ಭಟ್ಕಳ: ಒಂದು ಸಂಘದ ರಚನೆ ದೊಡ್ಡದಲ್ಲ ಆದರೆ ಅದನ್ನು ಸಂಘದಲ್ಲಿರುವ ಎಲ್ಲರು ಉಳಿಸಿ ಬೆಳೆಸಿಕೊಂಡು ಸಮಾಜಕ್ಕೆ ಸೇವೆ ಪರಿಶ್ರಮ ನೀಡುವುದು ಅತೀ ಮುಖ್ಯ ಎಂದು ನಾಮಧಾರಿ ಸಮಾಜ ಗುರುಮಠ ಆಸರಕೇರಿ ಅಧ್ಯಕ್ಷ ಕೃಷ್ಣ ಎನ್. ನಾಯ್ಕ ಹೇಳಿದರು.
ಅವರು ಇಲ್ಲಿನ ಮುಂಡಳ್ಳಿ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಮುಂಡಳ್ಳಿ ನಾಮಧಾರಿ ಅಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಈ ಹಿಂದೆ ಸಾಕಷ್ಟು ಸಂಘಗಳು ಹುಟ್ಟಿಕೊಂಡಿದ್ದವು. ಆದರೆ ಯಾವೆಲ್ಲ ಸಂಘವೂ ಉತ್ತಮ ಧ್ಯೇಯೋದ್ದೇಶದೊಂದಿಗೆ ರಚನೆ ಆಗಿದ್ದವೋ ಅವೆಲ್ಲವೂ ಇಂದು ಬೆಳಕಿನಲ್ಲಿದೆ. ಉಳಿದೆಲ್ಲವೂ ಕಣ್ಮರೆಯಾಗಿದೆ. ವರ್ಷದಿಂದ ವರ್ಷಕ್ಕೆ ಸಂಘದ ಜೊತೆಗೆ ಸಮಾಜದ ಉದ್ದಾರವಾಗಬೇಕು. ಇಲ್ಲಿ ವ್ಯಕ್ತಿ ಶಾಶ್ವತವಲ್ಲ ಬದಲಿಗೆ ಸಮಾಜ ಅದರ ಜನರು ಶಾಶ್ವತ. ಈ ನಿಟ್ಟಿನಲ್ಲಿ ಸಂಘ ಭದ್ರವಾಡುವ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಹಿರಿಯರಿಂದಲೇ ಸಮಾಜ ಕಟ್ಟು ಮುಂದೆ ನಡೆದಿದೆ. ಆದರೆ ಕೆಲವೊಂದು ಬಾರಿ ಯುವಕರಿಗೂ ಸಂಘದ ಜವಾಬ್ದಾರಿ ನೀಡಿ ಅವರಿಗೂ ಅವಕಾಶ ನೀಡಬೇಕು ಎಂದ ಅವರು ಚುನಾವಣೆಯಲ್ಲಿ ಮಾತ್ರ ರಾಜಕೀಯ ಹೊರತು ಸಮಾಜದಲ್ಲಿ ರಾಜಕೀಯದ ವಿಚಾರ ಬರಬಾರದು ಎಂದರು.
ಸದ್ಯ ಪಂಚಮಸಾಲಿ ಲಿಂಗಾಯತರು ಹಿಂದುಳಿದ ವರ್ಗ 2ಅ ಗೆ ಸೇರ್ಪಡೆ ಮಾಡಬೇಕೆಂಬ ಹೋರಾಟ ನಡೆಯುತ್ತಿದೆ. ನಮ್ಮದು 65 ಲಕ್ಷ ಜನಸಂಖ್ಯೆಯುಳ್ಳ 300 ಜಾತಿ ಹೊಂದಿರುವ ಹಿಂದುಳಿದ ವರ್ಗವಾಗಿದೆ. ಆದರೆ ಈಗ ಸೇರ್ಪಡೆಯ ಹೋರಾಟದಲ್ಲಿರುವ ಸಮಾಜವೂ 80 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಹಿಂದುಳಿದ ವರ್ಗದ ಸಮಾಜದವರು ಒಗ್ಗಟ್ಟಿನಿಂದ ಹೋರಾಟಕ್ಕೆ ಇಳಿದು ಅವರ ಸೇರ್ಪಡೆಗೆ ವಿರೋಧಿಸಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ನಾಮಧಾರಿ ಅಭಿವೃದ್ಧಿ ಸಂಘ ನೀರಗದ್ದೆ, ಸತ್ಯನಾರಾಯಣ ನಗರ ಅಧ್ಯಕ್ಷ ರಾಜೇಶ ನಾಯ್ಕ ‘ ಈಗಾಗಲೇ ನಾಮಧಾರಿ ಸಮಾಜದಲ್ಲಿ ಕೂಟ ರಚನೆ ಮಾಡಿ ಸಾಕಷ್ಟು ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬಂದಿದ್ದು, ಇನ್ನು ಮುಂದಿನ ದಿನದಲ್ಲಿ ಸಮಾಜದ ಜನರ ಅಭಿವೃದ್ಧಿಗಾಗಿ, ಯುವ ಪೀಳಿಗೆಯನ್ನು ಮುಂದೆ ತರಬೇಕಾದ ಜವಾಬ್ದಾರಿ ಎಲ್ಲರಿಗೂ ಇದೆ. ಸಮಾಜದಲ್ಲಿ ಬುಧವಂತರ ಎಂಬಂತವರನ್ನು ಆಯ್ಕೆ ಮಾಡಲಾಗಿದ್ದು, ಅವರು ಹಿರಿಯರ ಸ್ಥಾನದಲ್ಲಿ ನಿಂತು ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಹೊರಬೇಕಿದೆ. ಹಾಗೂ ರಾಜಕೀಯ ಬಿಟ್ಟು ಧರ್ಮದ ಸೇವೆ ಮಾಡಬೇಕು ಎಂದರು.
ಈ ಸಂಧರ್ಭದಲ್ಲಿ ಮುಂಡಳ್ಳಿ ನೀರಗದ್ದೆ, ಸತ್ಯನಾರಾಯಣ ನಗರ ಭಾಗದಲ್ಲಿನ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರ ಸಾಧನೆಯನ್ನು ಗುರುತಿಸಲಾಯಿತು.
ವೇದಿಕೆಯಲ್ಲಿ ನಾಮಧಾರಿ ಸಮಾಜದ ಗೌರವಾಧ್ಯಕ್ಷ ಎಮ್.ಆರ್.ನಾಯ್ಕ, ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಮುಂಡಳ್ಳಿ ಶ್ರೀ ಸತ್ಯನಾರಾಯಣ ದೇವಸ್ಥಾನ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ನಾಮಧಾರಿ ಸಮಾಜ ಮುಂಡಳ್ಳಿ ಭಾಗದ ಸದಸ್ಯ ಸುರೇಶ ಎಂ. ನಾಯ್ಕ, ಸತ್ಯನಾರಾಯಣ ಕೂಟದ ಬುಧವಂತರು ನಾರಾಯಣ ಕೆ. ನಾಯ್ಕ ಉಪಸ್ಥಿತರಿದ್ದರು.
Leave a Comment