ಗ್ರಾಮ ಪಂಚಾಯತ್ ಸಾಲ್ಕೋಡ, ಡಾ|| ದಿನಕರ ದೇಸಾಯಿ ಗ್ರಂಥಾಲಯ ಇವರ ಸಂಯುಕ್ತ ಆಶ್ರಯದಲ್ಲಿ “ಓದುವ ಬೆಳಕು” ಎನ್ನುವ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಎಸ್.ಕೆ.ಪಿ ಜ್ಯೂನಿಯರ್ ಕಾಲೇಜಿನ ಇತಿಹಾಸ ಉಪನ್ಯಾಸಕ ಶಿವಪ್ಪ ರವರು ಉದ್ಘಾಟಿಸಿದರು.
ನಂತರ ಮಾತನಾಡಿ, ಪುಸ್ತಕದ ಓದು ಆತ್ಮವಿಶ್ವಾಸವನ್ನು ಹೆಚ್ಚಿಸುವ ಜೊತೆ ಜ್ಞಾನ ವರ್ಧನೆಯಾಗುತ್ತದೆ. ಇಂದಿನ ಅನಿವಾರ್ಯತೆಯ ಮೊಬೈಲ್ ಬಳಕೆ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಕಡಿಮೆ ಮಾಡಿದೆ. ಆ ನಿಟ್ಟಿನಲ್ಲಿ ಓದುವ ಬೆಳಕು ಕಾರ್ಯಕ್ರಮ ಮಕ್ಕಳ ಓದುವ ಪ್ರಕ್ರಿಯೆಗೆ ಉತ್ತಮ ಅವಕಾಶವಾಗುವ ಉಪಯುಕ್ತ ಕಾರ್ಯಕ್ರಮವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಾಲ್ಕೋಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟರಮಣ ಪಟಗಾರ, ಕೋವಿಡ್ 19 ರ ಸಂಕಷ್ಟದಿಂದಾಗಿ ದೇಶದ ಮಕ್ಕಳು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮಾನಸಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು ಶಾಲೆಗಳು ಮುಚ್ಚಿರುವುದರಿಂದ ಕಲಿಕೆಯಲ್ಲಿ ಉಂಟಾಗಿರುವ ನಷ್ಟದ ಜೊತೆಗೆ ಶೈಕ್ಷಣಿಕ ಬೆಳವಣಿಗೆಗೂ ಹಿನ್ನಡೆಯಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕರಾಗುವಂತಹ ಸನ್ನಿವೇಶ ಎದುರಾಗುತ್ತಿದೆ.
ಮಕ್ಕಳಿಗೆ ಆಗುತ್ತಿರುವ ಮತ್ತಷ್ಟು ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯು ಗ್ರಂಥಾಲಯಗಳನ್ನು ಗ್ರಾಮೀಣ ಪ್ರದೇಶದ ಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವ ಮೂಲಕ ಹಾಗೂ ಗ್ರಂಥಾಲಯಗಳು ಮಕ್ಕಳ ಕಲಿಕೆಗೆ ಆಶಾಕಿರಣ ವಾಗುವ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ದಾರಿದೀಪ ವಾಗಬೇಕಾಗಿದೆ ಎಂದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ ಎಸ್ ಶೆಟ್ಟಿ , ಶಾಲೆಯ ಶಿಕ್ಷಕಿ ಗಾಯತ್ರಿ ನಾಯ್ಕ, ಮೇಲ್ವಿಚಾರಕಿ ಜ್ಯೂತಿ ಶೆಟ್ಟಿ, ಮಹೇಶ ಭಂಡಾರಿ ಹಾಜರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಮಕ್ಕಳಿಗೆ ಉಚಿತವಾಗಿ ಪುಸ್ತಕವನ್ನು ವಿತರಿಸಿ ಅವರ ಸದಸ್ಯತ್ವ ನೋಂದಣಿಯನ್ನು ಉಚಿತವಾಗಿ ಮಾಡಲಾಯಿತು.
Leave a Comment