ಹೊನ್ನಾವರ: ತಾಲೂಕಿನ ಹಲವು ಭಾಗಗಳಲ್ಲಿ ರೈತರು ನಾಟಿ ಕಾರ್ಯಕ್ಕೆ ಮುಂದಾಗಿದ್ದು, ಜುಲೈ ಆರಂಭದಲ್ಲಿಯೇ ಮಳೆ ಕೈ ಕೊಟ್ಟಿದ್ದರಿಂದ ಕೃಷಿ ಜಮೀನಿಗೆ ಸಾಕಷ್ಟು ನೀರಿನ ಕೊರತೆ ಎದುರಾಗಿರುವುದರಿಂದ ಕೆಲವಡೆ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ.ರೈತರು ತಮ್ಮ ಹೊಲಗಳಲ್ಲಿ ನಾಟಿಗೆ ಪೂರಕವಾದ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.
ಆದರೆ ಜಿಲ್ಲೆಯಲ್ಲಿ ಜುಲೈ ಆರಂಭದಲ್ಲಿಯೇ ಮಳೆ ಪ್ರಮಾಣ ಇಳಿಕೆ ಕಂಡಿದ್ದು, ಕೆಲ ಭಾಗಗಳಲ್ಲಿ ರೈತರ ನಾಟಿ ಕಾರ್ಯಕ್ಕೆ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ. ತಾಲೂಕಿನಲ್ಲಿ ಸರಿಸುಮಾರು 2067 ಹೆಕ್ಟೇರ್ ಪ್ರದೇಶಗಳಲ್ಲಿ ರೈತರು ಮಳೆ ಆಶ್ರಿತ ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 1825 ಹೆಕ್ಟೇರ್ ಪ್ರದೇಶದಲ್ಲಿ ಅಧಿಕಿ ಇಳುವರಿ ಭತ್ತ, 182 ಹೆಕ್ಟೇರ್ ಪ್ರದೇಶಗಳಲ್ಲಿ ಸ್ಥಳೀಯ ಭತ್ತ ಹಾಗೂ 60 ಹೆಕ್ಟೇರ್ ಪ್ರದೇಶಗಳಲ್ಲಿ ಯಾಂತ್ರಿಕೃತ ನಾಟಿ ಸೇರಿ ಒಟ್ಟೂ 2067 ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಜುಲೈ ತಿಂಗಳಲ್ಲಿ ಮಳೆ ಕೈ ಕೊಡಲಿದೆ ಎನ್ನುವ ಅಂದಾಜು ಇರಲಿಲ್ಲ. ಹೀಗಾಗಿ ರೈತರು ಮೇ ಮತ್ತು ಜೂನ್ ತಿಂಗಳ ಮಧ್ಯಂತರದಲ್ಲಿ ನಾಟಿಗೆ ಪೂರಕವಾಗಿ ಬೀಜ ಬಿತ್ತನೆ ಮಾಡಿಕೊಂಡಿದ್ದರು.
ಇದೀಗ ಜುಲೈ ಆರಂಭದಲ್ಲಿ ಮಳೆ ಇಳಿಮುಖವಾದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎನ್ನಲಾಗಿದೆ. ಬಿತ್ತನೆ ಮಾಡಿದ ಸಸಿಗಳು ಬಿಸಿಲು ಮಳೆಯಾಟದಿಂದ ಕಂದು ಬಣ್ಣಕ್ಕೆ ತಿರುಗಿದೆ ಮಾತ್ರವಲ್ಲ ಸಸಿಗಳಿಗೆ ನಾಟಿ ಅವಧಿಯೂ ಮೀರಲಾರಂಭಿಸಿದೆ. ಹೀಗಾಗಿ ರೈತರಿಗೆ ನಾಟಿ ಮಾಡದೇ ಬಿಡುವ ಹಾಗೂ ಇಲ್ಲ ಇತ್ತ ಸಸಿಗಳನ್ನು ಬೆಳೆಸುವ ಹಾಗೂ ಇಲ್ಲದೆ ಗೊಂದಲದಲ್ಲಿದ್ದಾರೆ. ಕೃಷಿ ಜಮೀನಿನಲ್ಲಿ ನೀರಿಲ್ಲದೆ ಹದಗೊಳಿಸಿದ ಮಣ್ಣು ಗಟ್ಟಿಯಾಗಿ ಉಳುಮೆಗೂ ತೊಂದರೆಯಾಗುತ್ತಿದೆ.
ದಿನಕ್ಕೆ ಒಂದೆರಡು ಬಾರಿ ಮಳೆಯಾಗಿ ನಂತರ ಬಿಸಿಲಿನ ವಾತಾವರಣ ಕಾಣೀಸಿಕೊಳ್ಳುತ್ತಿರುವುದು ರೈತರಲ್ಲಿ ಆತಂಕ ಮನೆಮಾಡಿದೆ.ತಾಲೂಕಿನ ಮಂಕಿ, ಚಂದಾವರ, ಶಿರೂರು, ಕಡ್ನೀರು, ತೊರಗೋಡ, ಹಡಿನಬಾಳ, ಗೇರುಸೊಪ್ಪಾ, ಮಾವಿನಕುರ್ವಾ ಮುಂತಾದ ಭಾಗಗಳಲ್ಲಿ ನಾಟಿ ಕಾರ್ಯ ಆರಂಭವಾಗಿದೆ. ಸ್ಥಳೀಯ ಭತ್ತಗಳಾದ ಬಂಟವಾಳ, ಸುಂದರಿ, ಗೌರಿ, ಮಲಬಾರ್, ಹಳಗ, ಕಗ್ಗ, ರಾಶಿ, ಚಿಟಕ, ಕೆಂಪಿ ಹೀಗೆ ಮುಂತಾದ ಅನೇಕ ಜಾತಿಯ ಭತ್ತದ ಸಸಿಗಳನ್ನು ನಾಟಿ ಮಾಡುತ್ತಾರೆ.
