವರಿಗೆ ಅಡ್ಡಗಟ್ಟಿ ಅವಾಚ್ಯವಾಗಿ ಬೈಯ್ದು, ಶರ್ಟ್ ಅನ್ನು ಹಿಡಿದು ಹರಿದು ಕೈಯಿಂದ ಮೈಮೇಲೆ ಹೊಡೆದು ಎಡಗೈ ಅಂಗೈಗೆ ಹಾಗೂ ಎಡಬದಿಯ ಸೊಂಟಕ್ಕೆ ಹೊಡೆದು ಗಾಯನೋವು ಪಡಿಸಿ, ಕನ್ನಡಕವನ್ನು ಒಡೆದು ಹಾಕಿದ್ದಾರೆ ಎನ್ನಲಾಗಿದೆ. ಮಹೇಶ್ ನಾಲ್ವರೊಂದಿಗೆ ಮನೆಯ ಹತ್ತಿರ ಹೋಗಿ ಆರೋಪಿತರೆಲ್ಲರೂ ಸೇರಿ ‘ ಅವಾಚ್ಯವಾಗಿ ಬೈಯ್ದು ‘ಇನ್ನೊಮ್ಮೆ ಸಿಕ್ಕಾಗ ನಿಮ್ಮನ್ನು ಜೀವ ಸಮೇತ ಬಿಡುವುದಿಲ್ಲ ಎಂದು ಮನೆಯಲ್ಲಿದ್ದ ಉದಯರಾಜ ಹಾಗೂ ಅವರ ಮಕ್ಕಳಿಗೆ ಜೀವದ ಬೆದರಿಕೆ ಹಾಕಿದ ಬಗ್ಗೆ ಉದಯರಾಜ ಗಣಪತಿ ಮೇಸ್ತ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೂರು ಪ್ರತಿದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ.
Leave a Comment