ಹೊನ್ನಾವರ ನ : ಕರ್ನಾಟಕ ಸರಕಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಆದೇಶದಂತೆ ಸ್ಥಳೀಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜು ಪುನರಾರಂಭವಾದ ಹಿನ್ನೆಲೆಯಲ್ಲಿ ಕೋವಿಡ್-19 ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಲಾಯಿತು. ತಾಲೂಕು ಆರೋಗ್ಯ ಇಲಾಖೆ, ಹೊನ್ನಾವರದ ಡಾ. ಸತೀಶ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲಕೋಡದ ಡಾ. ಸಂತೋಷ ಇವರು ತಮ್ಮ ಸಿಬ್ಬಂದಿಗಳೊಂದಿಗೆ ಬಂದು ಎರಡು ತಂಡಗಳಾಗಿ ವಿದ್ಯಾರ್ಥಿಗಳಿಗೆ ಗಂಟಲುದ್ರವ ಪರೀಕ್ಷೆ ನಿರ್ವಹಿಸಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳನ್ನೊಳಗೊಂಡು ಒಟ್ಟೂ 231 ಜನರಿಗೆ ಕೊರೊನಾ ಟೆಸ್ಟ್ ಒಳಪಡಿಸಲಾಯಿತು. ಕೋವಿಡ್-19 ಟೆಸ್ಟ್ ಸಮಿತಿಯನ್ನು ಕಾಲೇಜಿನಲ್ಲಿ ರಚಿಸಿ ಎಲ್ಲಾ ಮಾರ್ಗಸೂಚಿಗಳನ್ನು ಕರಾರುವಕ್ಕಾಗಿ ಪಾಲಿಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರಗಳ ಮಹತ್ವವನ್ನು ತಿಳಿಹೇಳಲಾಯಿತು ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯ್ಕ ಪ್ರಕಟಿಸಿದ್ದಾರೆ.
Leave a Comment