ಹೊನ್ನಾವರ: ಸಕಲ ಜೀವಿಗಳ ಉಳಿವಿಗೆ ನೀರು ಬಹಳ ಅತ್ಯಮೂಲ್ಯವಾಗಿದ್ದು, ಹನಿ-ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ' ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿ.ಚೆನ್ನಕೇಶವ ರೆಡ್ಡಿ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ ಹೊನ್ನಾವರ ಹಾಗೂ ವಕೀಲರ ಸಂಘ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ
ವಿಶ್ವ ಜಲ ದಿನಾಚರಣೆ’ಯ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೀರು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ನೀರಿಲ್ಲದೇ ಯಾವ ಜೀವ ಸಂಕುಲಗಳೂ ಬದುಕುಳಿಯಲು ಸಾಧ್ಯವಿಲ್ಲ. ಮನುಷ್ಯರು, ಗಿಡ-ಮರಗಳು, ಕ್ರಿಮಿ ಕೀಟಾದಿಗಳಿಗೂ ನೀರು ಸಂಜೀವಿನಿಯಾಗಿದೆ ಎಂದರು.

ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಪ್ರತಿಯೊಬ್ಬರೂ ನೀರಿನ ಮಿತಬಳಕೆ ಮಾಡುವ ಸಂಕಲ್ಪ ಮಾಡಬೇಕು. ರಾಜ್ಯ ಹಾಗೂ ರಾಷ್ಟ್ರದ ಬಹುತೇಕ ಕಡೆಗಳಲ್ಲಿ ಜಲಕ್ಷಾಮ ಎದುರಾಗುತ್ತಿವೆ. ನಮ್ಮ ರಾಜ್ಯದಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸುತ್ತಿದ್ದಾರೆ. ಹೊರದೇಶಗಳಲ್ಲಿ ಕುಡಿಯಲು ನೀರಿಲ್ಲದೆ ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸುತ್ತಿರುವುದು ವಿಷಾಧಕರ. ಜೀವ ಜಲ ಹರಿದು ಹೋಗದ ಹಾಗೆ ಚೆಕ್ಡ್ಯಾಮ್ಗಳನ್ನು ನಿರ್ಮಿಸಿ ಭೂಮಿಯಲ್ಲಿ ನೀರು ಇಂಗುವಂತೆ ಮಾಡಬೇಕು ಮತ್ತು ಅಂತರ್ಜಲ ಪರಿಪೂರ್ಣ ಆಗಬೇಕಿದೆ. ಹನಿ ನೀರಾವರಿಗೂ ಇದೀಗ ನೀರಿನ ಬರ ಎದುರಾಗಿದ್ದು, ಪ್ರತಿಯೊಬ್ಬರೂ ನೀರಿನ ಮಹತ್ವ ಅರಿಯಬೇಕಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸನ್ಮತಿ ಎಸ್.ಆರ್ ಮಾತನಾಡಿ ಇಡೀ ಜಗತ್ತಿನಾದ್ಯಂತ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ಅರಿಯಬೇಕಾಗಿದೆ. ನೀರನ್ನು ಮಾನವ ಪ್ರಜ್ಞಾಪೂರ್ವಕವಾಗಿ ಕಲುಷಿತಗೊಳಿಸುತ್ತಿರುವುದಲ್ಲದೆ ಅದರ ಬಳಕೆ ಹಾಗೂ ಸಂರಕ್ಷಣೆಗೆ ಮಿತಿ ಇಲ್ಲದಂತಾಗಿದೆ. ಒಂದು ತೊಟ್ಟು ನೀರನ್ನೂ ಪೋಲು ಮಾಡದೆ ಮನೆ ಬಳಕೆಯಲ್ಲಿ ಉಪಯೋಗಿಸುವ ಹೆಚ್ಚುವರಿ ನೀರನ್ನು ಗಿಡ ಮರಗಳಿಗೆ ಹಾಕುವುದರಿಂದ ಸಸ್ಯ ಜೀವವೂ ಬದುಕುಳಿಯುತ್ತವೆ. ಪ್ರತಿಯೊಬ್ಬರೂ ಮನೆಯ ನಲ್ಲಿ ಮುಂತಾದ ಕಡೆಗಳಲ್ಲಿ ನೀರಿನ್ನು ಸಂಗ್ರಹಿಸಿ ಅಗತ್ಯವಿರುವಲ್ಲಿ ಮಿತವಾಗಿ ನೀರನ್ನು ಬಳಕೆ ಮಾಡಬೇಕು ಎಂದು ಕರೆನೀಡಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ.ನಾಯ್ಕ ಮಾತನಾಡಿ ವಿಶ್ವದಲ್ಲಿ ನೀರಿನ ಸಮಸ್ಯೆ ಎದುರಾಗಲು ಮುಖ್ಯ ಕಾರಣ ಮನುಷ್ಯನ ಅತಿಯಾದ ದುರಾಸೆ. ತೀವ್ರಗತಿಯ ಅರಣ್ಯ ನಾಶ, ಮಿತಿಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ ನೀರಿನ ಅಭಾವಕ್ಕೆ ಮೂಲ ಕಾರಣವಾಗಿದೆ. ಬೇಕಾಬಿಟ್ಟಿ ಮರಗಳನ್ನು ಕಡಿದು ಹಾಳು ಮಾಡದೆ ಕಾಡನ್ನು ಬೆಳೆಸುವುದರಿಂದ ಮಳೆ ನೀರು ಹೆಚ್ಚಾಗಿ ನೀರಿನ ಮಟ್ಟ ಜಾಸ್ತಿಯಾಗುತ್ತದೆ. ಬುದ್ಧಿಜೀವಿಗಳಾದ ನಾವೆಲ್ಲರೂ ನೀರನ್ನು ಪೋಲು ಮಾಡದೆ ಜೀವ ಜಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನೀರಿನ ಮಿತಬಳಕೆ ಮಾಡೋಣ ಎಂದು ಕರೆ ನೀಡಿದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಿ ಮಾತನಾಡಿದರು. ಹೆಚ್ಚುವರಿ ಸಹಾಯಕ ಸರ್ಕಾರಿ ಅಭಿಯೋಜಕ ವೆಂಕಟೇಶ ಕೆ ಗೌಡ, ಸರ್ಕಾರಿ ವಕೀಲ ಪ್ರಮೋದ ಭಟ್ಟ, ಕಾರ್ಯದರ್ಶಿ ಸೂರಜ ನಾಯ್ಕ ಹಾಗೂ ವಕೀಲರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Leave a Comment