ಯಲ್ಲಾಪುರ :ಪೊಲೀಸ್ ಠಾಣೆ ಜನರಿಗೆ ಹತ್ತಿರವಾಗುತ್ತಿದ್ದು ಜನಸ್ನೇಹಿ ವಾತಾವರಣ ಸೃಷ್ಟಿಯಾಗುತ್ತಿದೆ. ಬಹಳಷ್ಟು ಜನರು ಪೊಲೀಸ್ ಠಾಣೆ ಎಂದರೆ, ಭಯ ಪಡುತ್ತಾರೆ ಅಂತಹವರಿಗೆ ಪೊಲೀಸ್ ಠಾಣೆ ಎಂದರೆ ನಿಮ್ಮ ರಕ್ಷಣೆಗಾಗಿಯೇ ಇರುವ ವಿಶ್ವಾಸದ ಕೇಂದ್ರ ಎಂಬುದು ತಿಳಿಸಬೇಕಿದೆ. ಅದರ ಪರಿಕಲ್ಪನೆಯೇ “ತೆರೆದ ಮನೆ” ಕಾರ್ಯಕ್ರಮ ಇದನ್ನು ಇನ್ನೂ ಹೆಚ್ಚಿನದಾಗಿ ಜನರ ಮಧ್ಯೆ ಕೊಂಡೊ ವ ದೃಷ್ಟಿಯಿಂದ ಶಾಲಾ ಹಂತಕ್ಕೆ ತಲುಪಿಸುವ ವಿಶೇಷ ಪ್ರಯತ್ನ ಸಾಗಿದೆ ಎಂದು ಪಿ.ಐ ಸುರೇಶ್ ಯಳ್ಳೂರ್ ಹೇಳಿದರು.
ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಮತ್ತು ಕರ್ತವ್ಯದ ಕುರಿತು ಅರಿವು ಮೂಡಿಸುವ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪರಿಚಿತರೊಂದಿಗಿನ ಒಡನಾಟ ಒಳ್ಳೆದಲ್ಲ, ಅನುಮಾನಾಸ್ಪದ ನಡೆ ಕಂಡುಬಂದಲ್ಲಿ ಮೊದಲು ಶಿಕ್ಷಕರಿಗೆ ಮಾಹಿತಿನೀಡಬೇಕು. ಅಲ್ಲದೇ ತಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸುವುದು ಅಪಾಯಕಾರಿ ಎಂದು ಪಿ.ಎಸ್.ಐ ಮಂಜುನಾಥ ಗೌಡರ್ ಹೇಳಿದರು.
ವಿಶ್ವದರ್ಶನ ಶಾಲೆಯ ಮಕ್ಕಳು ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ಠಾಣೆಯಲ್ಲಿನ ವ್ಯವಸ್ಥೆ ಸಿಬ್ಬಂದಿಗಳ ಕರ್ತವ್ಯ, ತಾತ್ಕಾಲಿಕ ಸೆಲ್ ಬೇಡಿ, ಬಂದೂಕು, ಪ್ರಥಮ ಮಾಹಿತಿ ಬಗ್ಗೆ ತಿಳಿದುಕೊಂಡರು. ಮಕ್ಕಳ ಮೇಲಿನ ದೌರ್ಜನ್ಯ, ಸೈಬರ್ ಕ್ರೈಮ್, ಪೋಕೋ ಪ್ರಕರಣ, ರಸ್ತೆ ನಿಯಮಗಳ ಪಾಲನೆ ಕುರಿತು ವಿವರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪೊಲೀಸ್ ಠಾಣೆಯ ಬಗೆಗಿನ ಭಯದ ಕಲ್ಪನೆ ಹೋಗಲಾಡಿಸಿ ಇದೊಂದು ಸಾರ್ವಜನಿಕ ಸೇವಾ ಕೇಂದ್ರ ಎಂಬ ಭಾವನೆ ಮೂಡಿಸಲಾಯಿತು.
Leave a Comment