ಹೊನ್ನಾವರ : ಹೊನ್ನಾವರ ತಾಲೂಕಿನ ಕುದ್ರಿಗಿ ಗ್ರಾಮಪಂಚಾಯತ ಆವರಣದಲ್ಲಿ ದಿನಾಂಕ 19-08-2021 ರಂದು ಹಾರಿಸಿದ ರಾಷ್ಟ್ರದ್ವಜ ರಾತ್ರಿಯೆಲ್ಲಾ ಹಾರಾಡಿದ ಸಂಗತಿ ಮಾರನೇ ದಿನ ಕೋವಿಡ್ ಲಸಿಕೆ ಪಡೆಯಲು ಪಂಚಾಯತ ಆವರಣಕ್ಕೆ ಬಂದಿದ್ದ ಗ್ರಾಮಸ್ಥರಿಂದ ಬೆಳಕಿಗೆ ಬಂದಿದೆ. ಘಟನೆಯ ಹಿಂದಿನ ವಾಸ್ಥವ ಸಂಗತಿಯನ್ನು ಅರಿಯಲು ಪ್ರಯತ್ನಿಸಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
ಅಸಲಿಗೆ ಕುದ್ರಿಗಿ ಪಂಚಾಯತದಲ್ಲಿ 19 ಬೆಳಿಗ್ಗೆ ಹಾರಿಸಿದ ರಾಷ್ಟ್ರ ದ್ವಜವನ್ನು ಸೂರ್ಯಾಸ್ತವಾಗುವುದರೊಳಗೆ ಇಳಿಸದಿದ್ದದ್ದು ನಿಜ ಎನ್ನುವುದನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗೂ ಇದೀಗ ತಪ್ಪಿತಸ್ಥನ ಜಾಗದಲ್ಲಿ ನಿಂತಿರುವ ಬಿಲ್ ಕಲೆಕ್ಟರ್ ಅನಿಲ್ ನಾಯ್ಕ ಒಪ್ಪಿಕೊಂಡಿದ್ದಾರೆ.
ನಿರ್ಲಕ್ಷ್ಯ ಕಾರಣವೇ..ಅಸಲಿ ಕಾರಣವೇನು..?
ಸಂಜೆಯಾದರೂ ರಾಷ್ಟ್ರದ್ವಜ ಯಾಕೆ ಇಳಿಸಿಲ್ಲ? ಇದು ರಾಷ್ಟ್ರದ್ವಜಕ್ಕೆ ಮಾಡುವ ಅವಮಾನವಲ್ಲವೇ..? ಎಂದು ಪ್ರಶ್ನಿಸಿದರೆ ಅದಕ್ಕೆ ಸಿಗುವ ಉತ್ತರ ನಮ್ಮಿಂದ ತಪ್ಪಾಗಿರುವುದು ನಿಜ, ಹಾಗಂತ ಅದು ಉದ್ದೇಶಪೂರ್ವಕ ನಿರ್ಲಕ್ಷ್ಯವಲ್ಲ ಎನ್ನುತ್ತಾರೆ ಪಿ.ಡಿ.ಓ ಹಾಗೂ ಬಿಲ್ ಕಲೆಕ್ಟರ್ .

ಆಗಿದ್ದಾದರೂ ಏನು ಅನ್ನುವುದನ್ನು ಅವರದೇ ಮಾತುಗಳಲ್ಲಿ ಹೇಳುವುದಾದರೆ. ಕುದ್ರಿಗಿ ಗ್ರಾಮಪಂಚಾಯತದಲ್ಲಿ ಒಬ್ಬರು ಪಿ.ಡಿ.ಓ, ಒಬ್ಬರು ಕಾರ್ಯದರ್ಶಿ ಮತ್ತು ಒಬ್ಬರು ಬಿಲ್ ಕಲೆಕ್ಟರ್ ಒಟ್ಟೂ ಮೂರೇ ಮಂದಿ ಇರುವುದು. ದಿನಾಂಕ 19-08 -2021 ರಂದು ಬಿಲ್ ಕಲೆಕ್ಟರ್ ಅನಿಲ್ ಅವರಿಗೆ ಗೇರಸೊಪ್ಪಾ ಚೆಕ್ ಪೋಸ್ಟ್ ಡ್ಯೂಟಿಗೆ ಹಾಕಿದ್ದರಿಂದ ಅಂದು ಬೆಳಿಗ್ಗೆ 7 ಗಂಟೆಗೆ ಒಳಗೆ ಬಂದು ದ್ವಜಾರೋಹಣ ನೆರವೇರಿಸಿ ಡ್ಯೂಟಿಗೆ ತೆರಳಿದ್ದಾಗಿ ತಿಳಿಸಿದ್ದಾರೆ.
