ಹಳಿಯಾಳ:- ಕಾರವಾರ ಉಪವಿಭಾಗಾಧಿಕಾರಿಗಳಾದ(ಎಸಿ) ವಿದ್ಯಾಶ್ರೀ ಚಂದರಗಿ ಅವರು ಹಳಿಯಾಳ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊವಿಡ್-೧೯ ಮುಂಜಾಗ್ರತಾ ಕ್ರಮಗಳು ಮತ್ತು ಸದ್ಯದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದರು.
ಕೊರೊನಾ ಎರಡನೇ ಅಲೆಗೆ ಹಳಿಯಾಳವು ತತ್ತರಿಸಿದ್ದು ಪ್ರತಿದಿನ ಒಂದು ಸಾವು ದಾಖಲಿಸುತ್ತಿರುವ ಹಳಿಯಾಳದಲ್ಲಿ ಸದ್ಯ ೩೦೦ಕ್ಕೂ ಅಧಿಕ ಸಕ್ರಿಯ ಸೊಂಕಿತರು ಇರುವ ಹಿನ್ನೆಲೆಯಲ್ಲಿ ಎಸಿ ಅವರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ಮಹತ್ವದ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡುವ ಮುನ್ನ ತಾಲೂಕಾ ಆಡಳಿತಾಧಿಕಾರಿಗಳೊಂದಿಗೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸಭೆ ನಡೆಸಿದ ಎಸಿ ಅವರು ತಾಲೂಕಿನಲ್ಲಿ ಕೊರೊನಾ ಹರಡುವಿಕೆಯ ಕುರಿತು ಹಾಗೂ ಸದ್ಯದ ಸ್ಥಿತಿಗತಿ ಕುರಿತು ತಾಲೂಕುಗಳಲ್ಲಿ ಕೋವಿಡ್ ಪರಿಸ್ಥಿತಿ, ಹಾಸಿಗೆಗಳ ಲಭ್ಯತೆ, ಆಮ್ಲಜನಕ ಸರಬರಾಜುಗಳ ಬಗ್ಗೆ ಮಾಹಿತಿ ಕಲೆ ಹಾಕಿದರು ಅಲ್ಲದೇ ಬಳಿಕ ತಹಶೀಲ್ದಾರರ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳು, ಪುರಸಭೆ ಅಧಿಕಾರಿಗಳೊಂದಿಗೆ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಅಲ್ಲದೇ ಅಧಿಕಾರಿಗಳು ಎಲ್ಲರೂ ಪರಸ್ಪರರ ಸಹಕಾರದೊಂದಿಗೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ತಾಲೂಕಾ ಆರೋಗ್ಯಾಧಿಕಾರಿ ಡಾ.ಶಿನ್ನೂರ, ಡಾ.ರಮೇಶ ಕದಂ ಮೊದಲಾದವರು ಇದ್ದರು.
Leave a Comment