ಹೊನ್ನಾವರ : ಕಳೆದ ಆರು ವರ್ಷಗಳಿಂದ ಭಟ್ಕಳದಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ಥಾನಿ ಪ್ರಜೆಯಾಗಿರುವ ಮಹಿಳೆಗೆ ಇಲ್ಲಿನ ಆಧಾರ್ ಕಾರ್ಡ, ಪಾನ್ ಕಾರ್ಡ, ರೇಶನ್ ಕಾರ್ಡ ಮುಂತಾದ ದಾಖಲೆಗಳನ್ನು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯ ಸದಸ್ಯರು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದನೆ ಕೃತ್ಯಗಳು ನಡೆದರೂ ಅದರ ಸಂಬಂಧ ಭಟ್ಕಳದೊಂದಿಗೆ ತಳುಕುಹಾಕಿಕೊಳ್ಳುತ್ತದೆ. ಈ ಮತೀಯವಾದ ಭಟ್ಕಳಂಕೆ ಕಂಟಕವಾಗಿದೆ. ಈ ಪರಿಸ್ಥಿಗೆ ಈ ಹಂತದಲ್ಲಿಯೇ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಅನಾಹುತಕ್ಕೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಭಟ್ಕಳದಲ್ಲಿ ಸಾಕಷ್ಟು ನುಸುಳುಕೋರರು ನಕಲಿ ಪಾಸ್ಪೋರ್ಟ, ನಕಲಿ ಆಧಾರ್ ಕಾರ್ಡ, ನಕಲಿ ವೋಟರ್ ಐಡಿಯೊಂದಿಗೆ ವಾಸಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಹಿಂಜಾವೇ ಸದಸ್ಯರು ಈ ಸಂಗತಿ ದೇಶದ ರಕ್ಷಣಾತ್ಮಕ ಸಂಗತಿಯಾಗಿರುವುದರಿಂದ ಸಮಗ್ರ ತನಿಖೆಗೆ ಮುಂದಾಗುವಂತೆ ಒತ್ತಾಯಿಸಿದ್ದಾರೆ. ತಹಸೀಲ್ದಾರ್ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ತಾಲೂಕಾ ಸಂಚಾಲಕ ವೀರೇಂದ್ರ ಮೇಸ್ತ, ನಗರ ಸಂಚಾಲಕ ರಾಘು ಶೇಟ್, ಪಟ್ಟಣಪಂಚಾಯತ ಸ್ಥಾಯಿಸಮಿತಿ ಅಧ್ಯಕ್ಷ ವಿಜು ಕಾಮತ್, ಬಿಜೆಪಿ ತಾಲೂಕಾಧ್ಯಕ್ಷ ರಾಜು ಭಂಡಾರಿ, ನಗರ ಅಧ್ಯಕ್ಷ ಉಮೇಶ ಸಾರಂಗ, ಮುರಳೀಧರ ಗಾಯ್ತೊಂಡೆ ಹಾಜರಿದ್ದರು.
Leave a Comment