ಹೊನ್ನಾವರ: ಬ್ಯಾಟರಿ ಶಾರ್ಟ್ ಸಕ್ರ್ಯೂಟ್ನಿಂದಾಗಿ ಸ್ಥಳದಲ್ಲಿ ನಿಂತಿದ್ದ ಕೆಎಸ್ಆರ್ಟಿಸಿ ಬಸ್ನ ಎಂಜಿನ್ಗೆ ಬೆಂಕಿ ಹೊತ್ತಿಕೊಂಡ ಘಟನೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಹೊನ್ನಾವರ ಗೇರುಸೊಪ್ಪ ಮಾರ್ಗದ ಬಸ್ ಬೆಳಿಗ್ಗೆ ಹೊನ್ನಾವರದಿಂದ ಕುಮಟಾ ಸಂಚರಿಸಿ ಪುನಃ ಹೊನ್ನಾವರದಿಂದ ಗೇರುಸೊಪ್ಪಾ ಪ್ರಯಾಣ ಮುಗಿಸಿ ಹೊನ್ನಾವರ ಪಟ್ಟಣದ ತಾತ್ಕಾಲಿಕ ಬಸ್ ನಿಲ್ದಾಣದ ಬಳಿ ನಿಂತಿತ್ತು. ಈ ವೇಳೆ ಚಾಲಕನ ಸಮೀಪವಿರುವ ಎಂಜಿನ್ನ ಒಳಭಾಗದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಬೆಂಕಿ ದೊಡ್ಡದಾಗ ತೊಡಗಿದಾಗ ಗಾಬರಿಗೊಂಡ ಬಸ್ ಚಾಲಕ ಹಾಗೂ ನಿರ್ವಾಹಕರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಲ್ಲಿಯ ಸಮೀಪದ ಟೆಂಪೋ ಚಾಲಕರು, ಮಾಲಕರು, ಸ್ಥಳೀಯರು ಹಾಗೂ ಪೊಲೀಸರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸಮೀಪದಲ್ಲಿರು ಬಿಂದಿಗೆಯಲ್ಲಿ ನೀರು ತಂದು ಬೆಂಕಿ ಕಾಣಿಸಿಕೊಳ್ಳುತ್ತಿರುವ ಭಾಗಕ್ಕೆ ನೀರು ಸಿಂಪಡಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚೆತ್ತುಕೊಂಡಿದ್ದಾರೆ. ಇನ್ನು ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರು ಯಾರೂ ಇಲ್ಲದ ವೇಳೆ ಈ ಅವಘಡ ಸಂಭವಿಸಿರುವುದು ಮಹಾದುರಂತವೇ ತಪ್ಪಿದಂತಾಗಿದೆ. ಬಸ್ ಸಂಚರಿಸುತ್ತಿರುವ ವೇಳೆಯಲ್ಲಿ ಇಂತಹ ಅಚಾನಕ ಘಟನೆಗಳು ನಡೆದರೆ ಪ್ರಯಾಣಿಕರಿಗೂ ಭಾರೀ ತೊಂದರೆಯಾಗುತ್ತಿತ್ತು.
Leave a Comment