ಹೊನ್ನಾವರ : ತಮ್ಮ ಬದುಕನ್ನು ಅನಾಥರು, ನಿರ್ಗತಿಕರು, ದಿಕ್ಕು ದೆಸೆಯಿಲ್ಲದೆ ಅಲೆಯುವ ಮಾನಸಿಕ ಅಸ್ವಸ್ಥರ ಜೀವನ ಸುಧಾರಣೆಗೆ ಮುಡಿಪಿಟ್ಟು ಅದಕ್ಕಾಗಿಯೇ ಜೀವನಧಾರಾ ಟ್ರಸ್ಟ್ ಹುಟ್ಟುಹಾಕಿದ್ದ ಪಟ್ಟಣದ ಜಾಕಿ ಡಿ ಸೋಜಾ ಶನಿವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಸ್ಟಮ್ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ನಂತರ ಸಹಕಾರಿ ಸಂಸ್ಥೆಯೊಂದರ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ನಿವೃತ್ತಿಯ ನಂತರ ಸಮಾಜ ಸೇವೆಯ ಕಳಕಳಿ ಹೊಂದಿರುವ ಸಮಾನಮನಸ್ಕರೊಡಗೂಡಿ ಜೀವನಧಾರಾ ಟ್ರಸ್ಟ್ ಅನ್ನು ಹುಟ್ಟುಹಾಕಿದ್ದರು. ರೋಟರಿ ಕ್ಲಬ್ ಹೊನ್ನಾವರದ ಅಧ್ಯಕ್ಷರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದರು.

ಹೆಸರು ವಿಳಾಸ ಯಾವುದನ್ನೂ ಸರಿಯಾಗಿ ತಿಳಿಸದ, ಕಷ್ಟಕ್ಕಾಗದ ನೂರಾರು ಮಂದಿ ಅನಾಥರನ್ನು ಮಾನಸಿಕ ಅಸ್ವಸ್ಥರನ್ನು ಕರೆತಂದು ಪೊಲೀಸರ ಸಹಕಾರ ನ್ಯಾಯಾಲಯದ ಅನುಮತಿ ಪಡೆದು, ಅಂತವರ ಸಾವು ಬದುಕಿನ ಸಂಪೂರ್ಣ ಜವಾಬ್ಧಾರಿ ಹೊತ್ತುಕೊಂಡು, ಸ್ವತ: ಕೈಯಿಂದ ಸಾವಿರಾರು ರೂಪಾಯಿ ಖರ್ಚುಮಾಡಿ ಡಿಮಾನ್ಸ್ ಗೆ ಸೇರಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದರು.
ಅವರ ಸಮಾಜ ಸೇವೆಯನ್ನು ಪರಿಗಣಿಸಿ ಸಿದ್ದಾಪುರದ ಆಧಾರ ಸಂಸ್ಥೆಯವರು ಆಧಾರ ಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದ್ದರು. ಮೃತರು ಮಡದಿ, ಮೂವರು ಪುತ್ರಿಯರನ್ನು, ಓರ್ವ ಪುತ್ರನನ್ನು ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ರೋಟರಿ ಅಧ್ಯಕ್ಷ ಸ್ಟೀಪನ್ ರೊಡ್ರಗೀಸ್, ಲಯನ್ಸ ಅಧ್ಯಕ್ಷ ವಿನೋಧ ನಾಯ್ಕ ಮಾವಿನಹೊಳೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
Leave a Comment