ಭಟ್ಕಳ: ಜಾಲಿ ಪಟ್ಟಣಪಂಚಯತ್ ವ್ಯಾಪ್ತಿಯಲ್ಲಿ ಯುಜಿಡಿ ಒಳಚರಂಡಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇದು ಮುಂದಾಲೋಚನೆ ಇಲ್ಲದ ಕಾಮಗಾರಿಯಾಗಿದೆ, ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಮುಂದಿನ 50-60 ವರ್ಷಗಳನ್ನು ಮುಂದಿಟ್ಟುಕೊಂಡು ದೀರ್ಘಾವಧಿಯ ಯೋಜನೆ ರೂಪಿಸದೆ ಸರ್ಕಾರ ತಾತ್ಕಾಲಿಕವಾಗಿ ಕಾಮಗಾರಿ ಕೈಗೊಂಡಿದ್ದು ಇದರಿಂದಾಗಿ ಭವಿಷ್ಯದಲ್ಲಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಆದ್ದರಿಂದ ಯುಜಿಡಿ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಿ ಹೊಸ ಯೋಜನೆಯೊಂದಿಗೆ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾರಗದ್ದೆ ಪ್ರದೇಶದ ನಾಗರೀಕರು ಜಲಮಂಡಳಿ ಇಂಜಿನೀಯರ್ ಶಶಿಧರ್ ಹೆಗಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಮಗಾರಿ ನಡೆಯುವ ಸ್ಥಳದಲ್ಲಿ ಜಮಾಯಿಸಿದ ನೂರಾರು ಮಂದಿ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯನ್ನು ಕೂಡಲೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಸಮಜಾಯಿಸಿ ನೀಡಿದ ಜಲಮಂಡಳಿ ಇಂಜಿನೀಯರ್ ಶಶಿಧರ್ ಹೆಗಡೆ, ಯೋಜನೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಿಸಲು ಸಾಧ್ಯವಿಲ್ಲ. ನಿಮಗೆ ಕಾಮಗಾರಿ ಸ್ಥಗಿತಗೊಳಿಸುವುದಿದ್ದರೆ ಲಿಖಿತವಾಗಿ ಬರೆದುಕೊಡಿ ಎಂದು ತಿಳಿಸಿದ್ದು ಸಾರ್ವಜನಿಕರು ಈ ಕುರಿತಂತೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾಲಿ ಪ.ಪಂ ಕಾರಗದ್ದೆ ವಾರ್ಡಿನ ಸದಸ್ಯ ಬಿಲಾಲ್ ಆಹ್ಮದ್ ಖಮರಿ, ನಾವು ಯೋಜನೆಗೆ ವಿರೋಧಿಸುತ್ತಿಲ್ಲ. ಆದರೆ ಈಗ ನಡೆಸುತ್ತಿರುವ ಕಾಮಗಾರಿಯಿಂದಾಗಿ ಮುಂದಿನ ದಿನಗಳಲ್ಲಿ ಜನರು ಭಾರಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಚೇಂಬರ್ ನಿರ್ಮಾಣ ಅವೈಜ್ಞಾನಿಕವಾಗಿದೆ. ಚಿಕ್ಕ ಚಿಕ್ಕ ಪೈಪುಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೆ ಕರಾವಳಿಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಮಳೆ ನೀರು ಚರಂಡಿಗೆ ನುಗ್ಗಿ ರಸ್ತೆಗಳು ಹದಗೆಡುತ್ತದೆ. ಅಲ್ಲದೆ ಚರಂಡಿ ನೀರು ಕುಡಿಯುವ ನೀರಿನ ಬಾವಿಯೊಳಗೆ ಪ್ರವೇಶಿಸಿ ನೀರು ಕಲೂಷಿತಗೊಳಿಸುತ್ತದೆ. ಭಟ್ಕಳ ಪುರಸಭಾ ವ್ಯಾಪ್ತಿಯ ಗೌಸಿಯಾ ಮೊಹಲ್ಲಾದ ಜನರು ಅನುಭವಿಸುತ್ತಿರುವ ತೊಂದರೆಗಳು ಜನರ ಕಣ್ಣಮುಂದಿದ್ದು ಅದಕ್ಕಾಗಿ ಈ ಕಾಮಗಾರಿಯನ್ನು ವಿರೋಧಿಸುತ್ತಿದ್ದಾರೆ ಎಂದರು.
ಸಮಾಜ ಸೇವಕ ಹಾಗೂ ವೃತ್ತಿಯಲ್ಲಿ ಇಂಜಿನೀಯರ್ ಆಗಿರುವ ಮಿಸ್ಬಾವುಲ್ ಹಕ್ ಮಾತನಾಡಿ, ಯಾವುದೇಮುಂದಾಲೋಚನೆಯಿಲ್ಲದೆ ನಡೆಸುತ್ತಿರುವ ಈ ಕಾಮಗಾರಿಗೆ ಸ್ಥಳೀಯರ ಸಂಪೂರ್ಣ ವಿರೋಧವಿದೆ. ಹಾಗಾಗಿ ಇದನ್ನು ಮರು ಪರಿಷ್ಕರಿಸಿ ಹೊಸದಾಗಿ ಯೋಜನೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Leave a Comment