ಹೊನ್ನಾವರ; ವರ್ಷಗಳ ಕಾಲ ದಕ್ಷಿಣ, ಕೊಂಕಣ ಹಾಗೂ ಮಲೆನಾಡನ್ನು ಆಳಿದ ರಾಣಿ ಚೆನ್ನಭೈರಾದೇವಿಯ ಹೆಸರನ್ನು ಚಿರಸ್ಥಾಯಿಗೊಳಿಸಲು ಮತ್ತು ಅವಳು ಇಂದಿನ ಯುವಜನಕ್ಕೆ ಸ್ಪೂರ್ತಿ ನೀಡುವಂತಹ ವಾತಾವರಣ ನಿರ್ಮಿಸಲು ರಾಣಿ ಚೆನ್ನಭೈರಾದೇವಿ ಥೀಮ್ಪಾರ್ಕ್ನ್ನು ನಿರ್ಮಾಣ ಮಾಡಿ ಅದರಲ್ಲಿ ರಾಣಿಯ ತಾಮ್ರದ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ.
ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಇವರ ಪ್ರೇರಣೆ ಹಾಗೂ ಮಾರ್ಗದರ್ಶನದಂತೆ ನಿರ್ಮಾಣ ಕಾರ್ಯ ನಡೆಯಬೇಕೆಂದು ಕಳೆದ ಬಾರಿ ಶಾಸಕರ ಉಪಸ್ಥಿತಿಯಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಈ ಕುರಿತು ಬೇರೆ ಬೇರೆ ಸ್ತರದಲ್ಲಿ ಸರ್ಕಾರದೊಂದಿಗೆ ವ್ಯವಹರಿಸಿ ಅಪ್ಸರಕೊಂಡ ಮತ್ತು ಇಕೋಬೀಚ್ ಪರಿಸರದಲ್ಲಿ 2 ಎಕರೆ ಭೂಮಿಯನ್ನು ಬಾಡಿಗೆಗೆ ಪಡೆದು ಪಾರ್ಕ್ ರಚಿಸಲು ತೀರ್ಮಾನಿಸಲಾಗಿದೆ.
ಇದೇ ವರ್ಷದ ಕೊನೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ರಾಣಿ ಚೆನ್ನಭೈರಾದೇವಿಯ ಕುರಿತು ಒಂದು ದಿನದ ವಿಚಾರಸಂಕಿರಣವನ್ನು ಏರ್ಪಡಿಸಲು ನಿರ್ಧರಿಸಲಾಗಿದ್ದು ಪಾರ್ಕ್ ಹೇಗಿರಬೇಕು ಎಂಬ ಕುರಿತು ಅಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ಯೋಜನೆಯನ್ನು ಯಶಸ್ವಿಗೊಳಿಸಲು ಸ್ಥಳೀಯ ಸಮಿತಿಯೊಂದನ್ನು ಹೆಗ್ಗಡೆಯವರು ರಚಿಸಿದ್ದಾರೆ.
ಅಧ್ಯಕ್ಷರು : ಶಾಸಕ ಸುನೀಲ ನಾಯ್ಕ ಭಟ್ಕಳ, ಸದಸ್ಯರು : ಶಾಸಕ ದಿನಕರ ಕೆ. ಶೆಟ್ಟಿ ಕುಮಟಾ, ಡಾ. ಗಜಾನನ ಶರ್ಮಾ ಲೇಖಕರು ಬೆಂಗಳೂರು, ಮುರಲೀಧರ ಪ್ರಭು ಉದ್ಯಮಿಗಳು ಕುಮಟಾ, ಚಂದ್ರಶೇಖರ ಜಿನದತ್ತ ಗೌಡ ಸಾಮಾಜಿಕ ಕಾರ್ಯಕರ್ತರು ಮಂಕಿ, ಮೋಹನ ಭಾಸ್ಕರ ಹೆಗಡೆ ಸಾಮಾಜಿಕ ಕಾರ್ಯಕರ್ತರು ಕುಮಟಾ, ಕಾರ್ಯದರ್ಶಿ : ಜಿ. ಯು. ಭಟ್ ಪತ್ರಕರ್ತರು ಹೊನ್ನಾವರ. ಈ ಕುರಿತು ಸಕ್ರೀಯ ಸಹಾಯ ನೀಡಬಯಸುವವರು ಕಾರ್ಯದರ್ಶಿ, ರಾಣಿ ಚೆನ್ನಭೈರಾದೇವಿ ಥೀಮ್ಪಾರ್ಕ್ ನಿರ್ಮಾಣ ಸ್ಥಳೀಯ ಸಮಿತಿ, ಕೇರ್ಆಫ್ ಶ್ರೀಧರ ಪ್ರೆಸ್, ಬಸ್ಸ್ಟ್ಯಾಂಡ್ ಬಳಿ, ಹೊನ್ನಾವರ (ಉ.ಕ.) ಮೊಬೈಲ್ ನಂಬರ್ 9945538179.
Leave a Comment