ರಾಜ್ಯದ ಮೀನುಗಾರ ಸಮುದಾಯಗಳ ಶೈಕ್ಷಣಿಕ,ಆರ್ಥಿಕ,ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಸಮಗ್ರ ಹಿತದೃಷ್ಟಿಯಿಂದ ರಾಜ್ಯ ಮಟ್ಟದಲ್ಲಿ ಮೀನುಗಾರರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಷ್ಟ್ರೀಯ ಮೀನುಗಾರ ಸಂಘಟನೆಯ ಕಾರ್ಯದರ್ಶಿ ಚಂದ್ರಕಾಂತ ಕೋಚಡೇಕರ್ ಆಗ್ರಹಿಸಿದರು.
ರಾಷ್ಟ್ರೀಯ ಮೀನುಗಾರರ ಸಂಘಟನೆಯ ಕರ್ನಾಟಕ ಘಟಕದ ಕಾರ್ಯಕಾರಿ ಸಮಿತಿ ಸಭೆಯುಲ್ಲಿ ಮೀನುಗಾರ ಪ್ರಾಧಿಕಾರ ರಚನೆಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಎಂದು ಹೊನ್ನಾವರದಲ್ಲಿ ಮಾಧ್ಯಮಗೊಷ್ಟಿಯಲ್ಲಿ ಮಾಹಿತಿ ನೀಡುತ್ತಾ ಸರ್ಕಾರ ಮೀನುಗಾರರ ಬಗ್ಗೆ ತ್ವರಿತ ಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಮೀನುಗಾರಿಕೆಯನ್ನೇ ಮೂಲ ಕಸುಬನ್ನಾಗಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಹಿಂದು ಗಾಬೀತರು,ಕೊಂಕಣ ಖಾರ್ವಿಗಳು,
ಖಾರ್ವಿಗಳು,ಹರಿಕಂತರು,ಮೊಗೇರರು,ಮೊಗವೀರರು, ಅಂಬಿಗರು,ದಾಲಜೀಗಳು, ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಸಮುದಾಯಗಳಿವೆ.ಈ ಎಲ್ಲ ಸಮುದಾಯಗಳ/ಜನಾಂಗದ ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ರಾಜ್ಯದಲ್ಲಿ ತೀವ್ರ ನಿರಾಶಾದಾಯಕ ಪ್ರಮಾಣದಲ್ಲಿದ್ದು ಅತ್ಯಂತ ಹಿಂದುಳಿದಿದೆ. ಸಾಂಸ್ಕ್ರತಿಕವಾಗಿ ಹಲವು ವೈವಿಧ್ಯತೆಗಳಿದ್ದರೂ ಆಚಾರ ವಿಚಾರಗಳಲ್ಲಿ ಸಾಮ್ಯತೆಗಳಿರುವ ಅಪರೂಪದ ಜನಾಂಗವಾಗಿದೆ.
ಅತ್ಯಂತ ಶ್ರಮಜೀವಿಗಳಾಗಿದ್ದು, ಇತ್ತಿಚಿನ ವರ್ಷಗಳಲ್ಲಿ ಈ ಸಮುದಾಯದವರ ಬದುಕು ಇಂದು ಅತ್ಯಂತ ದುಸ್ತರವಾಗುತ್ತಿದೆ. ಆಯಾ ಸಮುದಾಯಗಳ ಜನಸಂಖ್ಯೆಯನ್ನು ಆಧರಿಸಿ ಅನುದಾನಗಳ ಹಂಚಿಕೆಯು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು 500ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿ ರಾಜ್ಯದ ಮೀನುಗಾರರ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಅವರು ರಾಜ್ಯದ ಮುಖ್ಯಮಂತ್ರಿಯಲ್ಲಿ ಆಗ್ರಹಿಸಿದರು. ರಾಜ್ಯದಲ್ಲಿ ಸರಿಸುಮಾರು ಆರುಲಕ್ಷ ಮೀನುಗಾರರ ಕುಟುಂಬಗಳು ಮೀನುಗಾರಿಕೆಯನ್ನು ಅವಲಂಬಿಸಿ ಬದುಕುತ್ತಿದ್ದಾರೆ.
ಆದರೆ ಇತ್ತಿಚೆಗೆ ರಾಜ್ಯ ಸರ್ಕಾರ ಕೋವಿಡ್ ಪರಿಹಾರ ನೀಡಿಕೆಗಾಗಿ ಕೇವಲ 26414 ಫಲಾನುಭವಿಗಳನ್ನು ಮಾತ್ರ ಪರಿಗಣಿಸಲು ನಿರ್ಧರಿಸಿರುವದು ತೀರಾ ಅವೈಜ್ಞಾನಿಕವಾದುದಾಗಿದ್ದು ಅನ್ಯಾಯದ ಪರಮಾವಧಿ ಎನ್ನುವುದಾಗಿ ಸಂಘಟನೆಯ ಕಾರ್ಯಕಾರಿ ಸಮಿತಿ ಕಳವಳ ವ್ಯಕ್ತ ಪಡಿಸಿದೆ. ಪರಿಹಾರದ ವ್ಯಕ್ತಿಗತ ಮೊತ್ತವನ್ನು ತಲಾ 3000 ದಿಂದ ರೂ 5000 ಕ್ಕೆ ಹೆಚ್ಚಿಸಬೇಕು ಹಾಗೂ ಕನಿಷ್ಠ 2 ಲಕ್ಷ ಸಾಂಪ್ರದಾಯಿಕ ಮೀನುಗಾರರನ್ನು ಫಲಾನುಭವಿಗಳನ್ನಾಗಿ ಪರಿಗಣಿಸಿ ಸಂಕಷ್ಟದಲ್ಲಿರುವ ಮೀನುಗಾರರ ಕುಟುಂಬಗಳಿಗೆ ಕೋವಿಡ್ ಪರಿಹಾರ ವಿತರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಪಡಿಸುವ ನಿರ್ಣಯವನ್ನು ಸಹ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂಗೀಕರಿಸಲಾಗಿದೆ.
ರಾಜ್ಯ ಕಾರ್ಯಕಾರಿ ಸಮೀತಿ ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಡಾ. ಗೌತಮ ಚೌಧರಿ ವಹಿಸಿದ್ದರು.ಸಭೆಯಲ್ಲಿ ರಾಜ್ಯಾಧ್ಯಕ್ಷ ರಾಮ ಮೊಗೇರ,ಕಾರ್ಯಾಧ್ಯಕ್ಷ ಮಂಜುನಾಥ್ ಸುಣಗಾರ,ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ್,ಜಯಶ್ರೀ ಕೊಟ್ಯಾನ್,ರಾಜ್ಯ ಕಾರ್ಯದರ್ಶಿಗಳಾದ ಚಂದ್ರಕಾಂತ ಕೊಚರೇಕರ,ಅಖಿಲೇಶ ಕೊಟ್ಯಾನ, ಸಂಘಟನಾ ಕಾರ್ಯದರ್ಶಿ ಅಜೀತ ತಾಂಡೇಲ್,ಬಸವರಾಜ ಕರಡೆಪ್ಪರ್,ಮತ್ತು ಕಾರ್ಯಕಾರಿ ಸದಸ್ಯ ಗಣೇಶ್ ಬಾರಕೇರ್.ಮುಂತಾದವರು ಉಪಸ್ಥಿತರಿದ್ದರು.
Leave a Comment