ಯಲ್ಲಾಪುರ:
ತಾಲೂಕಿನ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಸೂಳಗಾರಿನಲ್ಲಿ ತೋಟದ ಮೇಲೆ ಗುಡ್ಡ ಕುಸಿದು ಹಾನಿ ಉಂಟಾಗಿದೆ.
ಸೂಳಗಾರಿನ ಶಿವರಾಮ ಭಟ್ಟ ಅವರಿಗೆ ಸೇರಿದ ತೋಟದಲ್ಲಿ ಗುಡ್ಡ ಕುಸಿದು ಅಡಿಕೆ ಮರಗಳಿಗೆ ಹಾನಿಯಾಗಿದೆ. ತೋಟದಲ್ಲಿನ ಹಳ್ಳದ ಮೇಲೂ ಗುಡ್ಡ ಕುಸಿದಿದ್ದು, ಹಳ್ಳದ ನೀರು ತೋಟದಲ್ಲಿ ಹರಿಯುವಂತಾಗಿದೆ. ಗುಡ್ಡದ ಮಣ್ಣಿನ ಜತೆಗೆ ದೊಡ್ಡ ದೊಡ್ಡ ಮರಗಳೂ ಕುಸಿದು ತೋಟದತ್ತ ಅಪ್ಪಳಿಸಿವೆ.
ಮನೆಯ ಪಕ್ಕ ಇರುವ ಕೊಟ್ಟಿಗೆಯ ಕೆಳಗಿನ ಧರೆ ಕುಸಿಯಲಾರಂಭಿಸಿದ್ದು, ಕೊಟ್ಟಿಗೆ ಕುಸಿಯುವ ಭೀತಿ ಉಂಟಾಗಿದೆ. ತೋಟದಲ್ಲಿ ಇರುವ ಕೆರೆಯೊಂದರಲ್ಲಿ ಗುಡ್ಡದ ಮೇಲಿನ ಮರವೊಂದು ಕುಸಿದಿದೆ.
ಮಳೆಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ತೋಟ ರಕ್ಷಿಸಿಕೊಳ್ಳಲು ಸ್ಥಳೀಯ ಆಡಳಿತ, ಅರಣ್ಯ ಇಲಾಖೆ ನೆರವಾಗಬೇಕೆಂದು ಶಿವರಾಮ ಭಟ್ಟ ಆಗ್ರಹಿಸಿದ್ದಾರೆ.
Leave a Comment