ಹೊನ್ನಾವರ: ಆಶ್ರಯ ಮನೆ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಕೂಡಲೇ ಹಣ ಬಿಡುಗಡೆಮಾಡುವಂತೆ ಆಗ್ರಹಿಸಿ ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಇವರ ನೇತೃತ್ವದಲ್ಲಿ ಹೊನ್ನಾವರದ ಆಶ್ರಯ ಯೋಜನಾ ಫಲಾನುಭವಿಗಳು ಸೋಮವಾರ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಮಾತನಾಡಿ, `ಹೊನ್ನಾವರ ತಾಲೂಕಿನಾದ್ಯಂತ ಬಹುತೇಕ ಜನರು 2016-17 ಮತ್ತು 2017-18ನೇ ಸಾಲಿನಲ್ಲಿ ಸರ್ಕಾರದ ಆಶ್ರಯ ಯೋಜನೆಯ ಅಡಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಸರ್ಕಾರದ ನಿಯಮಾವಳಿಯಂತೆ ತಾಲೂಕು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಪಡೆಯಲಾಗಿದೆ. ಫಲಾನುಭವಿಗಳ ಪಹಣಿ ಪತ್ರಿಕೆಯಲ್ಲಿ ಆಶ್ರಯ ಮನೆಯ ಬೋಜಾ ಸಹ ದಾಖಲಾಗಿದೆ. ಆದರೆ ಸರ್ಕಾರ ಕಳೆದ 3 ವರ್ಷಗಳಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಮಾಡದೇ ಇರುವುದರಿಂದ ಎಲ್ಲಾ ಫಲಾನುಭವಿಗಳು ಮನೆ ನಿರ್ಮಾಣ ಕಾರ್ಯಕ್ಕೆ ಹಣ ಇಲ್ಲದೆ ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕರೊನಾ ಮಹಾಮಾರಿಯಿಂದ ಕೆಲಸ ಸಿಗದೆ ಜನತೆ ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಫಲಾನುಭವಿಗಳ ಖಾತೆಗೆ ಹಣ ಬಿಡುಗಡೆಗೊಳಿಸಬೇಕು ಎಂದರು.
ಶಂಕರ ಗೌಡ ಗುಣವಂತೆ ಮಾತನಾಡಿ ಜನಪರವಾದ ಸರ್ಕಾರ ಕಂಬಳಿ ಹೊದ್ದು ಮಲಗಿದೆ ಎಂಬಂತೆ ಕಾಣುತ್ತಿದೆ. 2017-18ನೇ ಸಾಲಿನಲ್ಲಿ ಸರ್ಕಾರದಿಂದ ಜನರಿಗೆ ಆಶ್ರಯ ಮನೆ ಮಂಜೂರಾದರೂ ಆಯಾ ಫಲಾನುಭವಿಗಳಿಗೆ ಇನ್ನೂ ತನಕ ಒಂದು ರೂಪಾಯಿ ಬಿಡಿಗಾಸು ಹಣ ಕೂಡ ಬಿಡುಗಡೆಯಾಗಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ. ಸರ್ಕಾರ ಜನರ ಪರವಾಗಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸಂಬಂಧಿಸಿದ ಜನಪ್ರತಿನಿಧಿಗಳೂ ಸಹ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮನೆ ನಿರ್ಮಾಣಕ್ಕಾಗಿ ಬಡವರ 1 ಗುಂಟೆ ಜಾಗವನ್ನು ಸರ್ಕಾರ ಬಕ್ಷಿಸಿಕೊಂಡು ವರ್ಷಗಳೇ ಉರುಳಿ ಹೋಗಿದೆ. ಆದರೆ ಹಣ ಮಾತ್ರ ಇನ್ನೂ ತನಕ ಬಿಡುಗಡೆಯಾಗಿಲ್ಲ. ಹಣ ಬಿಡುಗಡೆಯಾಗದ ಫಲಾನುಭವಿಗಳ ಪಟ್ಟಿ ದೊಡ್ಡದಾಗುತ್ತಲೇ ಇದೆಯೇ ಹೊರತು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರ 1 ರೂ. ಹಣವನ್ನು ಖಾತೆಗೆ ಹಾಕಿ ಫಲಾನುಭವಿಗಳನ್ನು ಮರಳು ಮಾಡುತ್ತಿದೆ. ಪಂಚಾಯಿತಿಯಲ್ಲಿ ವಿಚಾರಿಸಿದರೆ ನಮ್ಮ ಕಡೆಯಿಂದ ಎಲ್ಲವೂ ಸರಿಯಾಗಿದೆ ಎಂಬ ಉತ್ತರ ಹೇಳುತ್ತಾರೆ. ಹಾಗಾದರೆ ಫಲಾನುಭವಿಗಳು ಯಾರನ್ನು ಕೇಳಬೇಕು ಎಂಬ ಗೊಂದಲದಲ್ಲಿ ವಸತಿ ಯೋಜನೆಯ ಫಲಾನುಭವಿಗಳು ದಿನ ಕಳೆಯುತ್ತಿದ್ದಾರೆ. ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳ ವಿವರ ಪಡೆದು ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಬೇಕು ಎಂದರು.
ಫಲಾನುಭವಿ ಶಾರದಾ ಗೌಡ ಮಾತನಾಡಿ ಈಗಾಗಲೆ ಮನೆ ಮಜೂರಿಯಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ವಿವಿಧ ಸಂಘಗಳಲ್ಲಿ ಸಾಲ-ಸೂಲ ಮಾಡಿ ಮೇಲ್ಛಾವಣಿ ಹಂತದ ವರೆಗೆ ಮನೆ ನಿರ್ಮಾಣ ಆಗಿದೆ. ಆದರೂ ಕೂಡ ಇದುವರೆಗೆ ಸರ್ಕಾರದಿಂದ ವಸತಿ ಯೋಜನೆಯ ಹಣ ಬಿಡುಗಡೆಯಾಗಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಕುಟುಂಬ ಕಣ್ಣೀರಲ್ಲಿ ಕೈತೊಳೆಯುವ ಹಂತ ತಲುಪಿದೆ. ಸರ್ಕಾರ ನಮ್ಮಂತ ಬಡ ಜನರ ಕೂಗನ್ನು ಕೇಳಿ ಶೀಘ್ರವಾಗಿ ಹಣ ಬಿಡುಗಡೆ ಮಾಡಲಿ ಎಂದು ಅಳಲು ತೋಡಿಕೊಂಡರು.
ವಾಮನ ನಾಯ್ಕ ಮಂಕಿ, ಎಂ.ಜಿ.ನಾಯ್ಕ ಉಪ್ಪೋಣಿ, ಕರ್ನಾಟಕ ಕ್ರಾಂತಿರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಐ.ವಿ.ನಾಯ್ಕ, ನಾರಾಯಣ ಮುಕ್ರಿ, ಪಾಂಡುರಂಗ ನಾಯ್ಕ ವೈದ್ಯ, ಲಂಬೋದರ ನಾಯ್ಕ, ನಾಗವೇಣಿ ನಾಯ್ಕ, ಮಂಜುನಾಥ ಹಳ್ಳೇರ, ವಿನಾಯಕ ನಾಯ್ಕ, ಕೇಶವ ಮೊಗೇರ ಇತರರು ಪಾಲ್ಗೊಂಡಿದ್ದರು.
ಮನವಿಯನ್ನು ಹೊನ್ನಾವರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ತಹಸೀಲ್ದಾರ್ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.
Leave a Comment