ಹೊನ್ನಾವರ : ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾದಿನದ ಅಂಗವಾಗಿ ಸೋಮವಾರ ಕಾಸರಕೋಡ ಟೊಂಕ ಪ್ರದೇಶದ ಸಮುದ್ರ ತೀರವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡುವ ಸದುದ್ದೇಶದಿಂದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿ ಸಮುದ್ರ ತೀರವನ್ನು ಸ್ವಚ್ಛ ಗೊಳಿಸುವ ಕಾರ್ಯವನ್ನು ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಮತ್ತು ವಿವಿಧ ಮೀನುಗಾರ ಸಂಘಟನೆ ಹಾಗೂ ಸ್ಥಳೀಯ ಸ್ನೇಹಕುಂಜದ ಸಹಯೋಗದೊಂದಿಗೆ ಕಾಸರಕೋಡ ಟೊಂಕದ ಸಮುದ್ರ ತೀರದಲ್ಲಿ ಆಯೋಜಿಸಿದ್ದರು.
ಸ್ಥಳೀಯ ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷೆ ರೇಣುಕಾ ತಾಂಡೇಲ, ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಕಡಲ ವಿಜ್ಞಾನಿ ಡಾ. ಪ್ರಕಾಶ ಮೇಸ್ತ, ಸ್ನೇಹಕುಂಜದ ಡಾ. ನಾರಾಯಣ ಹೆಗಡೆ, ಹಸಿಮೀನು ವ್ಯಾಪರಸ್ಥರ ಸಂಘದ ಅಧ್ಯಕ್ಷ ಗಣಪತಿ ಈಶ್ವರ ತಾಂಡೇಲ್, ಗ್ರಾಮ ಪಂಚಾಯತ ಸದಸ್ಯ ಜಗದೀಶ್ ತಾಂಡೇಲ್, ಮೀನುಗಾರರ ಮುಖಂಡರಾದ ವಿವನ್ ಫರ್ನಾಂಡಿಸ್, ರಾಜು ತಾಂಡೆಲ, ಭಾಷ್ಕರ ತಾಂಡೇಲ್, ಮಹ್ಮದ್ ಕೋಯಾ ಮತ್ತು ವಿವಿಧ ಮಹಿಳಾ ಮುಖಂಡರು ಸಮುದ್ರ ಕ್ಕೆ ಮುಷ್ಟಿಯಷ್ಟು ಉಪ್ಪನ್ನು ಸುರಿಯುವ ಮೂಲಕ ಸ್ವಚ್ಛತಾಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚಡೇಕರ್ ಮಾತನಾಡಿ ವಿಶ್ವದಾದ್ಯಂತ ಜನರು ಮೀನನ್ನು ಪ್ರಮುಖ ಆಹಾರವಾಗಿ ಬಳಸುತ್ತಾರೆ. ಸಮುದ್ರದಲ್ಲಿ ಮತ್ತು ಸಮುದ್ರ ತೀರಗಳಲ್ಲಿ ಪ್ಲಾಸ್ಟಿಕ್ ಮತ್ತು ವಿಷಕಾರಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಆಗಾಗ್ಗೆ ಮೀನುಗಾರರು ಮತ್ತು ಸಮುದ್ರ ತೀರದಲ್ಲಿ ವಾಸಿಸುವ ಜನರು ಸಮುದ್ರತೀರಗಳನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಛವಾಗಿಡಲು ತಿಂಗಳಿಗೆ ಒಂದು ದಿನವಾದರೂ ಶ್ರಮವಹಿಸುವ ಪರಿಪಾಠವನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ನೇಹ ಕುಂಜದ ಡಾ. ನಾರಾಯಣ ಹೆಗಡೆ ಮಾತನಾಡಿ ನಮ್ಮ ಸುತ್ತ ಮುತ್ತಲಿನ ಪರಿಸರ ಮತ್ತು ಸಮುದ್ರ ತೀರಗಳನ್ನು ಸ್ವಚ್ಛ ಮತ್ತು ಸುಂದರವಾಗಿ ಉಳಿಸಿಕೊಳ್ಳುವ ಅನಿವಾರ್ಯತೆ ಇದ್ದು ಜನಜಾಗೃತಿಯ ಉದ್ದೇಶದಿಂದ ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾದಿನದ ಅಂಗವಾಗಿ ಇಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸ್ಥಳೀಯರಿಂದ ಉತ್ತಮ ಸ್ಪಂದನೆ ದೊರೆತಿರುವದು ಉತ್ತಮ ಬೆಳವಣಿಗೆ ಎಂದರು. ಕಡಲವಿಜ್ಞಾನಿ ಡಾ. ಪ್ರಕಾಶ ಮೇಸ್ತ ಕಾರ್ಯಕ್ರಮ ಸಂಯೋಜಿಸಿ ನಿರ್ವಹಣೆ ಮಾಡಿದರು.
Leave a Comment