ನಂತರ ಪಂಚಾಯತಗೆ ಬಂದ ಪಿ.ಡಿ.ಓ ಮತ್ತು ಕಾರ್ಯದರ್ಶಿಯವರು ಮಧ್ಯಾಹ್ನದವರೆಗೂ ಕಛೇರಿಯಲ್ಲೇ ಇದ್ದರು. ಕಾರ್ಯದರ್ಶಿಯವರು ಮಂಗಳೂರಿನ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಹೋಗುವವರಿದ್ದು ಅದಕ್ಕಾಗಿ ಕೋವಿಡ್ ಟೆಸ್ಟ್ ರಿಪೋರ್ಟ ಅಗತ್ಯವಾದ್ಧರಿಂದ ಮಧ್ಯಾಹ್ನವೇ ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹೊನ್ನಾವರಕ್ಕೆ ತೆರಳಿದ್ದರಂತೆ.
2 ಗಂಟೆಗೆ ಚೆಕ್ ಪೋಸ್ಟ್ ಡ್ಯೂಟಿ ಮುಗಿಸಿಕೊಂಡು ಬಂದ ಅನಿಲ್ ನನ್ನು ಊಟಕ್ಕೆ ಕಳುಹಿಸಿದ ಪಿ.ಡಿ.ಓ ನಂತರ ತೆಂಗಾರ್ ಅಂಗನವಾಡಿ ಕಟ್ಟಡದ ಬಿಲ್ ವಿಚಾರವಾಗಿ ಹೊರಗೆ ಹೋಗಬೇಕಾದಾಗ ಅನಿಲ್ ನನ್ನು ಪಂಚಾಯತಕ್ಕೆ ಕರೆಸಿದ್ದಾಗಿ. ಅನಿಲ್ ಬಂದಮೇಲೆ ತಾನು ಅಲ್ಲಿಂದ ಹೊರಗೆ ಹೋಗಿದ್ದಾಗಿಯೂ ತಿಳಿಸಿದ್ದಾರೆ.
ದಿನಾಲೂ ರಾಷ್ಟ್ರದ್ವಜ ಏರಿಸಿ ಇಳಿಸುತ್ತಿದ್ದ ಅನಿಲ್ ಅಂದು ಯಾಕೆ ಇಳಿಸಲಿಲ್ಲ..?
ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಬಹುಶ: ಅನಿಲ್ ಗೂ ತಾನೆಲ್ಲಿ ಎಡವಿದ್ದೇನೆ ಎಂದು ಗೊತ್ತಾಗಿದ್ದು ಮಾರನೇ ದಿನ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದವರು ದ್ವಜ ಇಳಿಸಿಲ್ಲ ಎಂದಾಗಲೇ. ಅನಿಲ್ ಪಂಚಾಯತ ಕಛೇರಿಯಲ್ಲಿದ್ದ ಸಮಯದಲ್ಲಿಯೇ ಹಳದಿಪುರದದಲ್ಲಿ ಬೈಕ್ ಮತ್ತು ಲಾರಿ ಅಪಘಾತದಲ್ಲಿ ಶಿಕ್ಷಕ ದಂಪತಿ ಗಂಭೀರವಾಗಿ ಗಾಯಗೊಂಡು ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸು ನೀಗಿದ್ದರು. ಈ ಸಂಗತಿ ಕೆಲ ಹೊತ್ತಿನಲ್ಲಿಯೇ ಅನಿಲ್ ಗೂ ಗೊತ್ತಾಗಿದೆ.