ಉತ್ಸಾಹಿ ಯುವಕರು, ಕಾಲೇಜು ವಿದ್ಯಾರ್ಥಿಗಳೂ ಸಹ ನಾಟಿ ಕಾರ್ಯದಲ್ಲಿ ತೊಡಗಿಕೊಂಡು ಕೃಷಿಯತ್ತ ಹೆಜ್ಜೆ ಹಾಕುತ್ತಿರುವುದು ವಿಶೇಷವಾಗಿ ಕಂಡುಬಂತು.ಬಾಂದಾರ್ನಿಂದ ನೀರು ತಂದು ಸುಸ್ತಾದರು: ಇನ್ನು ಕಡ್ನೀರು ಮೇಲಿನಕೇರಿ ಭಾಗದಲ್ಲಿ ನೂರಾರು ಎಕರೆ ಕೃಷಿ ಜಮೀನು ಇದ್ದು, ಪ್ರತೀ ವರ್ಷ ಮುಂಗಾರು ಹಂಗಾಮಿಗೆ ಭತ್ತ ಬೆಳೆಯುತ್ತಾರೆ. ಆದರೆ ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ದೂರದ ದೋಸೆಕಟ್ಟು ಬಾಂದಾರ್ಗೆ ಹೋಗಿ ನೀರು ತಂದು ಗದ್ದೆ ನಾಟಿ ಮಾಡಲಾಗುತ್ತಿದೆ.
ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದ್ದು, ರಾಜಕಾಲುವೆಯಲ್ಲಿ ಬರುವ ನೀರು ಆವಿಯಾಗತೊಡಗಿದೆ. ಇದರಿಂದ ಆ ಭಾಗದಲ್ಲಿ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಪ್ರತಿ ದಿನ ಬಾಂದಾರ್ ನಿಂದ ನೀರುವ ತಂದು ಗದ್ದೆ ನಾಟಿ ಮಾಡುವ ಮೂಲಕ ರೈತರು ಹೈರಾಣಾಗಿದ್ದಾರೆ.ಬಿಸಿಲಿಗೆ ಸುಸ್ತಾದ ಜೋಡೆತ್ತುಗಳು: ಜಿಲ್ಲೆಯಲ್ಲಿ ಮುಂದುವರಿದ ಬಿಸಿಲಿನ ತಾಪಮಾನಕ್ಕೆ ಬೆಳಿಗ್ಗೆಯಿಂದ ಉಳುಮೆ ಮಾಡುತ್ತಿರುವ ಜೋಡೆತ್ತುಗಳು ಉಳುಮೆ ಮಾಡಲಾಗದೆ ಚಡಪಡಿಸುತ್ತಿವೆ. ಮುಂಜಾನೆಯಿಂದ ಮಧ್ಯಾಹ್ನ 2-3 ಗಂಟೆಯ ವರೆಗೆ ಉಳುಮೆ ಮಾಡುವ ಎತ್ತುಗಳು ಈಗ ಬೆಳಗಿನ 11 ಗಂಟೆವರೆಗೂ ಮಾಡಲು ಹಿಂದೇಟು ಹಾಕುತ್ತಿವೆ. ಇದರಿಂದಾಗಿ ರೈತರು ಈ ಬಾರಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.
————-“ಈ ಬಾರಿ ಮಳೆ ಕೈಕೊಟ್ಟಿದೆ. ಮಳೆ ಕೊರತೆ ನಡುವೆಯೂ ನಾಟಿ ಕಾರ್ಯವನ್ನು ಕೈ ಹಚ್ಚಿದ್ದೇವೆ. ಬಿಸಿಲಿನ ವಾತಾವರ ಣ ಹೀಗೆ ಮುಂದುವರಿದರೆ ಕೃಷಿ ಜಮೀನಿಗೆ ತೊಂದರೆಯಾಗುತ್ತದೆ. ಸರಿಯಾಗಿ ಮಳೆಯಾದರೆ ಮಾತ್ರ ಭತ್ತದ ಇಳುವರಿ ಕೈಗೆ ಸಿಗಲಿದೆ. ಇಲ್ಲವಾದರೆ ಊಟಕ್ಕೂ ಪರದಾಡುವ ಸನ್ನಿವೇಶ ಎದುರಾಗುವುದು. ಆದಷ್ಟು ಬೇಗ ಮಳೆ ಕೃಪೆ ತೋರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ”- ಗಜಾನನ ನಾಯ್ಕ ಕಡ್ನೀರು, ಕೃಷಿಕ—————————–
Leave a Comment