ಹೊನ್ನಾವರ : ಕೆಳಗಿನೂರಿನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 375 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.
ತಾಲೂಕಾ ಒಕ್ಕಲಿಗರ ಸಂಘ ಹೊನ್ನಾವರ ಇವರ ಆಶ್ರಯದಲ್ಲಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಉತ್ತರಕನ್ನಡದ ಸಹಭಾಗಿತ್ವದಲ್ಲಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ಇವರ ನೇತೃತ್ವದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ ತಾಲೂಕಿನ ನಾನಾ ಭಾಗದಿಂದ ಸುಮಾರು 375 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರರೂ ಕಾರ್ಯಕ್ರಮದ ಮಾರ್ಗದರ್ಶಕರೂ ಆದ ಜಿ.ಯು.ಭಟ್ಟ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ವೈಯ್ಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜಕ್ಕೂ ಏನಾದರೂ ಒಳ್ಳೆಯದನ್ನು ಕೊಡಬೇಕು ಎನ್ನುವ ಮನಸ್ಥಿತಿಯನ್ನು ಎಲ್ಲರೂ ಹೊಂದಬೇಕು.
ಒಕ್ಕಲಿಗರ ಸಂಘದ ಸಾಮರ್ಥ್ಯ ಏನು ಎನ್ನುವುದು ನನಗೆ ತಿಳಿದಿತ್ತು. ಈ ಕಾರ್ಯಕ್ರಮವನ್ನು ಅವರು ಯಶಸ್ವಿಯಾಗಿಸುತ್ತಾರೆ ಎನ್ನುವ ನಂಬಿಕೆ ಇತ್ತು ಅದು ಮೊದಲ ಕಾರ್ಯಕ್ರಮದಲ್ಲಿಯೇ ಸಾಬೀತಾಗಿದೆ ಮುಂದೆಯೂ ಸಂಘ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುಂದುವರಿಯಲಿ ಎಂದು ಹಾರೈಸಿದರು.
ಕಸ್ತೂರ್ಬಾ ಮಣಿಪಾಲ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಕ್ಷಮಾ ರೈ ಅವರ ನೇತೃತ್ವದ 15 ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ವೈದ್ಯಕೀಯ ತಂಡ ನಿರಂತರ ಆರು ತಾಸುಗಳಿಗೂ ಹೆಚ್ಚು ಕಾಲ ಶಿಬಿರಾರ್ಥಿಗಳನ್ನು ಪರೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಶಿಬಿರದ ನೇತೃತ್ವ ವಹಿಸಿದ್ದ ನೇತ್ರ ತಜ್ಞರಾದ ಡಾ.ಕ್ಷಮಾ ರೈ ಅವರು ಮಾತನಾಡಿ ಕಣ್ಣಿಗೆ ಪೊರೆ ಬಂದು ದೃಷ್ಟಿ ಮಂಜಾಗಿದ್ದರೆ ಅಂತವರನ್ನು ಮಣಿಪಾಲ್ ಗೆ ಕರೆಸಿಕೊಂಡು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತೇವೆ, ಸಕ್ಕರೆ ಖಾಯಿಲೆ, ರಕ್ತದೊತ್ತಡದಂತ ಸಮಸ್ಯೆಯಿಂದ ಬಳಲುತ್ತಿರುವವರು ಅದನ್ನೆಲ್ಲಾ ಕಡಿಮೆ ಮಾಡಿಕೊಂಡು ಬಂದು ಸಹ ಚಿಕಿತ್ಸೆ ಪಡೆಯಬಹುದು ಎಂದರು.
ಹೊನ್ನಾವರ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿ ಅವರು ಒಕ್ಕಲಿಗರ ಸಮಾಜ ಆದಿಚುಂಚನಗಿರಿ ಶ್ರೀ ಮಠಧ ಮಾರ್ಗದರ್ಶನದಲ್ಲಿ ಅಭ್ಯುದಯ ಹೊಂದುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ, ಸರ್ಕಾರದಿಂದ ಸಾರ್ವಜನಿಕರಿಗೆ ಯಾವೆಲ್ಲಾ ಸವಲತ್ತುಗಳು ಸಿಗಲಿದೆಯೋ ಅದನ್ನೆಲ್ಲಾ ಒದಗಿಸಿಕೊಡಲು ನಾವು ಯಾವತ್ತೂ ಉತ್ಸುಕರಾಗಿದ್ದೇವೆ ಎಂದರು.
375 ಮಂದಿಯಲ್ಲಿ 61 ಮಂದಿಯನ್ನು ಕಣ್ಣಿನ ಪೊರೆ ನಿವಾರಣಾ ಚಿಕಿತ್ಸೆಗೆ ಅರ್ಹರೆಂದು ಆಯ್ಕೆಮಾಡಿಕೊಂಡು ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಬರಲು ತಿಳಿಸಲಾಯಿತು. ದಿನಾಂಕ 08-11-2021 ಮತ್ತು 12-11-2021 ಎರಡು ದಿನ ಕ್ಯಾಂಪ್ ಮಾಡಿ ಚಿಕಿತ್ಸೆಗೆ ಆಯ್ಕೆಯಾದವರನ್ನು ಸಂಸ್ಥೆಯ ಬಸ್ ಮೂಲಕ ಮಣಿಪಾಲಕ್ಕೆ ಕರೆಯಿಸಿಕೊಂಡು ಚಿಕಿತ್ಸೆ ನೀಡಿ ಪುನ: ಕರೆತಂದು ಬಿಡಲಾಗುವುದು ಎಂದು ತಿಳಿಸಿದರು.
shri devaki krishna wash point karki naka honavar contact; sachin mesta 9538529046,8310014860
ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ತಿಮ್ಮಪ್ಪ.ಜಿ.ಗೌಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ತಾಲೂಕಾಸ್ಪತ್ರೆಯ ವೈದ್ಯರಾದ ಡಾ.ರಮೇಶ ಗೌಡ, ಜಿಲ್ಲಾಪಂಚಾಯತ ಮಾಜಿ ಸದಸ್ಯರಾದ ಕೃಷ್ಣ.ಜೆ.ಗೌಡ, ಕೆಳಗಿನೂರು ವಿ.ಎಸ್.ಎಸ್.ಅಧ್ಯಕ್ಷರಾದ ಗಣಪಯ್ಯ.ಕೆ.ಗೌಡ ಮುಗಳಿ,ಮಣಿಪಾಲ್ ಆಸ್ಪತ್ರೆಯ ಸಂಯೋಜನಾಧಿಕಾರಿ ರಾಜೇಂದ್ರ ನಾಯ್ಕ, ಮಹಾಬಲ ಗೌಡ ಹಕ್ಕಲಕೇರಿ ಮುಂತಾದವರು ಉಪಸ್ಥಿತರಿದ್ದರು.
ಸಂಘದ ಖಜಾಂಚಿ ದಯಾನಂದ ಗೌಡ ಪ್ರಾಸ್ಥಾವಿಕವಾಗಿ ಮಾತನಾಡಿದರು, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ವಂದಿಸಿದರು, ಸಂಘದ ನಿರ್ದೇಶಕ ಲಕ್ಷ್ಮೀಕಾಂತ ಗೌಡ ಸ್ವಾಗತಿಸಿ ನಿರ್ವಹಿಸಿದರು. ಸಂಘದ ನಿರ್ದೇಶಕರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
Leave a Comment