ಕುದ್ರಿಗಿ ಗ್ರಾಮಪಂಚಾಯತ್ ಬಿಲ್ ಕಲೆಕ್ಟರ್ ಅನಿಲಗೂ ಹಳದಿಪುರಕ್ಕೂ ನಂಟಿದೆ. ಅನಿಲ ಮೂಲತ ಹಳದಿಪುರದ ಹುಡುಗ. ಈತ ಹಳದಿಪುರದಲ್ಲಿರುವಾಗ ಈತನ ಮನೆಯ ಮುಂದಿನ ಮನೆಯಲ್ಲಿಯೇ ಅಪಘಾತಕ್ಕೊಳಗಾದ ಶಿಕ್ಷಕ ದಂಪತಿಗಳು ವಾಸವಿದ್ದರೆನ್ನಲಾಗಿದೆ.
ಕೌಟಿಂಬಿಕ ಸಮಸ್ಯೆಯೆನ್ನೆದುರಿಸುತ್ತಿದ್ದ ಅನಿಲ್ ಕುಟುಂಬಕ್ಕೆ ಅಪಘಾತದಲ್ಲಿ ಮೃತಪಟ್ಟ ಶಿಕ್ಷಕಿ ಆಶಾ ನಾಯ್ಕ ಹಾಗೂ ಅವರ ಪತಿ ರಾಜು ನಾಯ್ಕ ಸಾಕಷ್ಟ ಕಾಳಜಿ ತೋರಿದ್ದರು ಮತ್ತು ಮನೆಯವರಿಗಿಂತ ಜಾಸ್ತಿ ಪ್ರೀತಿ ತೋರಿಸುತ್ತಿದ್ದರಂತೆ ಇದೇ ಕಾರಣಕ್ಕೆ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ತಾನು ಅವರು ಆ್ಯಕ್ಸಿಡೆಂಟ್ ಅಲ್ಲಿ ಡೆತ್ ಆದ್ರೂ ಅನ್ನೋ ಸುದ್ದಿ ಕೇಳಿ ಗಡಿಬಿಡಿಯಲ್ಲಿ ಪಂಚಾಯತ ಕಛೇರಿಗೆ ಬೀಗ ಹಾಕಿ ಅವರನ್ನು ನೋಡೋಕೆ ಹೊನ್ನಾವರ ಹೋಗಿಬಿಟ್ಟೆ. ಮುಂದೆ ಆಗಿದ್ದೆಲ್ಲವೂ ಎಲ್ಲರಿಗೂ ಗೊತ್ತಿದೆ ಎಂದು ಮೌನವಾಗುತ್ತಾರೆ ಅನಿಲ್.
2013 ರಿಂದ ನಿತ್ಯವೂ ದ್ವಜಾರೋಹಣ ನೆರವೇರಿಸುತ್ತಾ ಬಂದಿರುವ ಅನಿಲ್ ಆಪ್ತರ ಸಾವಿನ ಆಘಾತದಲ್ಲಿ ಮೈಮರೆತ ಕಾರಣ ರಾಷ್ಟ್ರ ದ್ವಜಕ್ಕೆ ಅಗೌರವ ತೋರಿದ ಆಪಾದನೆಯನ್ನು ಹೊರಬೇಕಾಗಿದೆ. ಕಾನೂನಿನ ಲೆಕ್ಕದಲ್ಲಿ ಕುದ್ರಿಗಿ ಗ್ರಾಮಪಂಚಾಯತ ನೌಕರರು ಮಾಡಿದ್ದು ತಪ್ಪು . ಬಿದ್ದವರಮೇಲೆ ಆಳಿಗೊಂದು ಕಲ್ಲು ಎನ್ನುವಂತೆ ಟೀಕೆಯ ಬಾಣಗಳೂ ತೂರಿ ಬರುತ್ತಿದೆ.
Leave a Comment