ಹೊನ್ನಾವರ: ನಾವು ಸಮಾಜಕ್ಕೆ ಕೊಡುಗೆ ನೀಡಿದಾಗಲೇ ಸಮಾಜದಿಂದ ನಾವು ನಿರೀಕ್ಷಿಸಬೇಕು. ಯುವ ಸಮುದಾಯ ಸದೃಡವಾದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ನಮಸ್ಕಾರ ಸಂಸ್ಥೆಯ ಕಾರ್ಯದರ್ಶಿ ರಮೇಶ ನಾಯ್ಕ ಹೇಳಿದರು.
ಅವರು ತಾಲೂಕಿನ ಅರೇಅಂಗಡಿ ಸಿರಿ ಬಿ.ಎಸ್.ಡಬ್ಲ್ಯೂ ಕಾಲೇಜಿನಲ್ಲಿ ನಡೆಯುತ್ತಿರುವ ಗ್ರಾಮೀಣ ತರಬೇತಿ ಶಿಬಿರದಲ್ಲಿ ವಸುಂದರಾ ಗ್ರಾಮೀಣ ಸಾಮಾಜಿಕ ಅಭಿವೃದ್ದಿ ಸಂಸ್ಥೆ ಆಯೋಜಿಸಿದ ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಅಭಿವೃದ್ದಿಗೆ ಸಮಾಜ ಕಾರ್ಯಕರ್ತನ ನಡಿಗೆ ಎನ್ನುವ ಶಿರ್ಷಿಕೆಯಡಿ ನಡೆಯುತ್ತಿರುವ ಈ ಶಿಬಿರದಲ್ಲಿ ವಸುಂಧರಾ ಸಂಸ್ಥೆ ಕೈಜೋಡಿಸಿರುವುದು ಹೆಮ್ಮೆ ಎನಿಸುತ್ತಿದೆ. ಇಂದಿನ ಯುವ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನ ಮಾಡಿದ್ದೆ ಆದರೆ ಮುಂದಿನ ಸಮಾಜ ಉತ್ತಮವಾಗಿರಲಿದೆ. ಇದನ್ನು ಮನಗಂಡು ಸಂಸ್ಥೆ ಯುವ ಸಮುದಾಯವನ್ನು ಜಾಗೃತಿ ಮೂಡಿಸಲು ಭವಿಷ್ಯದಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸುತ್ತಿದೆ. ವರ್ಷವಿಡೀ ಕಾಡಿದ ಕೊರೋನಾದಿಂದ ಶೈಕ್ಷಣಿಕವಾಗಿ ಹಲವು ಸಮಸ್ಯೆ ಎದುರಿಸಿದರು, ಹಲವು ಪಾಠವನ್ನು ಕಲಿತಿದ್ದೇವೆ. ಪದವಿ ಮುಗಿದ ಬಳಿಕವೂ ಗ್ರಾಮಗಳ ಅಭಿವೃದ್ದಿಗೆ ಚಿಂತನೆಯನ್ನು ಮುಂದುವರೆಸಿ ಅದನ್ನು ಜಾರಿಗೊಳಿಸಿ ಸಮಾಜದ ಬದಲಾವಣೆಗೆ ಪ್ರಯತ್ನಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನಿಡಿದರು.
ವಸುಂದರಾ ಸಂಸ್ಥೆಯ ಅಧ್ಯಕ್ಷ ವಿನಾಯಕ ಭಟ್ ಮಾತನಾಡಿ ನಮ್ಮ ಸಂಸ್ಥೆ ಪ್ರಾಥಮಿಕ ಹೆಜ್ಜೆ ಇಡುತ್ತಿದ್ದು, ಮುಂದಿನ ದಿನದಲ್ಲಿ ಆರೋಗ್ಯ, ಶೈಕ್ಷಣಿಕ, ಸಾಮಾಜಿಕವಾಗಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ಕೊರೋನಾದಿಂದ ಹೊರಬರುತ್ತಿದ್ದು ಆ ಸಂದರ್ಭದಲ್ಲಿ ಸಮಾಜ ಅನುಭವಿಸಿದ ವಿಷಯವನ್ನೆ ಇಂದು ಸ್ಪರ್ಧೆಯಾಗಿ ಆಯೊಜಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯವೈಖರಿಯನ್ನು ವಿವರಿಸಿದರು.
ಕೊರೋನಾ ಸಮಯದಲ್ಲಿ ನಾನು ಮತ್ತು ಸಮಾಜ ಎನ್ನುವ ಭಾಷಣ ಸ್ಪರ್ಧೆಯಲ್ಲಿ 16 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಅರುಣ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕ ಪರಮೇಶ್ವರ ಗೌಡ ಪತ್ರಕರ್ತ ವಿಶ್ವನಾಥ ಸಾಲ್ಕೋಡ್ಪೂರ್ವ ವಿದ್ಯಾರ್ಥಿನಿ ಮೈತ್ರಿ ನಾಯ್ಕ ಉಪಸ್ಥಿತರಿದ್ದರು.
Leave a Comment