ಹೊನ್ನಾವರ; ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕರಾಗಿದ್ದ ದಿ. ಮೋಹನ್ ಕೆ.ಶೆಟ್ಟಿ ಯವರ 69ನೇ ಜನ್ಮದಿನದ ಪ್ರಯುಕ್ತ ದಿ.ಮೋಹನ್ ಕೆ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ತಾಲೂಕಾ ಆಸ್ಪತ್ರೆಗೆ ಧನಸಹಾಯ ಹಾಗೂ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ತಾಲೂಕಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ 50000 ರೂಪಾಯಿಗಳ ಚೆಕ್ , ಅಗತ್ಯ ಉಪಕರಣ ನೀಡಿದರು ಹಾಗೂ ಆಸ್ಪತ್ರೆಯ ಒಳರೋಗಿಗಳು, ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರಿಗೆ,ಹಣ್ಣು-ಬ್ರೆಡ್-ಬಿಸ್ಕೆಟ್ ಒಳಗೊಂಡಿರುವ ಆಹಾರದ ಕಿಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ,” ದಿವಂಗತ ಮೋಹನ್ ಕೆ.ಶೆಟ್ಟಿಯವರ ಜನ್ಮದಿನದ ಪ್ರಯುಕ್ತ ಪ್ರತಿ ವರ್ಷ ತಾಲೂಕಾ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸುತ್ತಿದ್ದೇವು.ಅಂತಯೇ ಈ ವರ್ಷವು ಕೂಡಾ ಈ ಕಾರ್ಯಕ್ರಮ ಮುಂದುವರೆಸಿದ್ದು ಡಯಾಲಿಸಿಸ್ ಕೇಂದ್ರಕ್ಕೆ 50000 ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇವೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಹೊರ ಜಿಲ್ಲೆಗಳಿಗೆ ಹೋಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇತ್ತು. ಇದನ್ನು ಮನಗಂಡು ಹತ್ತಿರದಲ್ಲಿಯೇ ಚಿಕಿತ್ಸೆ ಪಡೆಯಬೇಕೆಂಬ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅವಧಿಯಲ್ಲಿ ಪ್ರತಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲಾಗಿತ್ತು. ಆದರೆ ಇಂದು ಕೆಲವು ಉಪಕರಣಗಳ ಕೊರತೆಯಿಂದ ಡಯಾಲಿಸಿಸ್ ಚಿಕಿತ್ಸೆಗೆ ವ್ಯತ್ಯಯವಾಗುತ್ತಿದ್ದು, ರೋಗಿಗಳಿಗೆ ಇನ್ನು ಮುಂದೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ದೇಣಿಗೆಯನ್ನು ನೀಡುತ್ತಿದ್ದೇವೆ. ನಮ್ಮ ವೈದ್ಯಾಧಿಕಾರಿಗಳೆಲ್ಲೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ, ಭಗವಂತನು ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲಿ,ತಾಲೂಕಾಸ್ಪತ್ರೆಯ ಹೆಸರು ಸೇವೆಯಿಂದ ಇನ್ನಷ್ಟು ಖ್ಯಾತಿ ಪಡೆಯಲಿ ” ಎಂದು ಶುಭ ಕೋರಿದರು.
ಯುವ ಮುಖಂಡ ರವಿಕುಮಾರ್ ಶೆಟ್ಟಿ ಮಾತನಾಡಿ ನನ್ನ ತಂದೆ ದಿ.ಮೋಹನ್ ಕೆ ಶೇಟ್ಟಿಯವರು ಜನಪ್ರಿಯ ಶಾಸಕರಾಗಿದ್ದರು ಅವರ ಮಾರ್ಗದರ್ಶನದಂತೆ ಸಮಾಜ ಸೇವೆಯಲ್ಲಿ ನಾವು ತೋಡಗಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ಕಿಣಿ, ಪ್ರಕಾಶ್ ನಾಯ್ಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ,ಮಾಜಿ ಪ.ಪಂ ಸದಸ್ಯ ಸುರೇಶ್ ಮೇಸ್ತ,ನಗರ ಘಟಕದ ಅಧ್ಯಕ್ಷ ಕೇಶವ್ ಮೇಸ್ತ,ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯಾ ಸಾಬ್,ಮುಖಂಡರಾದ ಬಾಲಚಂದ್ರ ನಾಯ್ಕ,ದಾಮೋದರ ನಾಯ್ಕ,ಶ್ರೀಕಾಂತ ಮೇಸ್ತ,ಗಣಪತಿ ಮೇಸ್ತ,ಆರ್ ಕೆ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.
Leave a Comment